ಬೆಳಗಾವಿ: ಪ.ರಾಮಕೃಷ್ಣಶಾಸ್ತ್ರಿ ಇವರು ‘ಮಕ್ಕಳ ಸಾಹಿತ್ಯ ಕ್ಷೇತ್ರ’ ಕ್ಕೆ ಸಲ್ಲಿಸಿದ ಅನುಪಮ ಸೇವೆ-ಸಾಧನೆಯನ್ನು ಗಮನಿಸಿ ಬೆಳಗಾವಿ ಯ ಸುವರ್ಣ ಸೌಧ ದಲ್ಲಿ ಮಹಿಳಾ ಮತ್ತು ಮಕ್ಕಳಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾ ಳ್ಕರ್ ರವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಖಾಂತರ ನೀಡಲಾಗುವ 2023-24 ನೇ ಸಾಲಿನ ಬಾಲ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಿದರು

ಪ. ರಾಮಕೃಷ್ಣಶಾಸ್ತ್ರಿ ಅವರು 1964ರಿಂದ ತಮ್ಮ 11ನೇ ವಯಸ್ಸಿನಿಂದ ಬರವಣಿಗೆಯಲ್ಲಿ ತೊಡಗಿಕೊಂಡವರು. ಕರ್ನಾಟಕದ ಬಹುತೇಕ ಪತ್ರಿಕೆಗಳಲ್ಲಿ ಸುಮಾರು 12,000ಕ್ಕಿಂತ ಅಧಿಕ ಲೇಖನ ಬರಹಗಳು ಪ್ರಕಟನೆಗೊಂಡಿರುತ್ತವೆ. ಮಹಾರಾಷ್ಟ್ರದ ಕನ್ನಡ ಶಾಲೆಗಳ 5. 6 ಮತ್ತು 7ನೇ ತರಗತಿ, ಕೇರಳದ ಎಂಟನೆಯ ತರಗತಿ ಹಾಗೂ ಮಂಗಳೂರು ವಿವಿ ಪಠ್ಯದಲ್ಲಿ ಇವರ ಕನ್ನಡ ಮತ್ತು ತುಳು ಕತೆಗಳು ಪಾಠವಾಗಿವೆ. ಮಕ್ಕಳಿಗಾಗಿ ೫೨ ಕಥಾ ಸಂಕಲನ, ಸಾಮಾಜಿಕ ಕಥಾ ಸಂಕಲನ, ಹಾಸ್ಯ ಲೇಖನ ಸಂಗ್ರಹ, ಜೀವನ ಚರಿತ್ರೆ, ವಯಸ್ಕರ ಶಿಕ್ಷಣಕ್ಕಾಗಿ ಪುಸ್ತಕಗಳು, ಮಹಿಳೆಯರಿಗಾಗಿ ಕೈಪಿಡಿ, ತುಳುವಿನಲ್ಲಿ ಪಣಿಯಾಡಿ ಪ್ರಶಸ್ತಿ ಪಡೆದ ಕಾದಂಬರಿ, ಕನ್ನಡ ಕಾದಂಬರಿ, ಗ್ರಾಮಾಭಿವೃದ್ಧಿ ಯೋಜನೆಗಾಗಿ ಕೈಪಿಡಿ, ಮಕ್ಕಳಿಗಾಗಿ ಭಾಗವತ, ವಿಜ್ಞಾನ ಪುಸ್ತಕ, ವೈಚಾರಿಕ ಲೇಖನಗಳ ಪುಸ್ತಕ ಸೇರಿದಂತೆ ಒಟ್ಟು 1೧೩ ಪುಸ್ತಕಗಳು ಪ್ರಕಟವಾಗಿದೆ. ಸಂಪಾದಿತ ಕೃತಿ, ಸ್ಮರಣ ಸಂಚಿಕೆ ಸಂಪಾದನೆ ಇತ್ಯಾದಿಗಳು ಇವೆ. ವಿವಿಧ ಭಾಷೆಗಳಿಗೆ ಬರಹಗಳು ಅನುವಾದಗೊಂಡಿವೆ. ಆಕಾಶವಾಣಿ, ದೂರದರ್ಶನಗಳಲ್ಲೂ ಪ್ರಸಾರವಾಗಿದೆ. ಜಿಲ್ಲಾ, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳ ವಿವಿಧ ಗೋಷ್ಠಿಗಳ ಅಧ್ಯಕ್ಷತೆ, ತಾಲೂಕು ಚುಟುಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ತಾಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿದ ಸಾಹಿತ್ಯ ಸೇವಕ, ಯಕ್ಷಗಾನ ಅರ್ಥಧಾರಿ, ಗಮಕ ವ್ಯಾಖ್ಯಾನಕಾರರಾಗಿರುವ ರಾಮಕೃಷ್ಣಶಾಸ್ತಿ ಇವರಿಗೆ ಕೇಂದ್ರ ಸರಕಾರದ ಪರಿಸರ ಇಲಾಖೆಯ ಪ್ರಶಸ್ತಿ, ತುಳುಶ್ರೀ ಪ್ರಶಸ್ತಿ, ಅಖಿಲ ಕರ್ನಾಟಕ ಮಕ್ಕಳ ಮೇಳದ ಗೌರವ, ಪಣಿಯಾಡಿ ಪ್ರಶಸ್ತಿ, ತುಳು ಅಕಾಡೆಮಿ, ತಾಲೂಕು ರಾಜ್ಯೋತ್ಸವ ಸಮಿತಿ, ಲಯನ್ಸ್, ರೋಟರಿ ಸಮ್ಮಾನ, ಆಶಾ ಸಾಲಿಯಾನ್ ಪ್ರತಿಷ್ಠಾನ ಗೌರವ, ಮಕ್ಕಳ ಸಾಹಿತ್ಯ ಸಂಗಮ, ಸಾಹಿತ್ಯ ಪರಿಷತ್ತಿನ ಮಸ್ತಕ ಪ್ರಶಸ್ತಿಗಳು, ಕಿನ್ನಿಗೋಳಿ ಕೊ. ಆ. ಉಡುಪ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದಿಂದ ಶಿವರಾಮ ಕಾರಂತ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳು ಸಂದಿವೆ.





