ಧರ್ಮ ಜಾಗೃತಿ ಮತ್ತು ಸಮಾಜ ಸುಧಾರಣೆಗೆ ಧರ್ಮಸ್ಥಳ ಮಾದರಿ ಕ್ಷೇತ್ರ: ರಾಮಪ್ರಭು ಚಂದ್ರಹಾಸ ಮಹಾರಾಜ್

ಧರ್ಮಸ್ಥಳ: ಧರ್ಮ ಪ್ರಭಾವನೆಯೊಂದಿಗೆ ಧರ್ಮ ಜಾಗೃತಿ ಹಾಗೂ ಆಧ್ಯಾತ್ಮದ ಮೂಲಕ ಸಮಾಜ ಸುಧಾರಣೆಗೆ ಧರ್ಮಸ್ಥಳ ಇತರ ಎಲ್ಲಾ ದೇವಸ್ಥಾನಗಳಿಗೆ ಮಾದರಿ ಕ್ಷೇತ್ರವಾಗಿದೆ ಎಂದು ಚೆನ್ನೈನ ಇಸ್ಕಾನ್‌ನ ರಾಮಪ್ರಭು ಚಂದ್ರಹಾಸ ಮಹಾರಾಜ್ ಹೇಳಿದರು.

ಅವರು ನಿನ್ನೆ ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ 50ನೇ ವರ್ಷದ ಪುರಾಣ ವಾಚನ – ಪ್ರವಚನ ಕಾರ್ಯಕ್ರಮದ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಆದರ್ಶ ವ್ಯಕ್ತಿತ್ವ ಮತ್ತು ಮಾರ್ಗದರ್ಶನ ನಮಗೆಲ್ಲರಿಗೂ ಪ್ರೇರಕ ಶಕ್ತಿಯಾಗಿದೆ. ಡಾ.‌ಹೆಗ್ಗಡೆಯವರ ದೂರದರ್ಶಿತ್ವದಿಂದ ಧರ್ಮಸ್ಥಳದಲ್ಲಿ ನಿತ್ಯವೂ ನಡೆಯುತ್ತಿರುವ ಅನ್ನದಾನ, ವಿದ್ಯಾದಾನ, ಅಭಯದಾನ ಮತ್ತು ಔಷಧದಾನ ಎಂಬ ಚತುರ್ವಿದ ದಾನ ಪರಂಪರೆಯೊಂದಿಗೆ ಪುರಾಣ ವಾಚನ – ಪ್ರವಚನವು ಜ್ಞಾನ ದಾಸೋಹದ ಮಹಾ ಯಜ್ಞ ವಾಗಿದೆ ಎಂದು ಶ್ಲಾಘಿಸಿ ಅಭಿನಂದಿಸಿದರು. ಪುರಾಣ ವಾಚನ – ಪ್ರವಚನ ಇಂದು ಅತೀ ಅಗತ್ಯವಾಗಿದ್ದು ಇದರಿಂದ ಜೀವನ ಶೈಲಿ ಸುಧಾರಣೆಯೊಂದಿಗೆ ಮಾನಸಿಕ ಶಾಂತಿ ಮತ್ತು ನೆಮ್ಮದಿ ಸಿಗುತ್ತದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

READ ALSO

ರನ್ನನ ಗದಾಯುದ್ಧದಲ್ಲಿ ದುರ್ಯೋಧನ ವಿಲಾಪ ಕುರಿತು ವಿದ್ವಾನ್ ಉಮಾಕಾಂತ ಭಟ್ ವಾಚನ ಮಾಡಿದರು. ಗಮಕಿ ತೆಕ್ಕಕೆರೆ ಸುಬ್ರಹ್ಮಣ್ಯ ಭಟ್ ಪ್ರವಚನ ಮಾಡಿದರು.

ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹಷೇಂದ್ರ ಕುಮಾರ್ ಉಪಸ್ಥಿತರಿದ್ದರು.

ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ, ದೇವಳದ ಪಾರುಪತ್ಯಗಾರ್ ಲಕ್ಷ್ಮೀನಾರಾಯಣ ರಾವ್ ಕಾರ್ಯಕ್ರಮದ ಸುಗಮ ವ್ಯವಸ್ಥೆಯಲ್ಲಿ ಸಹಕರಿಸಿದರು. ಉಜಿರೆ ಅಶೋಕ ಭಟ್ ಸ್ವಾಗತಿಸಿದರು. ಶ್ರೀನಿವಾಸ್ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.