ಬೆಳ್ತಂಗಡಿ, ಜೂನ್ 4: ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಚಾರಣತಾಣ ಗಡಾಯಿಕಲ್ಲಿಗೆ ಭೇಟಿ ನೀಡಿದ್ದ ಪ್ರವಾಸಿಗನೊಬ್ಬ ಕಾಲು ತಿರುಗಿ (ಟ್ವಿಸ್ಟ್) ಗಾಯಗೊಂಡು ಕೆಳಗಿಳಿಯಲು ಸಾಧ್ಯವಾಗದೆ ಸಿಲುಕಿದ್ದ ಘಟನೆ ಗುರುವಾರ ಸಂಜೆ ನಡೆದಿದೆ. ಸ್ಥಳೀಯರು, ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರ ತ್ವರಿತ ಕಾರ್ಯಾಚರಣೆಯಿಂದ ಆತನನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು.

ತಣ್ಣೀರುಪಂಥ ಗ್ರಾಮದ ಜನಾತ ಕಾಲೋನಿ ಪ್ರದೇಶದ ನಾಲ್ವರು ಪ್ರವಾಸಿಗರು ಬೆಳಿಗ್ಗೆ ಟಿಕೆಟ್ ಪಡೆದು ಗಡಾಯಿಕಲ್ಲಿಗೆ ತೆರಳಿದ್ದರು. ಗಡಾಯಿಕಲ್ಲಿನ ಮೆಟ್ಟಿಲುಗಳನ್ನು ಹತ್ತಿ ಮೇಲೇರಿದ ಬಳಿಕ ಮಹಮ್ಮದ್ ಶರೀಫ್ (30) ಅವರ ಕಾಲು ತಿರುಗಿ ಗಾಯಗೊಂಡ ಪರಿಣಾಮ ಅವರಿಗೆ ಕೆಳಗೆ ಇಳಿಯಲು ಸಾಧ್ಯವಾಗಲಿಲ್ಲ.
ಈ ಕುರಿತು 112 ಹೊಯ್ಸಳ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ತಕ್ಷಣವೇ ಬೆಳ್ತಂಗಡಿ ಅಗ್ನಿಶಾಮಕ ದಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ತಂಡವನ್ನು ಸಂಪರ್ಕಿಸಲಾಯಿತು. ಸ್ಥಳೀಯರ ಸಹಕಾರದೊಂದಿಗೆ ಸುಮಾರು 1500 ಮೆಟ್ಟಿಲುಗಳನ್ನು ಹತ್ತಿ ರಕ್ಷಣಾ ತಂಡ ಸ್ಥಳಕ್ಕೆ ತಲುಪಿತು.

ಸುಮಾರು ಮೂರು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಗಾಯಾಳುವನ್ನು ಸುಮಾರು 1.5 ಕಿಲೋಮೀಟರ್ ದೂರ ಹೊತ್ತು ತಂದು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಬಳಿಕ ಬಾಬಾ ಆಂಬುಲೆನ್ಸ್ ಮೂಲಕ ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.

ರಕ್ಷಣಾ ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಅಗ್ನಿಶಾಮಕದಳದ ಫೈರ್ ಸ್ಟೇಷನ್ ಅಧಿಕಾರಿ ವೆಂಕಟೇಶ್ ಎಸ್.ಹೆಚ್, ಸಹಾಯಕ ಠಾಣಾಧಿಕಾರಿ ನೀಲಯ್ಯ ಗೌಡ, ಲೋಕೇಶ್ ನಾಯಕ್, ಶ್ರವನ್ ನಾಯಕ್,ವೆಂಕಣ್ಣ,ರಾಮಪ್ಪ,ಚಾಲಕ ರತನ್ ಕುಮಾರ್.ಎನ್, ಶ್ರೀ ಕ್ಷೇತ್ರ ಧರ್ಮಸ್ಥದ ಶೌರ್ಯ ವಿಪತ್ತು ತಂಡದ ಅವಿನಾಶ್ ಭೀಡೆ, ಸಚಿನ್ ಭೀಡೆ, ರಮೇಶ್ ಬೈರಕಟ್ಟ, ಸುಧೀರ್ ಉಜಿರೆ, ರವೀಂದ್ರ ಉಜಿರೆ, ಮಂಜುನಾಥ್ ನಡ, ಬೆಳ್ತಂಗಡಿ ವನ್ಯಜೀವಿ ವಿಭಾಗದ ಡಿ.ಆರ್.ಎಫ್.ಓ ರವೀಂದ್ರ ನಾಯ್ಕ್, ಬೀಟ್ ಫಾರೆಸ್ಟ್ ಹೇಮಂತ್, ಅರಣ್ಯ ವೀಕ್ಷಕ ವೀರಪ್ಪ, ಸುರೇಶ್,ಸ್ಥಳೀಯರಾದ ವಿನೋದ್ ಪಿಂಟೋ, ಸುಜೀತ್ ಶೆಟ್ಟಿ, ಕಿರಣ್ ಮಿರಾಂದ,ಕ್ಲೇವಿನ್ ಮಿರಾಂದದ,ರಿವೋನ್ ಮಿರಾಂದ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

ಸಮನ್ವಯ ಮತ್ತು ತ್ವರಿತ ಸ್ಪಂದನೆಯ ಮೂಲಕ ಜೀವ ರಕ್ಷಿಸಿದ ರಕ್ಷಣಾ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.





