“ಹಡಿಲು ಭೂಮಿ ಕೃಷಿ ಆಂದೋಲನ” ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆಯ “ಕೇದಾರೋತ್ಥಾನ” ಟ್ರಸ್ಟ್ ಅಧಿಕೃತ ಘೋಷಣೆ

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಹಮ್ಮಿಕೊಂಡಿರುವ “ಹಡಿಲು ಭೂಮಿ ಕೃಷಿ ಆಂದೋಲನ” ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಆರಂಭಿಸಲಾಗಿರುವ “ಕೇದಾರೋತ್ಥಾನ”ಟ್ರಸ್ಟ್ ಇದರ ವತಿಯಿಂದ ಶಾಸಕರು ಹಾಗೂ ಟ್ರಸ್ಟಿಗಳಿಂದ ಕಾರ್ಯಕ್ರಮದ ಅಧಿಕೃತ ಘೋಷಣೆಯನ್ನು ಇಂದು ಅಮೃತ್ ಗಾರ್ಡನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಡಲಾಯಿತು.

“ಕೇದಾರೋತ್ಥಾನ” ಟ್ರಸ್ಟ್ ಅಧ್ಯಕ್ಷರು, ಉಡುಪಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಅವರು ಮಾತನಾಡಿ, ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಹಡಿಲು ಬಿಟ್ಟಿರುವ ಕೃಷಿ ಭೂಮಿಗಳನ್ನು ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುವ ಉದ್ದೇಶದಿಂದ “ಹಡಿಲು ಭೂಮಿ ಕೃಷಿ ಆಂದೋಲನ” ಹಮ್ಮಿಕೊಳ್ಳಲಾಗಿದೆ. ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಕೃಷಿ ಆಸಕ್ತರನ್ನು ಒಳಗೊಂಡ “ಕೇದಾರೋತ್ಥಾನ” ಟ್ರಸ್ಟ್ ಆರಂಭಿಸಲಾಗಿದೆ. ಈ ಟ್ರಸ್ಟ್ ಗೆ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರು ಅಧ್ಯಕ್ಷರಾಗಿರುತ್ತಾರೆ. ನಗರಸಭಾ ಸದಸ್ಯರು, ಗ್ರಾಮ ಪಂಚಾಯತ್ ಅಧ್ಯಕ್ಷರುಗಳು ಟ್ರಸ್ಟ್ ನ ಸದಸ್ಯರಾಗಿರುತ್ತಾರೆ ಎಂದು ತಿಳಿಸಿದರು.

READ ALSO

ಉಡುಪಿ ಜಿಲ್ಲೆಯಲ್ಲಿ ಕೇವಲ ಶೇಕಡಾ 30 ರಷ್ಟು ಮಾತ್ರ ಆಹಾರ ಉತ್ಪಾದನೆಯಾಗುತ್ತಿದ್ದು, ಶೇಕಡ 70ರಷ್ಟು ಹೊರಜಿಲ್ಲೆಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಇಲ್ಲಿನ ಕೃಷಿ ಭೂಮಿಗಳು ಕಾರ್ಮಿಕರ ಸಮಸ್ಯೆ ಸೇರಿದಂತೆ ಕೆಲವೊಂದು ವ್ಯವಸ್ಥೆಯ ತೊಡಕುಗಳಿಂದ ಹಡಿಲು ಬಿದ್ದಿದೆ. ಉಡುಪಿ ನಗರಸಭಾ ವ್ಯಾಪ್ತಿ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜನಪ್ರತಿನಿಧಿಗಳ ಕೃಷಿ ಆಸಕ್ತರ ನೇತೃತ್ವದಲ್ಲಿ ಈ ಹಡಿಲು ಭೂಮಿಗಳನ್ನು ಗುರುತಿಸಿ ಭೂಮಿಯ ಮಾಲಕರ ಒಪ್ಪಿಗೆಯ ಮೇರೆಗೆ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡಲಾಗುವುದು. ಭೂಮಿಯ ಮಾಲಕರು ತಾವೇ ಕೃಷಿ ಮಾಡಲು ಬಯಸಿದ್ದಲ್ಲಿ ಅವರಿಗೆ ಸಹಕಾರವನ್ನು ನೀಡಲಾಗುವುದು. ಕೃಷಿ ಭೂಮಿ ಸುತ್ತಮುಲಿನಲ್ಲಿ ಸಮರ್ಪಕ ತೋಡುಗಳ ವ್ಯವಸ್ಥೆ, ಬೆಳೆದಿರುವ ಪೊದೆ, ಗಿಡಗಂಟೆ ಹಲ್ಲುಗಳನ್ನು ತೆಗೆದು ಸಮತಟ್ಟುಗೊಳಿಸಲು ಬೇಕಾಗುವ ಖರ್ಚು ವೆಚ್ಚಗಳು ಸೇರಿದಂತೆ ಕೃಷಿ ಚಟುವಟಿಕೆಗಳನ್ನು ನಡೆಸಲು ಬೇಕಾಗುವ ಎಲ್ಲಾ ವ್ಯವಸ್ಥೆಗಳನ್ನು ಟ್ರಸ್ಟ್ ಮೂಲಕ ಭರಿಸಲಾಗುವುದು.

ಉಡುಪಿ ಕ್ಷೇತ್ರದಾದ್ಯಂತ 2 ಸಾವಿರ ಎಕರೆ ಹಡಿಲು ಕೃಷಿ ಭೂಮಿಗಳನ್ನು ಕೃಷಿ ಮಾಡಲು ಯೋಜನೆ ರೂಪಿಸಲಾಗಿದೆ. ಒಂದು ಎಕರೆಗೆ ಸುಮಾರು 25 ಸಾವಿರ ಖರ್ಚು ತಗಲಬಹುದು ಎಂದು ಅಂದಾಜಿಸಲಾಗಿದೆ. ಇದಕ್ಕೆ ದಾನಿಗಳ ಸಹಕಾರವನ್ನು ಬಯಸಿದ್ದು, ಆಸಕ್ತರು ಟ್ರಸ್ಟ್ ಮೂಲಕ ಸಹಾಯ ಮಾಡಬಹುದು. ಅಲ್ಲದೆ ಟ್ರಸ್ಟ್ ನಲ್ಲಿ ಹಣ ಜಮಾ ಮಾಡಬಹುದು. ಜಮಾ ಮಾಡಿದವರಿಗೆ ಅದನ್ನು ಬಂದ ಆದಾಯದಲ್ಲಿ ಹಿಂತಿರುಗಿಸುವುದು ಅಥವಾ ಅವರು ಬಯಸಿದಲ್ಲಿ ಅಕ್ಕಿಯನ್ನು ಪಡೆಯಬಹುದು. ಒಟ್ಟಾರೆಯಾಗಿ ದವಸ ಧಾನ್ಯಗಳ ಉತ್ಪಾದನೆ ಜೊತೆ ಅಂತರ್ಜಲ ಮಟ್ಟವೃದ್ದಿಯ ಉದ್ದೇಶದಿಂದ ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಹಮ್ಮಿಕೊಂಡಿರುವ ಹಡಿಲು ಭೂಮಿ ಕೃಷಿ ಆಂದೋಲನ ಯಶಸ್ವಿಗೊಳಿಸಲು ಕ್ಷೇತ್ರದ ಜನತೆಯ ಸರಕಾರವನ್ನು ಬಯಸುತ್ತೇನೆ ಎಂದು ಹೇಳಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಕೆಂಪೇಗೌಡ, ಪ್ರಗತಿಪರ ಕೃಷಿಕರಾದ ಕುದಿ ಶ್ರೀನಿವಾಸ ಭಟ್, ಕೇದಾರೋತ್ಥಾನ ಟ್ರಸ್ಟ್ ಸದಸ್ಯರಾದ ಮುರಳಿ ಕಡೆಕಾರ್, ರಾಘವೇಂದ್ರ ಕಿಣಿ, ಮಹೇಶ್ ಠಾಕೂರ್, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ್ ಬಾಬು, ಜಿಲ್ಲಾ ಪಂಚಾಯತ್ ಸದಸ್ಯರಾದ ಪ್ರತಾಪ್ ಹೆಗ್ಡೆ ಮಾರಾಳಿ ಉಪಸ್ಥಿತರಿದ್ದರು.