ಬೆಳ್ತಂಗಡಿ : ಗ್ರಾಹಕರಿಗೆ ಸರಿಯಾದ ಸಮಯಕ್ಕೆ ಗ್ಯಾಸ್ ಸರಬರಾಜು ಮಾಡದೆ ಕಚೇರಿಗೆ ಹೋದಾಗ ಪ್ರತಿನಿತ್ಯ ಗಲಾಟೆ ಮಾಡುತ್ತಿರುವ ಬಗ್ಗೆ ಬೆಳ್ತಂಗಡಿ ಆಹಾರ ಇಲಾಖೆಗೆ ಬಂದ ದೂರಿನ ಆಧಾರದಲ್ಲಿ ಕೊನೆಯ ಎಚ್ಚರಿಕೆಯ ನೋಟಿಸ್ ಜಾರಿ ಮಾಡಲಾಗಿದೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಲಾಯಿಲ ಜಂಕ್ಷನ್ ಬಳಿಯಿರುವ ಶ್ರೀ ಮಂಜು ಇಂಡೇನ್ ಗ್ಯಾಸ್ ಏಜೆನ್ಸಿ ಕಚೇರಿಯಲ್ಲಿ ಗ್ರಾಹಕರಿಗೆ ಸರಿಯಾದ ಗ್ಯಾಸ್ ಸರಬರಾಜು ಮಾಡದೆ, ಸರಿಯಾಗಿ ವ್ಯವಹಾರ ನಡೆಸದೆ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಗಲಾಟೆ ಬಗ್ಗೆ ಲಿಖಿತ ದೂರು ಬಂದ ಮೇರೆಗೆ ಬೆಳ್ತಂಗಡಿ ಆಹಾರ ಇಲಾಖೆಯಿಂದ ಎ.22 ರಂದು ಶ್ರೀ ಮಂಜು ಇಂಡೇನ್ ಗ್ಯಾಸ್ ಏಜೆನ್ಸಿ ವ್ಯವಸ್ಥಾಪಕರಿಗೆ ಎಚ್ಚರಿಕೆ ನೋಟಿಸ್ ಜಾರಿ ಮಾಡಲಾಗಿದೆ.
ನೋಟಿಸ್ ನಲ್ಲಿರುವ ಅಂಶ: ಪ್ರತಿದಿನ ಈ ಕಚೇರಿಗೆ ಇದೇ ವಿಚಾರವಾಗಿ ಸಾರ್ವಜನಿಕರಿಂದ ದೂರುಗಳು ಬರುತ್ತಿದೆ ಅಲ್ಲದೆ ನಿಮ್ಮ ಗ್ಯಾಸ್ ಏಜೆನ್ಸಿಯ ಬಗ್ಗೆ ಸರಿಯಾದ ಗ್ಯಾಸ್ ಸರಬರಾಜು ಇಲ್ಲದೆ ಇರುವ ಬಗ್ಗೆ ದೂರುಗಳು ಬರುತ್ತಿದ್ದು, ಅನಿಲ ಸಂಪರ್ಕ ಹೆಚ್ಚಾಗಿದ್ದು. ಅದಕ್ಕೆ ಸರಿಯಾಗಿ ಮೂಲಭೂತ ವ್ಯವಸ್ಥೆಯನ್ನು ಕೈಗೊಂಡು ಕೈಗೊಂಡ ಕ್ರಮದ ಬಗ್ಗೆ ಈ ಕಚೇರಿಗೆ ವರದಿ ಸಲ್ಲಿಸುವಂತೆ ತಿಳಿಸಿದೆ. ‘ಈ ಹಿಂದೆಯೂ ಸಾಕಷ್ಟು ಬಾರಿ ನಿಮಗೆ ಈ ಬಗ್ಗೆ ತಿಳಿಸಿದ್ದರೂ ಕ್ರಮ ವಹಿಸದೆ ಇರುವುದು ಉದ್ಧಟತನಕ್ಕೆ ಸಾಕ್ಷಿಯಾಗಿದೆ. ಗ್ರಾಹಕರು ಅವರಿಗೆ ಅನುಕೂಲವಾಗುವಂತೆ ಏಜೆನ್ಸಿ ಬದಲಾಯಿಸಲು ಹಕ್ಕು ಅವರಿಗೆ ಇದ್ದು. ನಿಮ್ಮಲ್ಲಿ ಬದಲಾವಣೆಗೆ ಮನವಿ ಮಾಡಿದ್ದಲ್ಲಿ ತಕ್ಷಣವೇ ಬದಲಾವಣೆಗೆ ಅವಕಾಶ ಮಾಡಿಕೊಡುವುದು ಹಾಗೂ ಮಾಡಿದ ಬಗ್ಗೆ ಈ ಕಚೇರಿಗೆ ಮಾಹಿತಿಯನ್ನು ನೀಡುವುದು. ಇದು ನಿಮಗೆ ನೀಡುತ್ತಿರುವ ಕೊನೆಯ ಎಚ್ಚರಿಕೆಯಾಗಿದ್ದು. ಮುಂದೆ ಈ ರೀತಿಯ ತಪ್ಪುಗಳು ಕಂಡಬಂದಲ್ಲಿ ಶಿಸ್ತು ಕ್ರಮ ವಹಿಸಲಾಗುವುದು ಎಂದು ಬೆಳ್ತಂಗಡಿ ಆಹಾರ ಇಲಾಖೆ ಎ.22 ರಂದು ನೀಡಿದ ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.





