
ಬಂಟ್ವಾಳ: ಮಂಗಳೂರಿನಲ್ಲಿ ಹೈ ಕೋರ್ಟ್ ಪೀಠ ಸ್ಥಾಪನೆ ಯಾಗಬೇಕೆಂದು ಆಗ್ರಹಿಸಿ ಬಿಸಿ ರೋಡ್ ನಲ್ಲಿ ಗುರುವಾರ ವಕೀಲರ ಸಂಘ (ರಿ), ಬಂಟ್ವಾಳ ಮತ್ತು ಸಾರ್ವಜನಿಕರ ಸಹಯೋಗದಲ್ಲಿ ಪೋಸ್ಟ್ ಕಾರ್ಡ್ ಚಳವಳಿ ನಡೆಯಿತು.

ಬಂಟ್ವಾಳದ ಹಿರಿಯ ವಕೀಲರು ಹಾಗೂ ವಕೀಲರ ಸಂಘ (ರಿ), ಬಂಟ್ವಾಳದ ಮಾಜಿ ಅಧ್ಯಕ್ಷರು ಆದ ಪಿ ಜಯರಾಮ್ ರೈ ಅವರು ಪೋಸ್ಟ್ ಕಾರ್ಡ್ ಚಳಿವಳಿಗೆ ಚಾಲನೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ವಕೀಲರ ಸಂಘದ ಜಿಲ್ಲಾಧ್ಯಕ್ಷರು ಹಾಗೂ ವಕೀಲರ ಸಂಘ (ರಿ), ಬಂಟ್ವಾಳ ಇದರ ಅಧ್ಯಕ್ಷರು ಶ್ರೀ ರಿಚರ್ಡ್ ಕೊಸ್ತಾ ಎಂ ರವರು ಪೋಸ್ಟ್ ಕಾರ್ಡ್ ಚಳವಳಿಯನ್ನು ಉದ್ದೇಶಿಸಿ ಮಾತನಾಡುತ್ತಾ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಂಗಳೂರು, ಜಿಲ್ಲೆಗಳಿಗೆ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಹೈ ಕೋರ್ಟ್ ಪೀಠ ರಚನೆಯಾಗ ಬೇಕೆಂಬುದು ಎರಡು ದಶಕಗಳ ಹಿಂದೆ ಮಂಗಳೂರಿನ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಎಸ್.ಪಿ. ಚಂಗಪ್ಪರವರ ನೇತೃತ್ವದಲ್ಲಿ ಹೋರಾಟ ಪ್ರಾರಂಭವಾಗಿದ್ದು, ಪ್ರಸ್ತುತ ಒಂದುವರೆ ವರ್ಷಗಳಿಂದ ಮಂಗಳೂರಿನ ಈಗಿನ ಅಧ್ಯಕ್ಷರಾದ H V ರಾಘವೇಂದ್ರ ರವರ ನೇತೃತ್ವ ದಲ್ಲಿ ಇದಕ್ಕೆ ಮತ್ತೆ ವೇಗ ಸಿಕ್ಕಿದ್ದು, ಅದರ ಮುಂದುವರಿದ ಹೋರಾಟದ ಅಂಗವಾಗಿ ಪೋಸ್ಟ್ ಕಾರ್ಡ್ ಅಭಿಯಾನ ಇಂದು ಉಡುಪಿ ಮತ್ತು ಮಂಗಳೂರು ಜಿಲ್ಲೆಯ ಎಲ್ಲಾ ವಕೀಲರ ಸಂಘಗಳ ಸಹಯೋಗದಲ್ಲಿ ಏಕ ಕಾಲದಲ್ಲಿ ನಡೆಯುತ್ತಿದೆ.
ಹೈ ಕೋರ್ಟ್ ಪೀಠ ರಚನೆಗೆ ಮಂಗಳೂರಿನಲ್ಲಿ ಜಾಗ ಗುರುತಿಸಿದ್ದು, ಸರಕಾರ ಮತ್ತು ರಾಜ್ಯಪಾಲರಿಗೆ ಒತ್ತಾಯಿಸುವ ನಿಟ್ಟಿನಲ್ಲಿ ಅಭಿಯಾನ ಮತ್ತು ಹೋರಾಟಗಳು ಪ್ರಾರಂಭವಾಗಿದ್ದು, ಈ ಹೋರಾಟಕ್ಕೆ ಎಲ್ಲಾ ಸಂಘ ಸಂಸ್ಥೆ ಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯ ಕಿರಿಯ ವಕೀಲ ಮಿತ್ರರು, ಸಾರ್ವಜನಿಕರು, ಪೋಸ್ಟ್ ಕಾರ್ಡ್ ಅಭಿಯಾನ ದಲ್ಲಿ ಭಾಗವಹಿಸಿದರು.