ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಾರ್ಷಿಕ ವಿಷು ಜಾತ್ರಾ ಮಹೋತ್ಸವವು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆಯವರ ನೇತೃತ್ವದಲ್ಲಿ ಏಪ್ರಿಲ್ 14ರಿಂದ ಪ್ರಾರಂಭವಾಗಿ ಏಪ್ರಿಲ್ 21ರಂದು ಮಂಗಳವಾರ ಬ್ರಹ್ಮರಥೋತ್ಸವದ ಸಂಭ್ರಮದೊಂದಿಗೆ ವಿಜೃಂಭಣೆಯಿಂದ ನೆರವೇರಿತು.

ರಾತ್ರಿ ಒಳಾಂಗಣದಲ್ಲಿ ಶ್ರೀ ದೇವರ ಉತ್ಸವ ಮೂರ್ತಿಯ ಸುತ್ತುಬಲಿ ನಡೆದು ದೇವಸ್ಥಾನ ಹಾಗೂ ರಥಕ್ಕೆ ಪ್ರದಕ್ಷಿಣೆ ಬಂದು ರಥಾರೋಹಣ ನಡೆಯಿತು. ಆನೆಗಳು, ಬಸವ, ಚೆಂಡೆ ಬಳಗ ಹಾಗೂ ಸ್ಯಾಕ್ಸೋಫೋನ್ ವಾದ್ಯಮೇಳದ ನಾದಗಳ ನಡುವೆ ಸಹಸ್ರಾರು ಭಕ್ತರು “ಗೋವಿಂದಾ” ನಾಮಸ್ಮರಣೆಯೊಂದಿಗೆ ಬ್ರಹ್ಮರಥವನ್ನು ಅಣ್ಣಪ್ಪಗುಡಿಯ ಮುಂಭಾಗದವರೆಗೆ ಎಳೆದು ಮರಳಿ ಸ್ವಸ್ಥಾನಕ್ಕೆ ತಂದರು.ಭಕ್ತರು ರಥಕ್ಕೆ ಬಾಳೆಹಣ್ಣುಗಳನ್ನು ಎಸೆದು ಸ್ವಾಮಿಗೆ ಭಕ್ತಿಪೂರ್ವಕವಾಗಿ ಸಮರ್ಪಿಸಿದರು. ನಂತರ ವಸಂತಮಂಟಪದಲ್ಲಿ ವಸಂತಪೂಜೆ ಮತ್ತು ಅಷ್ಟಾವಧಾನ ಸೇವೆಗಳು ನೆರವೇರಿದವು.
ಏಪ್ರಿಲ್ 22ರಂದು ಸಂಜೆ ಶ್ರೀ ದೇವರು ನೇತ್ರಾವತಿ ನದಿಗೆ ಅವಭೃತ ಸ್ನಾನಕ್ಕೆ ತೆರಳಿ ಮರಳಿ ಬಂದು ದರ್ಶನ ಬಲಿ ಹಾಗೂ ಧ್ವಜಾವರೋಹಣದೊಂದಿಗೆ ಮಹೋತ್ಸವ ಸಂಪನ್ನಗೊಂಡಿತು.
ಡಾ. ಹೇಮಾವತಿ ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಸೇರಿದಂತೆ ಹೆಗ್ಗಡೆ ಕುಟುಂಬಸ್ಥರು, ಸಾವಿರಾರು ಭಕ್ತರು ಹಾಗೂ ಕ್ಷೇತ್ರದ ಸಿಬ್ಬಂದಿ ಈ ಮಹೋತ್ಸವದಲ್ಲಿ ಭಾಗವಹಿಸಿದ್ದರು.





