ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯಕ್ಕೆ ಒಳಪಟ್ಟ ಕಾಲೇಜಿನಲ್ಲಿ ಫಲಿತಾಂಶ ತಡವಾಗಿ ಪ್ರಕಟಿಸುವುದರಿಂದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗುತ್ತಿದೆ.
ವಿಶ್ವವಿದ್ಯಾಲಯದ ಫಲಿತಾಂಶಗಳು ತಡವಾಗಿ ಬರುತ್ತಿರುವುದರಿಂದ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಬೇರೆ ವಿಶ್ವವಿದ್ಯಾಲಯದಲ್ಲಿ ತಮ್ಮ ವಿದ್ಯಾಭ್ಯಾಸ ನಡೆಸಲು ಸಾಧ್ಯವಾಗುತ್ತಿಲ್ಲ ಹಾಗೂ ಮೊದಲ ಸೆಮಿಸ್ಟರ್ ನಿಂದ ಆರನೇ ಸೆಮಿಸ್ಟರ್ ವರೆಗೂ ಯಾವುದೇ ರೀತಿಯ ಅಂಕಪಟ್ಟಿಯನ್ನು ವಿದ್ಯಾರ್ಥಿಗಳಿಗೆ ನೀಡುತ್ತಿಲ್ಲ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ.
ಹಲವು ಸಂದರ್ಭಗಳಲ್ಲಿ ಫಲಿತಾಂಶ ನೀಡಿದರೂ ಹಲವು ವಿದ್ಯಾರ್ಥಿಗಳಿಗೆ ಫಲಿತಾಂಶವೇ ಲಭ್ಯವಾಗುತ್ತಿಲ್ಲ ವಿಶ್ವವಿದ್ಯಾಲಯವನ್ನು ಸಂಪರ್ಕಿಸಿದರೆ ಯಾವುದೇ ರೀತಿಯ ಸ್ಪಂದನೆಯನ್ನು ಮಾಡುತ್ತಿಲ್ಲವೆಂದು ಮತ್ತು ವಿಶ್ವವಿದ್ಯಾಲಯದ ಬೇಜವಾಬ್ದಾರಿಯಿಂದ ಬಹಳಷ್ಟು ವಿದ್ಯಾರ್ಥಿಗಳು ಒಂದು ವರ್ಷ ಮನೆಯಲ್ಲಿ ವಿದ್ಯಾಭ್ಯಾಸಕ್ಕಾಗಿ ಕಾಯಬೇಕಾಗಿರುವ ಪರಿಸ್ಥಿತಿ ಬಂದಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕೊರೊನಾ ನಂತರ ಹಲವು ವಿವಿಗಳ ಶೈಕ್ಷಣಿಕ ವೇಳಾಪಟ್ಟಿ ಯಲ್ಲಿ ಏರುಪೇರಾಗಿದೆ. ಇದಕ್ಕೆ ಕುವೆಂಪು ಹಾಗೂ ಕಾನೂನು ವಿವಿಯೂ ಹೊರತಾಗಿಲ್ಲ. ಇತರೆ ವಿವಿಗಳ ಪರೀಕ್ಷೆ ಮುಗಿದು, ಫಲಿತಾಂಶ ಪ್ರಕಟವಾಗಿ, ಪುನಃ ತರಗತಿಗಳು ಪ್ರಾರಂಭವಾಗಿವೆ. ಆದರೆ ಕುವೆಂಪು ವಿವಿ ಸೆ.25ರಂದು ಫಲಿತಾಂಶ ಪ್ರಕಟಿಸಿದೆ.ಫಲಿತಾಂಶ ಪ್ರಕಟಿಸಿ ಒಂದು ವಾರಗಳಾದರು ಕೆಲವು ವಿದ್ಯಾರ್ಥಿಗಳಿಗೆ ಲಭ್ಯವಾಗಿಲ್ಲ, ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿದೆ. ಹಾಗೂ ಮರು ಎಣಿಕೆಯ ಫಲಿತಾಂಶಗಳು ೬ ತಿಂಗಳಿಂದಲೂ ಪ್ರಕಟವಾಗಿಲ್ಲ ನಮ್ಮ ಭವಿಷ್ಯ ಅತಂತ್ರವಾಗಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇತ್ತ ಕಾನೂನು ವಿವಿ ತನ್ನ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಶಿಸ್ತು ಪಾಲಿಸುವ ಉದ್ದೇಶದಿಂದ ಕಾನೂನು ಪದವಿ ಪ್ರವೇಶಕ್ಕೆ ಆಗಸ್ಟ್ 30 ಕೊನೇ ದಿನ ಎಂದು ಸುತ್ತೋಲೆಯಲ್ಲಿ ಘೋಷಿಸಿತ್ತು. ನಂತರ ಪ್ರವೇಶಾತಿ ಅವಧಿಯನ್ನು ಸೆ.17ಕ್ಕೆ ಒಮ್ಮೆ, ಮತ್ತೊಮ್ಮೆ ಸೆ.25ರ ವರೆಗೆ ವಿಸ್ತರಣೆ ಮಾಡಿತ್ತು.ಕುವೆಂಪು ವಿವಿಯೂ ಅಂತಿಮ ಪದವಿಯ ಫಲಿತಾಂಶ ವನ್ನು ಸೆ.25ರಂದ ಪ್ರಕಟಿಸಿತ್ತು. ಇದರಿಂದ ವಿದ್ಯಾರ್ಥಿಗಳು ಕಾನೂನು ಪದವಿಗೆ ಅರ್ಜಿ ಹಾಕಲು ಸಾಧ್ಯವಾಗಿಲ್ಲ. ಆದರೆ ಇತರೆ ವಿವಿಗಳ ವಿದ್ಯಾರ್ಥಿಗಳು ಕಾನೂನು ಪದವಿಗೆ ಅರ್ಜಿ ಸಲ್ಲಿಸಿ, ಪ್ರವೇಶವನ್ನೂ ಪಡೆದಿದ್ದಾರೆ.
ಕೆಲವರು ಕಾನೂನು ಪದವಿಗೆ ದಾಖಲಾಗಿದ್ದಾರೆ ಎನ್ನುವುದನ್ನು ಹೊರತುಪಡಿಸಿದರೆ, ಈ ಬಾರಿ ಉತ್ತೀರ್ಣನಾದ ಯಾವೊಬ್ಬ ವಿದ್ಯಾರ್ಥಿಯೂ ಫಲಿತಾಂಶ ವಿಳಂಬ ಕಾರಣ ಕೆಎಸ್ಎಲ್ಯುಗೆ ದಾಖಲಾಗಲು ಸಾಧ್ಯವಾಗಿಲ್ಲ.ಕುವೆಂಪು ವಿವಿ ಮತ್ತು ಕಾನೂನು ವಿವಿಯ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಇದರ ಜತೆಗೆ ಫಲಿತಾಂಶ ವಿಳಂಬದಿಂದ ಕಾನೂನು ಪದವಿ ಪ್ರವೇಶ ಪಡೆಯುವ ಸಾವಿರಾರು ಜನ ಕುವೆಂಪು ವಿವಿ ವಿದ್ಯಾರ್ಥಿಗಳ ಕನಸು ಕಮರಿದೆ.
ಕಾನೂನು ವಿವಿ ನಿಯಮ ಪಾಲನೆ ಮಾಡಬೇಕಿರುವುದರಿಂದ ಪ್ರತಿಭಾವಂತರಿಗೂ ಫಲಿತಾಂಶ ವಿಳಂಬ, ವಿವಿಗಳ ವೇಳಾಪಟ್ಟಿಯಲ್ಲಿ ಸಾಮ್ಯತೆ ಇಲ್ಲದಿರುವ ಕಾರಣ, ಕಾನೂನು ಪದವಿ ಪಡೆದು ನ್ಯಾಯಾಧೀಶರು, ವಕೀಲರು ಆಗಬೇಕು ಎಂಬ ಕನಸು ಹೊತ್ತಿದ್ದ ಸಾವಿರಾರು ವಿದ್ಯಾರ್ಥಿಗಳು ತಮ್ಮ ಕನಸು ಸಾಕಾರಗೊಳ್ಳಲು ಅನಿವಾರ್ಯವಾಗಿ ಮುಂದಿನ ವರ್ಷದವರೆಗೆ ಕಾಯಬೇಕಿದೆ.
ಕೆಎಸ್ಎಲ್ಯು ನಿಯಮದಂತೆ ಪ್ರವೇಶ ಪ್ರಕ್ರಿಯೆ ಮುಕ್ತಾಯವಾಗಿದೆ. ಇದರ ಅಧೀನದಲ್ಲಿನ ಕಾನೂನು ಕಾಲೇಜುಗಳು ನೇರವಾಗಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವಂತಿಲ್ಲ. ಇದರಿಂದ ಮೆರಿಟ್ ಕೋಟಾದಲ್ಲಿ ಸೀಟು ಪಡೆಯುವಷ್ಟು ಅಂಕ ಪಡೆದಿದ್ದ ಪ್ರತಿಭಾವಂತ ವಿದ್ಯಾರ್ಥಿಗಳು ಸಹ ಕಣ್ಣೀರು ಹಾಕುವಂತಾಗಿದೆ. ಉನ್ನತ ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಂಡು ಕಾನೂನು ಪದವಿ ಪ್ರವೇಶಕ್ಕೆ ಅವಕಾಶ ಕೊಡಿಸಬೇಕು ಎಂಬುದು ಪ್ರವೇಶ ವಂಚಿತ ವಿದ್ಯಾರ್ಥಿಗಳ ಆಗ್ರಹವಾಗಿದೆ.
ಕಾನೂನು ವಿವಿ ವೇಳಾಪಟ್ಟಿ ಕುವೆಂಪು ವಿವಿ ವೇಳಾಪಟ್ಟಿಗಿಂತ ಬಹಳಷ್ಟು ಮುಂದಿದೆ. ಜತೆಗೆ ಫಲಿತಾಂಶದಲ್ಲೂ ಸ್ವಲ್ಪಮಟ್ಟಿನ ವಿಳಂಬವಾಗಿದೆ. ಕಾನೂನು ಪದವಿ ಪಡೆಯಬೇಕು ಎಂಬ ಆಸೆಯನ್ನು ಬದಿಗಿಡಬೇಕಾದ ಅನಿವಾರ್ಯತೆ ಎದುರಾಗಿದೆ. ಇಲ್ಲವೆ ಒಂದು ವರ್ಷ ಕಾಯಬೇಕಿದೆ. ಸರಕಾರ ಇತ್ತ ಗಮನ ಹರಿಸಿ, ವೇಳಾಪಟ್ಟಿಯ ಗೊಂದಲ ಬಗೆಹರಿಸಿದರೆ, ಮುಂದಿನ ವಿದ್ಯಾರ್ಥಿಗಳಿಗಾದರೂ ಅನುಕೂಲವಾಗುತ್ತದೆ.