ಸಕಲೇಶಪುರ, ಜೂನ್ 5: ತಾಲೂಕಿನ ಉದೇವಾರ ಗ್ರಾಮದ ಕೂಲಿ ಕಾರ್ಮಿಕರಾದ ಸರೋಜಮ್ಮ ಅವರ ಮನೆ ಮೇಲೆ ಭಾರೀ ಗಾಳಿ-ಮಳೆಯಿಂದ ತೆಂಗಿನಮರ ಬಿದ್ದು ಮನೆಗೆ ಅಪಾರ ಹಾನಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಸರೋಜಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು.
ಈ ವಿಷಯ ತಿಳಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಸಕಲೇಶಪುರದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ತಕ್ಷಣ ನೆರವಿಗೆ ಧಾವಿಸಿ ಸೇವಾ ಕಾರ್ಯ ಕೈಗೊಂಡರು. ಸ್ವಯಂಸೇವಕರಾದ ಮಧುವರನ್, ಘಟಕ ಪ್ರತಿನಿಧಿ ಹರೀಶ್, ಸೇವಾ ಸಂಯೋಜಕಿ ದಿವ್ಯ ಹಾಗೂ ಸ್ವಯಂಸೇವಕರಾದ ಭಾಸ್ಕರ್ ಆಚಾರ್, ಲೀಲಾವತಿ, ಗುರುಪ್ರಕಾಶ್ ಮತ್ತು ರಾಮು ಅವರು ಮನೆ ಮೇಲೆ ಬಿದ್ದಿದ್ದ ಮರವನ್ನು ತೆರವುಗೊಳಿಸಿ, ಹಾನಿಗೊಳಗಾದ ಮನೆಯ ಹೆಂಚುಗಳನ್ನು ಜೋಡಿಸಿ ಟಾರ್ಪಾಲ್ ಹೊದಿಸುವ ಮೂಲಕ ತಾತ್ಕಾಲಿಕ ವ್ಯವಸ್ಥೆ ಮಾಡಿದರು.
ಈ ಸಂದರ್ಭದಲ್ಲಿ ಶಿವಾನಂದ ಹಾಗೂ ಎಸ್.ಪಿ.ಗಳಾದ ಸೌಮ್ಯ ಮತ್ತು ರೂಪ ಉಪಸ್ಥಿತರಿದ್ದು ಸೇವಾ ಕಾರ್ಯಕ್ಕೆ ಸಹಕರಿಸಿದರು.
ಶೌರ್ಯ ಘಟಕದ ಈ ಮಾನವೀಯ ಸೇವಾ ಕಾರ್ಯವನ್ನು ಕಂಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸಂಘಟನೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಸ್ವಯಂಸೇವಕರಿಗೆ ಅಭಿನಂದನೆ ಸಲ್ಲಿಸಿದರು.





