ಬೆಳಗಾವಿ: ವಿಧಾನಸಭೆಯ ಅಧಿವೇಶನದಲ್ಲಿ ಇಂದು ರಾಜ್ಯದಲ್ಲಿ ಶಿಕ್ಷಕರು ಮತ್ತು ಸರ್ಕಾರಿ ಶಾಲೆಗಳು ಅನುಭವಿಸುತ್ತಿರುವ ಅನೇಕ ಸಮಸ್ಯೆಗಳ ಕುರಿತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾನ್ಯ ಶಿಕ್ಷಣ ಸಚಿವರ ಹಾಗೂ ಸರ್ಕಾರದ ಗಮನ ಸೆಳೆದರು.
ಅತಿಥಿ ಶಿಕ್ಷಕರ ನೇಮಕಾತಿ ಹಾಗೂ ವೇತನದ ತಾರತಮ್ಯವನ್ನು ಸರಿಪಡಿಸಿ ವೇತನವನ್ನು ಪರಿಷ್ಕರಿಸಿ ಅತಿಥಿ ಉಪನ್ಯಾಸಕರಿಗೂ ಒಂದು ಉತ್ತಮ ವೇತನವನ್ನು ನಿಗದಿಪಡಿಸುವಂತೆ ಮಾನ್ಯ ಶಿಕ್ಷಣ ಸಚಿವರ ಮೂಲಕ ಸರ್ಕಾರವನ್ನು ಒತ್ತಾಯಿಸಿದರು ಶಿಕ್ಷಕರನ್ನು ಪಠ್ಯೇತರ ಚಟುವಟಿಕೆಗಳಾದ ಬಿ ಎಲ್ ಓ ಅಥವಾ ಇನ್ನಿತರ ಚಟುವಟಿಕೆಗಳಲ್ಲಿ ಕಡಿಮೆ ತೊಡಗಿಸಿಕೊಳ್ಳುವಂತೆ ಹಾಗೂ ಮಕ್ಕಳಲ್ಲಿರುವ ಮೊಬೈಲ್ ಬಳಕೆ ಹವ್ಯಾಸವನ್ನು ಕಡಿಮೆಗೊಳಿಸುವ ಉದ್ದೇಶದಿಂದ ಮಕ್ಕಳಿಗೆ ಮೊಬೈಲ್ ಮೂಲಕ ಪಠ್ಯವನ್ನು ಬೋಧಿಸುವ ಯೋಜನೆಯನ್ನು ಕೈಬಿಡುವಂತೆಯೂ , ನಲಿಕಲಿ ಶಿಕ್ಷಣ ವ್ಯವಸ್ಥೆಯಿಂದ ಗುಣಮಟ್ಟದ ಶಿಕ್ಷಣಕ್ಕೆ ತೊಂದರೆ ಉಂಟಾಗುತ್ತಿದ್ದು ಈ ಬಗ್ಗೆ ಸರ್ಕಾರ ಗಮನಹರಿಸಿ ನಲಿಕಲಿ ಯೋಜನೆಯನ್ನು ಕೈಬಿಡುವಂತೆ ಹಾಗೂ ಬಹಳ ಮುಖ್ಯವಾಗಿ ಸರ್ಕಾರ ನೀಡುತ್ತಿರುವ ಮೊಟ್ಟೆ ಮತ್ತು ಬಾಳೆಹಣ್ಣಿನ ಅನುದಾನದಲ್ಲಿ ಕೊರತೆಯಾಗುತ್ತಿದ್ದು ಅದು ಶಿಕ್ಷಕರಿಗೆ ಮತ್ತು ಶಾಲಾ ಅಭಿವೃದ್ಧಿ ಸಮಿತಿಗೆ ಹೊರೆಯಾಗಿ ಪರಿಣಮಿಸಿದ್ದು ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡುವ ಉದ್ದೇಶದಿಂದ ಮಾಡಲಾದ ಈ ಯೋಜನೆಗೆ ಹೆಚ್ಚಿನ ಅನುದಾನವನ್ನು ನೀಡುವಂತೆ ಸದನದಲ್ಲಿ ಸರ್ಕಾರವನ್ನು ಶಾಸಕ ಹರೀಶ್ ಪೂಂಜಾ ಒತ್ತಾಯಿಸಿದರು.





