ಬೆಳ್ತಂಗಡಿ: ತಾಲೂಕಿನ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ತಾ.ಪಂ ನಿವೃತ್ತ ಅಧೀಕ್ಷಕ ಪ್ರಶಾಂತ್ ಬಳಂಜ ಅವರಿಂದ ಆಯೋಜಿಸಲಾದ ವಿಶಿಷ್ಟ ಕೃತಜ್ಞತಾ ಸಮಾರಂಭವು ಅರ್ಥಪೂರ್ಣವಾಗಿ ನಡೆಯಿತು. ತಮ್ಮ ದೀರ್ಘ ವೃತ್ತಿ ಜೀವನದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ವಿಭಿನ್ನವಾಗಿ ಹಮ್ಮಿಕೊಳ್ಳಲಾಗಿತ್ತು.

“ಹೇಗೆ ಬದುಕಿದ್ದೇವೆ ಎನ್ನುವುದೇ ಜೀವನದ ಮೌಲ್ಯ” ಪ್ರಶಾಂತ್ ಬಳಂಜರಿಂದ ವಿಭಿನ್ನ ಕೃತಜ್ಞತಾ ಸಮಾರಂಭ – ಡಾ. ಪದ್ಮಪ್ರಸಾದ ಅಜಿಲ ಸಂದೇಶ
ಕಾರ್ಯಕ್ರಮದಲ್ಲಿ ಅಳದಂಗಡಿ ಅಜಿಲಸೀಮೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ ಮಾತನಾಡಿ, “ಮಾನವನ ಆಯುಷ್ಯದಲ್ಲಿ ಎಷ್ಟು ವರ್ಷ ಬದುಕಿದ್ದೇವೆ ಎಂಬುದು ಮುಖ್ಯವಲ್ಲ; ನಾವು ಹೇಗೆ ಬದುಕಿದ್ದೇವೆ ಎಂಬುದೇ ಜೀವನದ ನಿಜವಾದ ಮೌಲ್ಯ” ಎಂದು ಹೇಳಿದರು.
ಪ್ರಶಾಂತ್ ಬಳಂಜ ಅವರ ಕಾರ್ಯಶೈಲಿಯನ್ನು ಪ್ರಶಂಸಿಸಿದ ಅವರು, ಬಳಂಜ ಅವರು ಉತ್ತಮ ಬರಹಗಾರರಾಗಿದ್ದು, ಅಳದಂಗಡಿ ಅರಮನೆಯ ಇತಿಹಾಸ ಮತ್ತು ವೈಶಿಷ್ಟ್ಯವನ್ನು ಮಾಧ್ಯಮಗಳ ಮೂಲಕ ಜನರಿಗೆ ಪರಿಚಯಿಸಿದ್ದಾರೆ ಎಂದರು. ಅವರ ಕುಟುಂಬದೊಂದಿಗೆ ಮೂರು ತಲೆಮಾರುಗಳ ಸಂಬಂಧವಿದ್ದು, ಸರ್ಕಾರಿ ಹುದ್ದೆಯಲ್ಲಿದ್ದರೂ ಅವರು ನಿಷ್ಠೆಯಿಂದ ಹಾಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾಜಕ್ಕೆ ಮರಳಿಸುವ ಮನೋಭಾವನೆ: ಮಚ್ಚಿನ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉದಯವಾಣಿ ಉಪ ಮುಖ್ಯ ಉಪ ಸಂಪಾದಕ ಲಕ್ಷ್ಮೀ ಮಚ್ಚಿನ ಮಾತನಾಡಿ, “ಸಮಾಜದಿಂದ ಪಡೆದದ್ದು ಸಮಾಜಕ್ಕೆ ಮರಳಿಸುವ ಮನೋಭಾವನೆಯೇ ಈ ಸಮಾರಂಭದ ವಿಶೇಷತೆ” ಎಂದು ಹೇಳಿದರು. ಸರ್ಕಾರಿ ಅಧಿಕಾರಿಗಳಿಗೆ ಕೆಲವು ನಿರ್ಬಂಧಗಳಿದ್ದರೂ ಸಮಾಜ ಸೇವೆ ಮಾಡಬಹುದು ಎಂಬುದನ್ನು ಪ್ರಶಾಂತ್ ಬಳಂಜ ತಮ್ಮ ಕಾರ್ಯದ ಮೂಲಕ ತೋರಿಸಿದ್ದಾರೆ ಎಂದು ಅವರು ಹೇಳಿದರು.
ಗಣ್ಯರ ಉಪಸ್ಥಿತಿ – ಸನ್ಮಾನ
ಈ ಸಂದರ್ಭದಲ್ಲಿ ತಹಶೀಲ್ದಾರ್ ಪೃಥ್ವಿ ಸಾನಿಕಮ್, ನಿವೃತ್ತ ತಾಂತ್ರಿಕ ಮುಖ್ಯಸ್ಥ ರಾಜಶೇಖರ ಗೌಡ, ಹಿರಿಯ ನ್ಯಾಯವಾದಿ ಕೆ.ಪ್ರಕಾಶ್ ಹೆಗ್ಡೆ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಪ್ರಶಾಂತ್ ಬಳಂಜ ಅವರು ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.

📦 ಅನುಭವಗಳ ಅನಾವರಣ: ತಮ್ಮ ಸೇವಾ ಅವಧಿಯ ಅನುಭವಗಳನ್ನು ಹಂಚಿಕೊಂಡ ಪ್ರಶಾಂತ್ ಬಳಂಜ
1987ರಲ್ಲಿ ಬಳoಜ ಮಂಡಲ ಪಂಚಾಯತಿಯ ಗುಮಾಸ್ತನಾಗಿ ಕರ್ತವ್ಯಕ್ಕೆ ಸೇರಿ,1998ರಲ್ಲಿ ಕಾರ್ಯದರ್ಶಿಯಾಗಿ,2013ರಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಭಡ್ತಿಗೊಂಡು ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಬೆಳ್ತಂಗಡಿ ಶಾಸಕರ ಆಪ್ತ ಸಹಾಯಕನಾಗಿ,ಬಂಟ್ವಾಳ ತಾಲೂಕು ಪಂಚಾಯತಿಯಲ್ಲಿ 2018 ರಿಂದ 2021ರವರೆಗೆ ಪ್ರಭಾರ ನೆಲೆಯಲ್ಲಿ ಸಹಾಯಕ ನಿರ್ದೇಶಕ ಮತ್ತು ಸಹಾಯಕ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ನಾನು 2021ರಿಂದ ಈವರೆಗೆ ಬೆಳ್ತಂಗಡಿ ತಾಲೂಕು ಪಂಚಾಯಿತಿಯಲ್ಲಿ ಅಧೀಕ್ಷಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ ಮಾರ್ಚ್ 31ರಂದು ಸೇವಾ ನಿವೃತ್ತಿ ಹೊಂದಿದ್ದೇನೆ.
ಮಾಜಿ ಶಾಸಕ ವಸಂತ ಬಂಗೇರ ಅವರ ಕಾರ್ಯಶೈಲಿಯನ್ನು ನೆನೆದು, “ಅವರು ಪತ್ರ ಬರೆದರೆ ಬಹುತೇಕ ಎಲ್ಲಾ ಕೆಲಸಗಳು ನೆರವೇರಿಸುತ್ತಿದ್ದವು. ಅವರ ಪ್ರಭಾವ ಎಷ್ಟಿತ್ತು ಎಂದರೆ ವಿಧಾನಸೌಧಕ್ಕೆ ಅವರ ಹೆಸರು ಹೇಳಿದರೆ ಪಾಸ್ ಕೂಡ ಬೇಕಾಗಿರಲಿಲ್ಲ” ಎಂದು ಹೇಳಿದರು. ತಮ್ಮ ಕರ್ತವ್ಯದ ಅವಧಿಯಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದಾಗಿ ಹೇಳಿದ ಅವರು, 2011ರಲ್ಲಿ ತಾಲೂಕಿನಿಗೆ 4 ಸಾವಿರ ಮನೆಗಳ ಮಂಜೂರಾತಿ ಪ್ರಕ್ರಿಯೆಯಲ್ಲಿ ತಾವು ಶ್ರಮಿಸಿದುದನ್ನು ಸ್ಮರಿಸಿದರು.

ಪ್ರೆಂಡ್ಸ್ ವಾಟ್ಸಾಪ್ ಬಳಗದಿಂದ ಅಭಿನಂದನೆ: ಸರಕಾರಿ ಕಾರ್ಯಕ್ರಮಗಳು ಯೋಜನೆಯ ರೂಪುರೇಷೆಗಳು ಹಾಗೂ ಇನ್ನಿತರ ಅವಶ್ಯಕ ಅಧಿಕೃತ ಮಾಹಿತಿಯನ್ನು ನಿರಂತವಾಗಿ ನೀಡುತ್ತಿದ್ದ ಬಳಂಜರವರ ಕಾರ್ಯವೈಖರಿಯನ್ನು ಗುರುತಿಸಿ ಪ್ರೆಂಡ್ಸ್ ಬಳಗದಿಂದ ಅಭಿನಂದಿಸಲಾಯಿತು.

ಕಾರ್ಯಕ್ರಮವನ್ನು ಪ್ರಶಾಂತ್ ಬಳಂಜ ಸ್ವಾಗತಿಸಿ ಪ್ರಸ್ತಾವನೆಗೈದರು. ಶಿಕ್ಷಕ ಅರವಿಂದ ಚೊಕ್ಕಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.





