ಉಡುಪಿ: ಬೆಳ್ಳಂಬೆಳಗ್ಗೆ ಉಡುಪಿಯ ಜನರನ್ನು ಬೆಚ್ಚಿ ಬೀಳಿಸಿದ್ದ ಸುಟ್ಟ ಕಾರಿನಲ್ಲಿ ಮೃತದೇಹಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿ ಲಭ್ಯವಾಗಿದೆ.
ಕಾರಿನಲ್ಲಿ ಸುಟ್ಟು ಕರಕಲಾದ ಜೋಡಿಯ ಮಾಹಿತಿ ಲಭ್ಯವಾಗಿದೆ. ಮೃತರನ್ನು ಯಶವಂತ್ ಮತ್ತು ಜ್ಯೋತಿ ಎಂದು ಗುರುತಿಸಲಾಗಿದ್ದು, ಇವರು ಬೆಂಗಳೂರಿನ ಆರ್.ಟಿ.ನಗರದವರು ಎಂದು ತಿಳಿದುಬಂದಿದೆ. ಜ್ಯೋತಿ ಹಾಗೂ ಯಶವಂತ್ ಕಾರಿನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇವರಿಬ್ಬರು ಕಳೆದು ಮೂರು ದಿನಗಳಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ನಾಪತ್ತೆ ಪ್ರಕರಣ ಕೂಡ ದಾಖಲಾಗಿತ್ತು. ಮೃತರು ನಿನ್ನೆ (ಮೇ 21) ಮಂಗಳೂರಿಗೆ ಬಂದು ಹುಸೇನ್ ಎಂಬವರಿಂದ ಸ್ವಿಫ್ಟ್ ಕಾರು ಬಾಡಿಗೆ ಪಡೆದಿದ್ದರು. ಕಾರು ಬಾಡಿಗೆ ಪಡೆದು ಉಡುಪಿಗೆ ಬಂದಿದ್ದರು. ಹೀಗೆ ಬಂದವರು ಕಾರಿನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಳೆದ 3 ದಿನಗಳ ಹಿಂದೆ ಯಶವಂತ್ ಮತ್ತು ಜ್ಯೋತಿ ನಾಪತ್ತೆಯಾಗಿರುವ ಬಗ್ಗೆ ಬೆಂಗಳೂರಿನ ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆಯಲ್ಲಿ ಸ್ವಿಫ್ಟ್ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.