ಸಕಲೇಶಪುರ, ಜುಲೈ 2: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ), ಸಕಲೇಶಪುರ ಹಾಗೂ ಜನಜಾಗೃತಿ ಪ್ರಾದೇಶಿಕ ವಿಭಾಗ, ಬೆಳ್ತಂಗಡಿ ಇವರ ಆಶ್ರಯದಲ್ಲಿ “ಶೌರ್ಯ” ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮದ ಘಟಕ ಪ್ರತಿನಿಧಿಗಳು ಹಾಗೂ ಸಂಯೋಜಕರ ಕೋರ್ ಕಮಿಟಿ ಸಭೆ ಮತ್ತು ತುರ್ತು ಸ್ಪಂದನಾ ಘಟಕದ ತರಬೇತಿ ಕಾರ್ಯಕ್ರಮ ಸಕಲೇಶಪುರ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಜನಜಾಗೃತಿ ಪ್ರಾದೇಶಿಕ ವಿಭಾಗ, ಬೆಳ್ತಂಗಡಿ ಯೋಜನಾಧಿಕಾರಿ ಕಿಶೋರ್ ಅವರು ತುರ್ತು ಪರಿಸ್ಥಿತಿಗಳಲ್ಲಿ ಸ್ವಯಂಸೇವಕರು ಕೈಗೊಳ್ಳಬೇಕಾದ ಕಾರ್ಯವೈಖರಿ, ವಿಪತ್ತು ನಿರ್ವಹಣೆಯ ಮೂಲಭೂತ ಅಂಶಗಳು, ತಂಡದ ಸಮನ್ವಯ, ತುರ್ತು ಸ್ಪಂದನೆ ಹಾಗೂ ಸೇವಾ ಮನೋಭಾವದ ಕುರಿತು ಸಮಗ್ರ ತರಬೇತಿ ಮತ್ತು ಮಾರ್ಗದರ್ಶನ ನೀಡಿದರು.
ತರಬೇತಿ ಕಾರ್ಯಕ್ರಮದಲ್ಲಿ ತುರ್ತು ಸಂದರ್ಭಗಳಲ್ಲಿ ಸ್ವಯಂಸೇವಕರು ತಕ್ಷಣ ಸ್ಪಂದಿಸುವ ವಿಧಾನ, ಜೀವ ರಕ್ಷಣೆ, ಸಾರ್ವಜನಿಕರ ಸುರಕ್ಷತೆ ಹಾಗೂ ವಿಪತ್ತು ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮೈಸೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಮುಖೇಶ್, ಕ್ಷೇತ್ರ ಯೋಜನಾಧಿಕಾರಿ ರಾಜೇಶ್, ನಿಕಟಪೂರ್ವ ಮಾಸ್ಟರ್ ಮಧುವರನ್, ಕ್ಯಾಪ್ಟನ್ ಪ್ರಸನ್ನಕುಮಾರ್, ಹಾಗೂ “ಶೌರ್ಯ” ಘಟಕದ ಸ್ವಯಂಸೇವಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.





