ಶಿಡ್ಲಘಟ್ಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೋವಿಡ್-19 ಮಾಹಿತಿ ಪತ್ರ ಬಿಡುಗಡೆಯನ್ನು ಶಿಡ್ಲಘಟ್ಟ ಯೋಜನಾ ಕಛೇರಿಯಲ್ಲಿ ನಡೆಸಲಾಯಿತು.
ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶಿವಕುಮಾರ್ ರವರು ಉದ್ಘಾಟಿಸಿ ಮಾತನಾಡುತ್ತಾ ವಿಶ್ವಾದ್ಯಂತ ಕೊರೋನ ಮಹಾಮಾರಿಯು ತನ್ನ ಅಟ್ಟಹಾಸವನ್ನು ತೋರುತ್ತಿದ್ದು ನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿದೆ ಆದರೆ ನಮ್ಮ ದೇಶದಲ್ಲಿ ಸಾವಿನ ಸಂಖ್ಯೆ ಕಡಿಮೆಯಿದ್ದು ಇದಕ್ಕೆ ನಮ್ಮ ದೇಶದ ಆಹಾರ ಪದ್ಧತಿ ಮೂಲ ಕಾರಣವಾಗಿದೆ ರೋಗರುಜಿನಗಳನ್ನು ತಡೆಯುವ ಶಕ್ತಿ ನಮ್ಮ ಆರೋಗ್ಯದಲ್ಲಿ ಇದ್ದಷ್ಟು ದಿನ ನಮಗೆ ಯಾವುದೇ ತೊಂದರೆಗಳು ಆಗೋದಿಲ್ಲ ಪೌಷ್ಠಿಕ ಆಹಾರಗಳ ಸೇವನೆಯ ಜೊತೆಗೆ ರೋಗನಿರೋಧಕ ಶಕ್ತಿಗಳನ್ನು ಹೆಚ್ಚಿಸುವ ಆಹಾರಗಳ ಸೇವನೆಯ ಅವಶ್ಯಕತೆಯಿದೆ ಕೊರೋನಾದ ಬಗ್ಗೆ ಭಯ ಬೇಡ ಆದರೆ ಜಾಗೃತಿ ಇರಲಿ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಾಡುತ್ತಾ ಬರುತ್ತಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ತ್ಯಾಗರಾಜ ರವರು ಕೋವಿಡ್ 19 ಮಾಹಿತಿ ಪತ್ರವನ್ನು ಬಿಡುಗಡೆ ಮಾಡಿದರು.
ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ರವರು ಮಾತನಾಡುತ್ತಾ ಕೊರೋನಾ ವೈರಸ್ ರೋಗಾಣುಗಳು ಮನುಷ್ಯರಲ್ಲಿ ಉಸಿರಾಟದ ಸೋಂಕನ್ನು ಉಂಟುಮಾಡುತ್ತದೆ, ಅದು ಸಾಮಾನ್ಯವಾಗಿ ಸೌಮ್ಯವಾಗಿರುತ್ತದೆ, ಆದರೆ ವಿರಳವಾಗಿ ಮಾರಕವಾಗಬಹುದು. ಇದನ್ನು ತಡೆಗಟ್ಟುವಿಕೆ ಅಥವಾ ಚಿಕಿತ್ಸೆಗಾಗಿ ಅನುಮೋದಿಸಲಾದ ಯಾವುದೇ ಲಸಿಕೆಗಳು ಅಥವಾ ಆಂಟಿವೈರಲ್ ಔಷಧಿಗಳಿಲ್ಲ. ಇದಕ್ಕಾಗಿ ನಾವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ ಸಾಮಾಜಿಕ ಅಂತರಗಳನ್ನು ಕಾಪಾಡುವುದರ ಜೊತೆಗೆ ಮಾಸ್ಕ್, ಸ್ಯಾನಿಟೈಸರ್ ಬಳಕೆಯನ್ನು ಮಾಡಬೇಕಾಗುತ್ತದೆ ಮಕ್ಕಳು ಹಾಗೂ ಹಿರಿಯ ವಯಸ್ಕರು ಮನೆಯಲ್ಲೇ ಇದ್ದು ಅವಶ್ಯಕತೆಗನುಗುಣವಾಗಿ ಮಾತ್ರ ಹೊರಗಡೆ ಓಡಾಟ ಮಾಡಿದಲ್ಲಿ ಇಂತಹ ಸಾಂಕ್ರಾಮಿಕ ರೋಗವನ್ನು ನಿರ್ಣಾಮ ಮಾಡಬಹುದು ಇದರ ಜಾಗೃತಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು 10 ಲಕ್ಷಕ್ಕೂ ಅಧಿಕ ಕರಪತ್ರಗಳನ್ನು ಮುದ್ರಿಸಿ ಜಾಗೃತಿ ಮೂಡಿಸುತ್ತಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಯೋಜನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.