ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮದಲ್ಲಿ ಮತ್ತೆ ಭದ್ರತಾ ವೈಫಲ್ಯವಾಗಿದ್ದು, ವ್ಯಕ್ತಿಯೋರ್ವ ವೇದಿಕೆಗೆ ನುಗ್ಗಿ ಬಂದು ಹೈಡ್ರಾಮಾ ನಡೆಸಿರುವ ಘಟನೆ ವಿಧಾನಸೌಧದಲ್ಲಿ ನಡೆದಿದೆ.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂದು ಚಾರಿತ್ರಿಕ ಮಾನವ ಸರಪಳಿ ಚಳವಳಿಯನ್ನು ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ನಲ್ಲಿ ಉದ್ಘಾಟಿಸಿದರು.ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ವ್ಯಕ್ತಿಯೊಬ್ಬ ವೇದಿಕೆಗೆ ಜಂಪ್ ಮಾಡಿದ್ದಾನೆ.
ಶಾಲುಗಳನ್ನು ಹಾಕಿಕೊಂಡಿದ್ದ ವ್ಯಕ್ತಿ ಏಕಾಏಕಿ ವೇದಿಕೆಗೆ ನುಗ್ಗಿ ಬಂದಿದ್ದಾನೆ. ಅರೇಕ್ಷಣ ಸಿಎಂ ಹಾಗೂ ಸಚಿವರು ಗಾಬರಿಯಾಗಿದ್ದಾರೆ. ತಕ್ಷಣ ಎಚ್ಚೆತ್ತ ಭದ್ರತಾ ಸಿಬ್ಬಂದಿ, ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ.
ಆದಾಗ್ಯೂ ಯುವಕ ತನ್ನ ಬಳಿ ಇದ್ದ ಶಾಲನ್ನು ತೆಗೆದು ಸಿಎಂ ಕಡೆ ಎಸೆದು ಹೈಡ್ರಾಮ ಮಾಡಿದ್ದಾನೆ. ಸದ್ಯ ವ್ಯಕ್ತಿಯನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ.