ಕ್ವಾರಂಟೈನ್‌ ದಿನಗಳನ್ನು ವ್ಯರ್ಥ ಮಾಡದೆ ಶಾಲಾ ಪರಿಸರವನ್ನು ಸ್ವಚ್ಛತೆ ಮಾಡಿ ರಾಜ್ಯಕ್ಕೆ ಮಾದರಿಯಾದ ಮುಂಬೈ ಕನ್ನಡಿಗರು

ಬೆಳ್ತಂಗಡಿ: ಮುಂಬೈನಿಂದ ಬಂದು ಮರೋಡಿ ಗ್ರಾಮದ ಮೂರು ಶಾಲೆಗಳಲ್ಲಿ ಕ್ವಾರಂಟೈನ್‌ನಲ್ಲಿದ್ದ ಸುಮಾರು 64 ಮಂದಿಗೆ ಶಾಸಕ ಹರೀಶ್‌ ಪೂಂಜ ಅವರು ಭಾನುವಾರ ತೆಂಗಿನ ಸಸಿಗಳನ್ನು ವಿತರಿಸಿ, ಬೀಳ್ಕೊಟ್ಟರು.

ಕೂಕ್ರಬೆಟ್ಟು ಸರ್ಕಾರಿ ಶಾಲೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಹರೀಶ್‌ ಪೂಂಜ ಮಾತನಾಡಿ, ‘ಈ ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿದ್ದ 25 ಮಂದಿ ಶಾಲೆಗೆ ಹೊಸ ರೂಪವನ್ನು ಕೊಟ್ಟಿದ್ದಾರೆ. ಕ್ವಾರಂಟೈನ್‌ ಅವಧಿಯ ದಿನಗಳನ್ನು ವ್ಯರ್ಥ ಮಾಡದೆ ಶಾಲಾ ಪರಿಸರವನ್ನು ಸ್ವಚ್ಛತೆ ಮಾಡಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಉದ್ಯೋಗ ಅರಸಿ ಪರವೂರಿಗೆ ಹೋದವರು ಸಂಕಷ್ಟಕ್ಕೆ ಸಿಲುಕಿದಾಗ ಅವರಿಗೆ ಸ್ಪಂದಿಸುವುದು ಊರಿನವರು ಕರ್ತವ್ಯ. ಈ ನಿಟ್ಟಿನಲ್ಲಿ ಇಲ್ಲಿನ ಗ್ರಾಮಸ್ಥರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಹೇಳಿದರು.

READ ALSO

ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್‌ ಮಾತನಾಡಿ, ‘ಮುಂಬೈನಲ್ಲಿ ಒಂದೇ ಕುಟುಂಬದಂತೆ ಇದ್ದ 25 ಮಂದಿ ಕೂಕ್ರಬೆಟ್ಟು ಶಾಲೆಗೆ ಬಸ್‌ನಲ್ಲಿ ಬಂದು 14 ದಿನ ಕ್ವಾರಂಟೈನ್‌ ಮುಗಿಸಿದ್ದಾರೆ. ಅವರು ಕೂಕ್ರಬೆಟ್ಟು ಶಾಲೆಯಲ್ಲಿ ಶ್ರಮದಾನದ ಮೂಲಕ ಶಾಲೆಗೆ ವಿಶೇಷ ಮೆರುಗು ನೀಡಿದ್ದಾರೆ. ದಾನಿಗಳ ಸಹಕಾರದಿಂದ ಅವರಿಗೆ ಊಟೋಪಚಾರ ನೀಡಲಾಗಿದೆ. ಮರೋಡಿ ಗ್ರಾಮದಲ್ಲಿ ಕ್ವಾರಂಟೈನ್‌ನಲ್ಲಿದ್ದ ಎಲ್ಲರ ಕೋವಿಡ್‌ ವರದಿ ನೆಗೆಟಿವ್‌ ಬಂದಿದೆ’ ಎಂದರು.

ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ, ಧಾರ್ಮಿಕ ಪರಿಷತ್‌ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ ಮಾತನಾಡಿ, ‘ತುಳುನಾಡಿನ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಮುಂಬೈ ಕನ್ನಡಿಗರ ಕೊಡುಗೆ ಅಪಾರವಾದುದು. ಕೋವಿಡ್‌ನಿಂದಾಗಿ ಮುಂಬೈನಲ್ಲಿ ಸಂಕಷ್ಟ ಎದುರಾದಾಗ ನಮ್ಮವರ ಕಷ್ಟಕ್ಕೆ ಸ್ಪಂದಿಸುವುದು ಮಾನವೀಯತೆ’ ಎಂದು ಹೇಳಿದರು.

ಮರೋಡಿ ಶ್ರೀ ಆದಿಶಕ್ತಿ ಸೇವಾ ಸಮಿತಿಯ ಅಧ್ಯಕ್ಷ ರತ್ನಾಕರ ಬುಣ್ಣಾನ್‌, ಕೂಕ್ರಬೆಟ್ಟು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜುಪೂಜಾರಿ, ಮುಖ್ಯಶಿಕ್ಷಕಿ ಸುಫಲಾ, ಮರೋಡಿ ಗ್ರಾಮ ಪಂಚಾಯಿತಿ ಪಿಡಿಒ ಆಶಾಲತಾ, ಸದಸ್ಯರಾದ ಉಮೇಶ್‌ ಪೂಜಾರಿ, ಪದ್ಮಶ್ರೀ ಜೈನ್‌, ಶಿವಾನಂದ ಆಚಾರ್ಯ, ಬಾರ್ಯ ಸಿ.ಎ. ಬ್ಯಾಂಕ್‌ ಅಧ್ಯಕ್ಷ ಸುಬ್ರಹ್ಮಣ್ಯ ಗೌಡ, ಸದಾನಂದ ಉಂಗಿಲಬೈಲು, ಮಾಜಿ ಅಧ್ಯಕ್ಷ ಬಾಲಕೃಷ್ಣ ಬಂಗೇರ, ಮಹೇಶ್‌ ಪೂಜಾರಿ ಮರೋಡಿ ಮತ್ತಿತರರು ಉಪಸ್ಥಿತರಿದ್ದರು.