
ಬೆಳ್ತಂಗಡಿ: ಉಜಿರೆಯ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ವಿಜಯಗೋಪುರವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು.

ವಿಜಯಗೋಪುರವನ್ನು ಉದ್ಘಾಟಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಯಾವುದೇ ಊರಿನ ಧಾರ್ಮಿಕ ಕ್ಷೇತ್ರಗಳನ್ನು ನೋಡಿದಾಗ ಊರಿನ ಸ್ಥಿತಿಯನ್ನು ಅರಿಯಬಹುದಾಗಿದ್ದು, ಅತ್ಯಾಕರ್ಷಕ ರಾಜಗೋಪುರ ನಿರ್ಮಾಣದ ಮೂಲಕ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಧಾರ್ಮಿಕತೆ ಬಹಳ ಔನತ್ಯಕ್ಕೇರಿದೆ.

ಈ ಭಾಗದಲ್ಲಿ ಯಾವುದೇ ಕ್ಷೇತ್ರದಲ್ಲಿ ಇಲ್ಲದ ರಾಜಗೋಪುರ ಉಜಿರೆ ಕ್ಷೇತ್ರದಲ್ಲಿ ನಿರ್ಮಾಣವಾಗಿದ್ದು, ಊರಿನ ಯಜಮಾನರಾಗಿ ವಿಶೇಷ ಗೌರವಕ್ಕೆ ಪಾತ್ರರಾಗಿದ್ದ ವಿಜಯರಾಘವ ಪಡ್ಡೆಟ್ನಾಯರ ಸ್ಮರಣೆಯಲ್ಲಿ ಅದು ನಿರ್ಮಾಣಗೊಂಡಿರುವುದು ವಿಶೇಷ ಸಂತೋಷ ತಂದಿದೆ. ಧರ್ಮಸ್ಥಳ ಹಾಗೂ ಉಜಿರೆ ಕ್ಷೇತ್ರಕ್ಕೆ ವಿಶೇಷ ಧಾರ್ಮಿಕ ಸಂಬಂಧವಿದ್ದು ಸಾಕಷ್ಟು ಅಭಿವೃದ್ಧಿ ಸಾಧಿಸಿರುವ ಉಜಿರೆಯು ನಮ್ಮ ಕರ್ಮ ಕ್ಷೇತ್ರವಾಗಿದೆ.

ಉಜಿರೆಗೂ, ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧವಿದ್ದು, ಧರ್ಮಸ್ಥಳದ ಕರ್ಮಕ್ಷೇತ್ರ ಉಜಿರೆಯೇ ಆಗಿದೆ. ಶಾಲಾ, ಕಾಲೇಜುಗಳು ಹಾಗೂ ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ಕೆ,ಜಿ.ಯಿಂದ ಪಿ.ಜಿ. ವರೆಗೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದ್ದು ಉಜಿರೆಯ ಸರ್ವತೋಮುಖ ಪ್ರಗತಿಯಾಗಿದೆ ಎಂದರು.
ಧಾರ್ಮಿಕ ನಂಬಿಕೆ ಉಳಿಸುವ ಕಾರ್ಯ:
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ದೇಹದ ಅಂಗಾಗ ರೀತಿಯಲ್ಲೇ ದೇವಸ್ಥಾನದ ವಾಸ್ತುಶಿಲ್ಪ ವಿನ್ಯಾಸಗೊಳ್ಳುತ್ತಿದ್ದು, ನಾವು ರಾಜಗೋಪುರಕ್ಕೆ ನಮಸ್ಕರಿಸಿದರೆ ಅದು ದೇವರ ಪಾದಕ್ಕೆ ನಮಸ್ಕರಿಸಿದಂತಾಗುತ್ತದೆ. ದೇವಸ್ಥಾನದ ಆಸ್ಥಿತೆ ಕಾಪಾಡುವ ಕಾರ್ಯವನ್ನು ರಾಜಗೋಪುರಗಳು ಮಾಡುತ್ತಿದ್ದು ದೇವಸ್ಥಾನಗಳು ಸಮಾಜವನ್ನು ಒಗ್ಗೂಡಿಸುವ ಜತೆಗೆ ಮುಂದಿನ ತಲೆಮಾರಿಗೆ ಧಾರ್ಮಿಕ ನಂಬಿಕೆಗಳನ್ನು ಉಳಿಸಿಕೊಂಡು ಹೋಗಬೇಕಿದೆ ಎಂದರು.
ಸರ್ವಧರ್ಮೀಯರ ಶ್ರದ್ಧಾಕೇಂದ್ರಗಳಾದ ದೇವಸ್ಥಾನಗಳು ಹಾಗೂ ಮಠ-ಮಂದಿರಗಳು ಮೊದಲಾದ ಆಧ್ಯಾತ್ಮಿಕ ಕೇಂದ್ರಗಳ ಜೀರ್ಣೋದ್ಧಾರದಿಂದ ಊರಿನ ಸರ್ವತೋಮುಖ ಪ್ರಗತಿಯಾಗಿ ಸುಖ-ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗಂಡೂರಾವ್ ಹೇಳಿದರು.
ಅವರು ಬುಧವಾರ ಉಜಿರೆಯಲ್ಲಿ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ನೂತನ ವಿಜಯಗೋಪುರ ಲೋಕಾರ್ಪಣೆ ಸಮಾರಂಭದಲ್ಲಿ ಶುಭಾಶಂಸನೆ ಮಾಡಿ ಮಾತನಾಡಿದರು. ಭಾರತದ ಭವ್ಯ ಇತಿಹಾಸ, ಧರ್ಮ, ಕಲೆ ಮತ್ತು ಸಂಸ್ಕೃತಿಯ ಹಿನ್ನೆಲೆಯಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿ ವಿಶ್ವಮಾನ್ಯತೆಯನ್ನು ಗಳಿಸಿದೆ. ಆಧುನಿಕತೆಯ ಪ್ರಗತಿಯೊಂದಿಗೆ ಧಾರ್ಮಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿಯೂ ಉತ್ತಮ ಪ್ರಗತಿಯಾಗುತ್ತಿರುವುದು ಶ್ಲಾಘನೀಯವಾಗಿದೆ ಎಂದು ಸಚಿವರು ಹೇಳಿದರು.
ಶಶಿಧರ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಶಾಸಕ ಹರೀಶ್ ಪೂಂಜ, ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್, ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದರು.
ಉಜಿರೆ ಅಶೋಕ ಭಟ್ ಸಂಪಾದಕರಾಗಿ ತಯಾರಿಸಿದ “ವಿಜಯಪಥ” ಮತ್ತು ಜನಾರ್ದನ ದೇವಸ್ಥಾನದ ಬಗ್ಯೆ ಸಾಂತೂರು ಶ್ರೀನಿವಾಸ ತಂತ್ರಿ ರಚಿಸಿದ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ಕೃಷ್ಣ ಪಡ್ವೆಟ್ನಾಯ ಸ್ವಾಗತಿಸಿದರು. ರಾಜೇಶ್ ಪೈ ಧನ್ಯವಾದವಿತ್ತರು.
ಪ್ರೊ. ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು.





