ಲಾಕ್ ಡೌನ್ ಸಂಕಟದಲ್ಲಿದ್ದ ಬಡ ಕುಟುಂಬಗಳ ನೆರವಿಗೆ ಬಂದ ಜನಸ್ಸೇಹಿ ಬೀಟ್ ಪೋಲೀಸ್ ಶಶಿಕುಮಾರ್

ಕಡಿರುದ್ಯಾವರ: ವಿಶ್ವಾದ್ಯಂತ ಕೊರೋನಾ ಮಹಾಮಾರಿ ಸೋಂಕು ಹರಡುತ್ತಿರುವ ಹಿನ್ನೆಲೆ ದೇಶವೇ ಲಾಕ್ ಡೌನ್ ಜಾರಿಯಲ್ಲಿದ್ದು ಈ ಸಂದರ್ಭದಲ್ಲಿ ಗ್ರಾಮ ಹಲವು ಬಡ ಕುಟುಂಬಗಳಿಗೆ ಅಗತ್ಯ ವಸ್ತುಗಳ ಸಹಾಯ ಹಸ್ತ ಮಾಡಿದ ಬೆಳ್ತಂಗಡಿ ಠಾಣೆಯ ಸಿಬ್ಬಂದಿ ಶಶಿಕುಮಾರ್.

ಮನೆಯೊಳಗಿನ ಜಗಳದಿಂದ ಹಿಡಿದು ದೇಶದೊಳಗಿನ ಎಲ್ಲಾ ಆಗುಹೋಗುಗಳಿಗೆ ಖಾಕಿಗಳು ಬೇಕೇ ಬೇಕು. ಹಾಗಾಗಿ ಖಾಕಿ ಅಂದರೆ ಪೋಲೀಸರಿಗೆ ಕಠಿಣ ಗುಣಗಳನ್ನು ಮೈಗೂಡಿಸಿಗೊಂಡಿರುವುದು ಅನಿವಾರ್ಯವಾಗಿರುತ್ತದೆ. ಆದರೆ, ಮಾನವೀಯತೆ ಮೇಲೈಸಿಕೊಂಡ ಆರಕ್ಷಕರು ಇದ್ದಾಗ ಸಮಾಜದಲ್ಲೊಂದು ಬದಲಾವಣೆ ಆಗೋದು ಖಂಡಿತ. ಇದಕ್ಕೊಂದು ಸಾಕ್ಷಾತ್ ಉದಾಹರಣೆ, ಕಡಿರುದ್ಯಾವರ ಗ್ರಾಮದ ಬೀಟ್ ಪೋಲೀಸ್ ಶ್ರೀ ಶಶಿಕುಮಾರ್.

READ ALSO

ಮೂಲತ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವರಾದ ಶ್ರೀ ಶಶಿಕುಮಾರ್ ಅವರು ಬೆಳ್ತಂಗಡಿ ಆರಕ್ಷಕ ಠಾಣೆಯಲ್ಲಿ ಕರ್ತವ್ಯನಿರ್ವಹಿಸುತಿದ್ದು, ತಾಲೂಕಿನ ಕಡಿರುದ್ಯಾವರ ಗ್ರಾಮದಲ್ಲಿ ಬೀಟ್ ಪೋಲೀಸ್ ಆಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾರ್ಯನಿರ್ವಹಿಸುತ್ತಿರುವ ಗ್ರಾಮದಲ್ಲಿ ಪ್ರಾಮಾಣಿಕ ಸೇವೆ ನೀಡುತ್ತಾ, ಗ್ರಾಮದ ಜನರ ಪ್ರೀತಿಪಾತ್ರರಾಗಿರುವ ಇವರು ಕೊರೋನ ಮಹಾಮಾರಿಯ ವಿರುಧ್ಧದ ಸಮರದ ನಿಮಿತ್ತದ ಲಾಕ್ಡೌನ್ ನಿಂದ ತತ್ತರಿಸಿದ ಜನರ ಸಂಕಷ್ಟಕ್ಕೆ ಸ್ಪಂಧಿಸಿದ್ದಾರೆ. ಗ್ರಾಮದ ಕಡುಬಡತನದಲ್ಲಿದ್ದ ಮನೆಗಳಿಗೆ ತನ್ನ ವೈಯಕ್ತಿಕ ಸಹಾಯ ಹಸ್ತ ಚಾಚಿದ್ದಾರೆ. ಈ ನಿಟ್ಟಿನಲ್ಲಿ ಸ್ಪಂಧಿಸುತ್ತಿರುವಾಗ ಗ್ರಾಮದಲ್ಲಿ ಈ ರೀತಿಯಾದ ಇನ್ನು ಹಲವಾರು ಕುಟುಂಬಗಳಿವೆಂಬುದನ್ನು ತಿಳಿದು ಶ್ರೀ ಶಶಿಕುಮಾರ್ ಅವರು ಗ್ರಾಮದ ಒಂದಷ್ಟು ದಾನಿಗಳನ್ನು ಸಂಪರ್ಕಿಸಿ, ತೀರಾ ಅಗತ್ಯವಿರುವ ಹದಿನೈದು ಕುಟುಂಬಗಳಿಗೆ ದಿನಸಿ ಸಾಮಾನು ಕಿಟ್ ಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ಈ ಸತ್ಕಾರ್ಯದಲ್ಲಿ ಇವರೊಂದಿಗೆ ಶ್ರೀ ಲಿಜೋ ಸ್ಕರಿಯ, ಹೇಡ್ಯ, ಶ್ರೀ ಸುದರ್ಶನ್ ರಾವ್, ಗಜಂತೋಡಿ, ಶ್ರೀಮತಿ ಬೇಬಿ ಸದಾಶಿವ ಗೌಡ ಕುದುರು, ಶ್ರೀ ಹರಿಪ್ರಸಾದ್ ಭಟ್ ಹಿತ್ತಿಲಕೋಡಿ, ಶ್ರೀ ಶಂಕರ್ ಭಟ್ ಬಸವದಡ್ಡು ಹಾಗೂ ಶ್ರೀ ಸೂರಜ್ ಅಡೂರು ಇವರುಗಳು ಸಹಕರಿಸಿದ್ದಾರೆ.