ಬೆಳ್ತಂಗಡಿ ತಾಲ್ಲೂಕಿನ ಪುಂಜಾಲಕಟ್ಟೆ–ಚಾರ್ಮಾಡಿ ರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿ ಇನ್ನೂ ಪೂರ್ಣಗೊಳ್ಳದಿದ್ದರೂ, ಈಗಾಗಲೇ ವಿವಿಧ ಸ್ಥಳಗಳಲ್ಲಿ ವೇಗ ಮಿತಿ ಸೂಚಿಸುವ ಫಲಕಗಳನ್ನು ಅಳವಡಿಸಿರುವುದು ಸಾರ್ವಜನಿಕರ ಗಮನ ಸೆಳೆದಿದೆ. ವಿಶೇಷವಾಗಿ ಚಾರ್ಮಾಡಿ–ಉಜಿರೆ ಮಾರ್ಗದ ಕೆಲವು ಅಂಕುಡೊಂಕಾದ ಹಾಗೂ ಅಪಾಯಕಾರಿ ತಿರುವುಗಳಿರುವ ಪ್ರದೇಶಗಳಲ್ಲಿ ಕೂಡ 100 ಕಿಮೀ ವೇಗ ಮಿತಿ ಸೂಚಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ರಸ್ತೆ ಇನ್ನೂ ಕಾಮಗಾರಿ ಹಂತದಲ್ಲಿರುವುದರಿಂದ, ಇಂತಹ ಹೆಚ್ಚು ವೇಗ ಮಿತಿ ಫಲಕಗಳು ವಾಹನ ಸವಾರರಿಗೆ ತಪ್ಪು ಸಂದೇಶ ನೀಡುವ ಸಾಧ್ಯತೆ ಇದೆ. ಫಲಕಗಳನ್ನು ನೋಡಿ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸಿದರೆ ಅಪಘಾತಗಳ ಸಂಭವ ಹೆಚ್ಚಾಗುವ ಭೀತಿ ವ್ಯಕ್ತವಾಗುತ್ತಿದೆ. ಸ್ಥಳೀಯರು ಮತ್ತು ನಿತ್ಯ ಪ್ರಯಾಣಿಕರ ಪ್ರಕಾರ, ಇಂತಹ ತಿರುವುಗಳಿರುವ ಪ್ರದೇಶಗಳಲ್ಲಿ ಗರಿಷ್ಠ ವೇಗ ಮಿತಿಯನ್ನು 60 ಕಿಮೀಗೆ ಸೀಮಿತಗೊಳಿಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನೂ ರಸ್ತೆ ಕಾಮಗಾರಿ ಪೂರ್ಣಗೊಳ್ಳದಿರುವ ಸಂದರ್ಭದಲ್ಲಿ ವೇಗ ಮಿತಿ ಫಲಕಗಳನ್ನು ಅಳವಡಿಸುವುದಕ್ಕಿಂತ, ಕಾಮಗಾರಿ ಪೂರ್ಣಗೊಂಡ ನಂತರವೇ ನಿಯಮಾನುಸಾರ ಫಲಕಗಳನ್ನು ಅಳವಡಿಸುವುದು ಉತ್ತಮ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು PWD ಇಲಾಖೆ ಹಾಗೂ ಸಂಬಂಧಿತ ಟೆಂಡರ್ ದಾರರು ತಕ್ಷಣ ಗಮನಹರಿಸಿ, ತಪ್ಪಾಗಿ ಅಳವಡಿಸಿರುವ ವೇಗ ಮಿತಿ ಫಲಕಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ.





