ಬೆಳ್ತಂಗಡಿ: ಹಲವು ಶೈಕ್ಷಣಿಕ ದಾಖಲೆಗಳ ಮೂಲಕ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾದ ಗುರುವಾಯನಕೆರೆ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆವರಣ ಇಂದು ಹೊಸ ವಿಷಯಕ್ಕೆ ಗಮನ ಸೆಳೆಯಿತು.

ಏಪ್ರಿಲ್ 10 ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರ ಜನ್ಮ ದಿನಾಚರಣೆಯ ಶುಭವಸರದಲ್ಲಿ ಎಕ್ಸೆಲ್ ಕಾಲೇಜಿನ ವಿದ್ಯಾಸಾಗರ ಕ್ಯಾಂಪಸ್ ನಲ್ಲಿ ಸರಸ್ವತಿ ಗೋ ಮಂದಿರವನ್ನು ಲೋಕಾರ್ಪಣೆಗೊಳಿಸಲಾಯಿತು

ದೇಸಿ ಮಲೆನಾಡು ಗಿಡ್ಡ ತಳಿಯ ಹಸು ಕರುಗಳಿಗೆ ಗೋಪೂಜೆ ನೇರವೇರಿಸಿ,ಗೋಶಾಲೆಗೆ ಚಾಲನೆ ನೀಡಲಾಯಿತು. ಕಾಲೇಜು ಕ್ಯಾಂಪಸ್ ನಲ್ಲಿ ಗೋಶಾಲೆ ಆರಂಭಿಸಿರುವುದಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಗೋ ಮಂದಿರವನ್ನು ಮಲೆನಾಡು ಗಿಡ್ಡ ತಳಿಗಳ ಸಂರಕ್ಷಣೆ ಹಾಗೂ ಸಂವರ್ಧನಾ ಅಭಿಯಾನದ ಸಂಘಟಕರಾದ ಅಕ್ಷಯ ಆಳ್ವ ಅವರು ಲೋಕಾರ್ಪಣೆಗೊಳಿಸಿ ಮಾತಮಾಡಿ ದೇಸಿ ತಳಿ ಗೋವುಗಳ ಸಂರಕ್ಷಣೆ ಭಾರತೀಯರಾದ ನಮ್ಮ ಆದ್ಯ ಕರ್ತವ್ಯ ಎಂದರು. ಮುಖ್ಯ ಅತಿಥಿಗಳಾದ ವಿಶ್ರಾಂತ ಪಶು ವೈದ್ಯಾಧಿಕಾರಿ ಆನಂದ ಶೆಟ್ಟಿ ಅವರು ಹಾಗೂ ಮಂಗಳೂರು ಜನತಾ ಬಜಾರ್ ಅಧ್ಯಕ್ಷರಾದ ಕೆ ಪ್ರಸನ್ನ ಭಟ್ ಅವರು ಶುಭಾಶಂಸನೆ ಮಾಡಿದರು.
ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು ಮಾತನಾಡಿ ಕೃಷಿ ಕುಟುಂಬದಿಂದ ಬಂದ ನಾನು ಹೈನುಗಾರಿಕೆಯನ್ನು ಬಹಳವಾಗಿ ಇಷ್ಟ ಪಟ್ಟವನು. ಇದೀಗ ಮಲೆನಾಡು ಗಿಡ್ಡ ಹಸುಗಳನ್ನೇ ನಮ್ಮ ಕ್ಯಾಂಪಸ್ ನಲ್ಲಿ ಸಾಕಿ ಬೆಳೆಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಆನಂದ ಶೆಟ್ಟಿ ವಾತ್ಸಲ್ಯ, ಸುನೀಶ್ ಕುಮಾರ್ ಕಡಂಬು,ಎಕ್ಸೆಲ್ ಸಂಸ್ಥೆಯ ಸಹನಾ ಜೈನ್ ಸೇರಿದಂತೆ, ಉಪನ್ಯಾಸಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಡಾ. ನವೀನ್ ಕುಮಾರ್ ಮರಿಕೆ ಸ್ವಾಗತಿಸಿದರು. ಉಪನ್ಯಾಸಕಿ ಅನನ್ಯ ಜೈನ್ ನಿರೂಪಿಸಿದರು. ಅರಮಲೆಬೆಟ್ಟ ಕ್ಯಾಂಪಸ್ ನ ಪ್ರಾಚಾರ್ಯ ಡಾ. ಪ್ರಜ್ವಲ್ ಕಜೆ ವಂದಿಸಿದರು.





