ಉಡುಪಿ: ಮೊಬೈಲ್ ನಲ್ಲಿ ಆಟ ಆಡುತ್ತಿದ್ದ ಎಂದು ಮಗನ ಕೈಯಿಂದ ಪೋಷಕರು ಮೊಬೈಲ್ ಕಸಿದುಕೊಂಡಿದ್ದಕ್ಕೆ ಬೇಸರಗೊಂಡ ಬಾಲಕ ತನ್ನ ಫ್ಲಾಟ್ ನ ಬಾತ್ ರೂಮ್ ನಲ್ಲಿ ಚಿಲಕ ಹಾಕಿ ಗಂಟೆಗಟ್ಟಲೆ ಕುಳಿತ ಘಟನೆ ಮಣಿಪಾಲದ ಎಂಐಟಿ ಕ್ಯಾಂಪಸ್ ಪಕ್ಕದ ಎಓನ್ ಅಪಾರ್ಟ್ಮೆಂಟ್ನಲ್ಲಿ ಶನಿವಾರ ನಡೆದಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬಾಲಕನನ್ನು ರಕ್ಷಣೆ ಮಾಡಿದ್ದಾರೆ.
ರಾತ್ರಿಯಿಡೀ ಮೊಬೈಲ್ ಗೇಮ್ ಆಡುತ್ತಿದ್ದ ಮಗನಿಗೆ ತಾಯಿ ಬೈದು ಬುದ್ದಿವಾದ ಹೇಳಿ ಮೊಬೈಲ್ ಕಿತ್ತುಕೊಂಡಿದ್ದರು. ಇದರಿಂದ ಕೋಪಗೊಂಡ ಬಾಲಕ ಶೌಚಾಲಯದ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ. ಎಷ್ಟು ಅಂಗಲಾಚಿದರೂ ಬಾಗಿಲು ತೆರೆಯಲಿಲ್ಲ. ಇದರಿಂದ ಆತಂಕಗೊಂಡ ತಾಯಿ ಕಲಾ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ವಿಚಾರ ತಿಳಿಸಿದರು.
ತಕ್ಷಣ ಸ್ಥಳಕ್ಕೆ ಬಂದ ಸಿಬ್ಬಂದಿ ಹಗ್ಗದ ಸಹಾಯದಿಂದ ನಾಲ್ಕನೇ ಮಹಡಿಯಲ್ಲಿದ್ದ ಶೌಚಾಲಯದ ಕಿಟಕಿ ಮುರಿದು ಒಳ ಪ್ರವೇಶಿಸಿ ಬಾಲಕನನ್ನು ರಕ್ಷಣೆ ಮಾಡಿದರು. ಬಾಲಕ ಆರೋಗ್ಯವಾಗಿದ್ದಾನೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ. ಸದ್ಯ ವಿದ್ಯಾರ್ಥಿಯನ್ನು ಪೋಷಕರು ಹಾಗೂ ಸ್ಥಳೀಯ ನಿವಾಸಿಗಳು ಸಮಾಧಾನ ಪಡಿಸಿದ್ದಾರೆ.