ಕನ್ಯಾಡಿ: ಸೇವಾ ಭಾರತಿ ಕನ್ಯಾಡಿ ವತಿಯಿಂದ ಕರ್ನಾಟಕ ಸರ್ಕಾರದ ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಕಾರ್ಮಿಕ ಆಯುಕ್ತರಾದ ಎಸ್.ಬಿ. ರವಿಕುಮಾರ್ ಅವರನ್ನು ಭೇಟಿ ಮಾಡಿ ಅಸಂಘಟಿತ ಕಾರ್ಮಿಕರ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲಾಯಿತು.
ಪ್ರಮುಖವಾಗಿ ಕೃಷಿ ಕಾರ್ಮಿಕರು ಕೆಲಸದ ಸಂದರ್ಭದಲ್ಲಿ ಎತ್ತರದಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಮಲಗಿದ ಪರಿಸ್ಥಿತಿಗೆ ತಲುಪುವ ಘಟನೆಗಳು ಹೆಚ್ಚಾಗುತ್ತಿವೆ. ಇಂತಹ ಕಾರ್ಮಿಕರ ಜೀವನವನ್ನು ಸುಧಾರಿಸಲು ಹಾಗೂ ಅವರಿಗೆ ಆರ್ಥಿಕ ಮತ್ತು ವೈದ್ಯಕೀಯ ಸಹಾಯ ಒದಗಿಸಲು ವಿಶೇಷ ಯೋಜನೆಗಳನ್ನು ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿಯಡಿ ಜಾರಿಗೊಳಿಸುವಂತೆ ಮನವಿ ಮಾಡಿದರು.
ಈ ವೇಳೆ ಈಗಾಗಲೇ ಬೆನ್ನುಹುರಿ ಮುರಿತಕ್ಕೊಳಗಾದ ಕಾರ್ಮಿಕರ ಪುನರ್ವಸತಿ ಮತ್ತು ನೆರವಿಗಾಗಿ ಸೇವಾ ಭಾರತಿ ಕೈಗೊಂಡಿರುವ ವಿವಿಧ ಕಾರ್ಯಚಟುವಟಿಕೆಗಳನ್ನು ವಿವರಿಸಲಾಯಿತು. ಜೊತೆಗೆ ಬೆನ್ನುಮೂಳೆ ಮುರಿತಕ್ಕೊಳಗಾದವರ ಸಮಗ್ರ ಜೀವನ ಅಧ್ಯಯನದ ವರದಿಯನ್ನು ಅಧಿಕಾರಿಗಳಿಗೆ ಸಲ್ಲಿಸಲಾಯಿತು.
ಸಭೆಯಲ್ಲಿ ಉಪ ಕಾರ್ಮಿಕ ಆಯುಕ್ತರಾದ ಎ.ಸಿ. ತಮ್ಮಣ್ಣ ಉಪಸ್ಥಿತರಿದ್ದರು. ಸೇವಾ ಭಾರತಿಯ ಖಜಾಂಚಿ ಎ. ಜೈರಾಜ್ ಸಾಲಿಯಾನ್ ಸೇರಿದಂತೆ ಪ್ರತಿನಿಧಿಗಳು ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.




