ಕೆ.ಹೊಸಕೋಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಸಕಲೇಶಪುರ ಇದರ ವತಿಯಿಂದ ಶ್ರೀ ಕೆಂಚಾಂಬ ದೇವಸ್ಥಾನ ಹರಿಹಳ್ಳಿ ಕೆ. ಹೊಸಕೋಟೆಯಲ್ಲಿ ಸಾಮೂಹಿಕ ಲಕ್ಷ್ಮೀ ಪೂಜಾ ಕಾರ್ಯಕ್ರಮ ನಡೆಸಲಾಯಿತು.
ತೆಂಕಲಗೂಡು ಬೃಹನ್ಮಠದ ಶ್ರೀ.ಷ.ಬ್ರ.ಚೆನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಗಳು ಸಾಮೂಹಿಕ ಶ್ರೀ ಲಕ್ಷ್ಮಿ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳವು ಬಡವರ ಸೇವೆಗಾಗಿ ಗ್ರಾಮೀಣ ಪ್ರದೇಶದ ಜನರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಮಠ ಮಂದಿರಗಳಿಗೆ, ದೇವಸ್ಥಾನಗಳ ಪುನರುಜ್ಜೀವನಕ್ಕಾಗಿ ಸಹಕಾರ ಮಾಡುವ ಮೂಲಕ ಧಾರ್ಮಿಕ ಕ್ಷೇತ್ರಗಳಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಾ ಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಧಾರ್ಮಿಕ ನಂಬಿಕೆ ಗಳ ಜೊತೆ ಮಕ್ಕಳಿಗೆ ಭಕ್ತಿ ಭಾವಗಳನ್ನು ತುಂಬುವ ಕೆಲಸ ಮಾಡಬೇಕು ತಾಯಿಯನ್ನು ಪೂಜಿಸುವ, ತಾಯಿಯನ್ನು ಗೌರವಿಸುವ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಹಲವು ದೇಶಗಳ ಪೈಕಿ ಭಾರತವನ್ನು ಮಾತ್ರ ನಾವು ತಾಯಿಗೆ ಹೋಲಿಸುತ್ತೇವೆ ಅದೇ ರೀತಿ ಗೌರವಿಸುತ್ತೇವೆ. ನಮ್ಮ ದೇಶ ಸಂಸ್ಕಾರ ಸಂಸ್ಕೃತಿಯಿಂದ ಕೂಡಿದ ದೇಶ ಆದ್ದರಿಂದ ನಾವೆಲ್ಲರೂ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನೇ ತಿಳಿಸಬೇಕೇ ಹೊರತು ಪಾಶ್ಚಾತ್ಯ ಸಂಸ್ಕೃತಿಯೆಡೆಗೆ ವಾಲದಂತೆ ಮುನ್ನಡೆಸುವ ಮಹತ್ತರವಾದ ಜವಾಬ್ದಾರಿ ನಮ್ಮ ಮೇಲಿದೆ. ಸಂಸ್ಕಾರದ ಮೂಲ ತಳಹದಿ ಮಾತೇಯಲ್ಲಿದೆ. ಈ ದೇಹವು ಆತ್ಮೋನ್ನತಿಗಾಗಿ ನಮಗೆ ದೊರೆತ ಮಹತ್ತರ ಅವಕಾಶ ಎಂದರು. ಆತ್ಮವನ್ನು ಪರಮಾತ್ಮನಲ್ಲಿ ವಿಲೀನ ಗೊಳಿಸುವ ಸಾಧನವೇ ಮಾನವನ ದೇಹ. ಇದನ್ನು ಪ್ರತಿಯೊಬ್ಬರೂ ಸದ್ಬಳಕೆ ಮಾಡಿ ಕೊಳ್ಳಬೇಕು. ದೇವರು ನಮಗೆ ಅಮೂಲ್ಯವಾದ ಜೀವನ ಕೊಟ್ಟಿದ್ದಾನೆ. ಆದರೆ ನಾವುಗಳು ಭೌತಿಕ ಸುಖಗಳ ಹಿಂದೆ ಓಡದೆ, ಭಕ್ತಿಯಿಂದ ಪರಮಾತ್ಮನ ಧ್ಯಾನ ಮಾಡುವ ಮೂಲಕ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದರು. ಭಾರತ ವಿಶ್ವಕ್ಕೆ ಗುರು ಸ್ಥಾನವನ್ನು ನೀಡಿದ ಏಕೈಕ ದೇಶವಾಗಿದೆ. ನಮ್ಮ ಸಂಸ್ಕೃತಿ ಮತ್ತು ಧರ್ಮವನ್ನು ಉಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ ದೇವಾಲಯಗಳು ಕೇವಲ ಪೂಜಾ ಕೇಂದ್ರಗಳಲ್ಲ, ಅವು ಸಂಸ್ಕಾರ, ಸಂಸ್ಕೃತಿ ಮತ್ತು ಸಾಮಾಜಿಕ ಏಕತೆಯ ಕೇಂದ್ರಗಳಾಗಿವೆ. ಸಮಾಜದಲ್ಲಿ ಧರ್ಮ ಬೋಧನೆ ಹಾಗೂ ಆಧ್ಯಾತ್ಮಿಕ ಚಿಂತನೆ ಹೆಚ್ಚಿಸಬೇಕು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಯುವ ಪೀಳಿಗೆಯಲ್ಲಿ ಧರ್ಮ, ಶ್ರದ್ಧೆ ಮತ್ತು ಸಂಪ್ರದಾಯಗಳ ಅರಿವು ಮೂಡಿಸಬೇಕು. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಧರ್ಮ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿ ಕೊಂಡಾಗ ಮಾತ್ರ ಸಮಾಜ ಸುಸಂಸ್ಕೃತವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪೂಜಾ ಸಮಿತಿಯ ಅಧ್ಯಕ್ಷರಾದ ಗೋಪಾಲ ಎಚ್ ಡಿ, ಹಾಸನ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಸುರೇಶ್ ಮೊಯ್ಲಿ, ಸಮಿತಿಯಉಪಾಧ್ಯಕ್ಷರಾದ ನಾರಾಯಣ ಶರ್ಮ, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಗಿರೀಶ್ ಮಂಜುನಾಥ್, ಉಮಾನಾಥ ಸುವರ್ಣ, ಸಮಿತಿಯ ಕೋಶಾಧಿಕಾರಿ ಸತ್ಯನಾರಾಯಣ, ಕೆಂಚಾಂಬ ದೇವಸ್ಥಾನದ ಪ್ರಧಾನ ಅರ್ಚಕರಾದ ರಾಮಸ್ವಾಮಿ, ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರಾಜೇಶ್ ಎಂ ಕಾನರ್ಪ, ಮೇಲ್ವಿಚಾರಕರಾದ ಪುಟ್ಟರಾಜು, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಆನಂದ ಹಾಗೂ ಯೋಜನೆಯ ಕಾರ್ಯಕರ್ತರು, ಒಕ್ಕೂಟದ ಪದಾಧಿಕಾರಿಗಳು ಸದಸ್ಯರುಗಳು ಹಾಗೂ ಕ್ಷೇತ್ರದ ಭಕ್ತಾದಿಗಳು ಭಾಗವಹಿಸಿದ್ದರು.





