ಬೆಳ್ತಂಗಡಿ: ಸರಕಾರಿ ಬಸ್ ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಸದಾ ಸುದ್ದಿಯಲ್ಲಿದ್ದು ನಿರ್ವಹಣೆಯ ಬಗ್ಗೆ ಪ್ರಶ್ನಿಸುವವರ್ಯಾರು ಎಂಬ ಪ್ರಶ್ನೆ ಮೂಡುತ್ತದೆ ಈ ಬೆನ್ನಲ್ಲೇ ಚಲಿಸುತ್ತಿದ್ದ ಸರ್ಕಾರಿ ಬಸ್ಸಿನ ಬಾಗಿಲು ಹಠಾತ್ತನೆ ತೆರೆದುಕೊಂಡ ಪರಿಣಾಮ, ಇಬ್ಬರು ವಿದ್ಯಾರ್ಥಿನಿಯರು ರಸ್ತೆಗೆ ಬಿದ್ದು ಗಾಯಗೊಂಡಿರುವ ಆತಂಕಕಾರಿ ಘಟನೆ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಎಂಬಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಸಮೀಪದ ‘ರೇಷ್ಮೆ ರೋಡ್’ನಲ್ಲಿ ಈ ಘಟನೆ ಸಂಭವಿಸಿದೆ. ಈ ಬಸ್ ಗೇರುಕಟ್ಟೆಯಿಂದ ಬೆಳ್ತಂಗಡಿ ಕಡೆಗೆ ಪ್ರಯಾಣಿಸುತ್ತಿತ್ತು. ಬಸ್ ಚಲಿಸುತ್ತಿದ್ದ ವೇಳೆ ಅನಿರೀಕ್ಷಿತವಾಗಿ ಬಸ್ಸಿನ ಬಾಗಿಲು ತೆರೆದುಕೊಂಡಿದೆ. ಈ ಸಂದರ್ಭದಲ್ಲಿ ಬಾಗಿಲ ಬಳಿಯೇ ನಿಂತಿದ್ದ ಹತ್ತನೇ ತರಗತಿಯ ವಿದ್ಯಾರ್ಥಿನಿ ಚರಿಷ್ಮಾ ಹಾಗೂ ಪಿಯುಸಿ ವಿದ್ಯಾರ್ಥಿನಿ ಚಸ್ಮಿಕಾ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.
ನ್ಯಾಯತರ್ಪು ಗ್ರಾಮದ ಕಲಾಯಿತೊಟ್ಟು ರೂಪ ಮತ್ತು ನಾಗರಾಜ್ ಗೌಡ ದಂಪತಿಯ ಪುತ್ರಿಯರಾದ ದ್ವೀತಿಯ ಪಿಯುಸಿ ವಿದ್ಯಾರ್ಥಿ ಚರಿಷ್ಮಾ, 10ನೇ ತರಗತಿಯ ವಿದ್ಯಾರ್ಥಿ ಚದ್ಮಕಾ ಗಾಯಗೊಂಡವರು. ಇಬ್ಬರು ಇಂದು ಬೆಳಿಗ್ಗೆ ಎಂದಿನಂತೆ ಗೇರುಕಟ್ಟೆಯಿಂದ ಬೆಳ್ತಂಗಡಿ ಶಾಲೆಗೆ ತೆರಳಲು ಕೆಎಸ್ ಆರ್ ಟಿ ಸಿ ಬಸ್ ಗೆ ಹತ್ತಿದ್ದು, ರೇಷ್ಮೆ ರೋಡ್ ಎಂಬಲ್ಲಿ ಒಮ್ಮೆಲೆ ಬಸ್ ನ ಬಾಗಿಲು ತೆರೆಯಲ್ಪಟ್ಟು ಒಬ್ಬಳು ಕೆಳಗೆ ಬೀಳುವ ವೇಳೆ ಅಕ್ಕನನ್ನು ಹಿಡಿದುಕೊಳ್ಳಲು ತಂಗಿ ಪ್ರಯತ್ನಿಸಿದ ಸಂದರ್ಭಇಬ್ಬರೂ ನಿಯಂತ್ರಣ ತಪ್ಪಿ ಕೆಳಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಸ್ಥಳೀಯರ ಸಹಕಾರದಲ್ಲಿ ಚಿಕಿತ್ಸೆಗಾಗಿ ಬೆಳ್ತಂಗಡಿ ಹಾಗೂ ಉಜಿರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಮಾಹಿತಿ ಪ್ರಕಾರ ಓರ್ವ ವಿದ್ಯಾರ್ಥಿನಿ ಎಸ್ ಎಸ್ ಎಲ್.ಸಿ ಪರೀಕ್ಷೆಗೆ ತೆರಳುತಿದ್ದು ಮತ್ತೊಬ್ಬಳು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ ಎನ್ನಲಾಗಿದೆ. ಇಬ್ಬರೂ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಿಸಿಟಿವಿಯಲ್ಲಿ ದೃಶ್ಯ ಸೆರೆ: ವಿದ್ಯಾರ್ಥಿನಿಯರು ಬಸ್ಸಿನಿಂದ ಹೊರಕ್ಕೆ ಬೀಳುವ ಭೀಕರ ದೃಶ್ಯವು ಹತ್ತಿರದ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ. ಸರ್ಕಾರಿ ಬಸ್ಗಳ ಬಾಗಿಲುಗಳ ಸುರಕ್ಷತೆಯ ಬಗ್ಗೆ ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.





