ಬೆಳಗಾವಿ ಜಿಲ್ಲಾಸ್ಫತ್ರೆಯಲ್ಲಿ ಕೋವಿಡ್ ಸೋಂಕಿತ ಮೃತಪಟ್ಟ ಹಿನ್ನೆಲೆ ಆಂಬುಲೆನ್ಸ್ ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!

ಬೆಳಗಾವಿ: ಕೊವಿಡ್ ವೈರಸ್ ಸೊಂಕಿನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬದವರು ಆಕ್ರೋಷಗೊಂಡು ಆಸ್ಪತ್ರೆಯ ಆಂಬುಲೆನ್ಸ್ ಗೆ ಬೆಂಕಿ ಇಟ್ಟ ಘಟನೆ ವರದಿಯಾಗಿದೆ.

ಕೊರೋನಾ ಸೋಂಕಿತ ರೋಗಿಯೊಬ್ಬರು ಚಿಕಿತ್ಸೆ ಸಿಗದೇ ಮೃತಪಟ್ಟ ಹಿನ್ನೆಲೆ ರೊಚ್ಚಿಗೆದ್ದ ಕುಟುಂಬಸ್ಥರು ಆಸ್ಪತ್ರೆ ಮುಂದೆ ಗಲಾಟೆ ನಡೆಸಿದ ಘಟನೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಈ ಅನಾಗರಿಕ ಘಟನೆಯಿಂದ ಕುಂದಾನಗರಿ ಜನ ಬೆಚ್ಚಿ ಬಿದ್ದಿದ್ದಾರೆ.

READ ALSO

ಬೆಳಗಾವಿ ಬಿಮ್ಸ ಆಸ್ಪತ್ರೆಯ ಕೋವಿಡ್ ಐಸಿಯು ವಾರ್ಡನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಹಿನ್ನೆಲೆ ಆಕ್ರೋಷಗೊಂಡ ಸಂಬಂಧಿಕರು ಈ ರೀತಿ ಗೂಂಡಾ ವರ್ತನೆ ತೋರಿದ್ದಾರೆ. ರೋಗಿಯ 10ಕ್ಕೂ ಹೆಚ್ಚು ಸಂಬಂಧಿಕರು ಬಿಮ್ಸ ಕೋವಿಡ್ ವಾರ್ಡ ಮುಂದೆ ನಿಂತಿದ್ದ ಆಂಬುಲೆನ್ಸಗೆ ಬೆಂಕಿ ಹಚ್ಚಿ ಕಲ್ಲು ತೂರಾಟ ನಡೆಸಿದ್ದಾರೆ. ನೋಡ ನೋಡುತ್ತಿದ್ದಂತೆ ಆಂಬುಲೆನ್ಸಗೆ ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಬರುವಷ್ಠರಲ್ಲಿ ಆಂಬುಲೆನ್ಸ್ ಸುಟ್ಟು ಕರಕಲಾಗಿದೆ.

ಅಷ್ಟೇ ಅಲ್ಲದೇ ಐಸಿಯು ವಾರ್ಡನಲ್ಲಿದ್ದ ವೈದ್ಯರು ಮತ್ತು ಸಿಬ್ಬಂದಿ ಮೇಲೆ ಹಲ್ಲೆಗೂ ದುಷ್ಕರ್ಮಿಗಳು ಮುಂದಾಗಿದ್ದರು. ಪೊಲೀಸ್ ವಾಹನ, ಕಾರುಗಳ ಗಾಜನ್ನು ಪುಡಿ ಪುಡಿ ಮಾಡಿ ತಮ್ಮ ದರ್ಪ ಮೆರೆದಿದ್ದಾರೆ.

ಗಲಾಟೆ ಆರಂಭವಾಗಿ ಬೆಂಕಿ ಇಡಲು ಬರುತಿದ್ದಂತೆಯೇ ತಕ್ಷಣವೇ ಆಂಬ್ಯುಲೆನ್ಸಲ್ಲಿದ್ದ ಚಾಲಕ, ನರ್ಸ್, ಕೊರೊನಾ ಆಸ್ಪತ್ರೆ ಒಳಗೆ ಓಡಿ ಹೋಗಿದ್ದಾರೆ.

ನೂರಕ್ಕೂ ಹೆಚ್ಚು ಜನರ ಗುಂಪು ಏಕಾಏಕಿ ಆಸ್ಪತ್ರೆಯ ಐ.ಸಿ.ಯು ಗೆ ನುಗ್ಗಿ ದಾಂದಲೆ ನಡೆಸಿದ್ದು ಈ ಕೃತ್ಯ ಪೂರ್ವನಿಯೋಜಿತ ಕೃತ್ಯವೇ ಎಂಬ ಪ್ರಶ್ನೆ ಕಾಡುತ್ತಿದೆ?. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಸ್ಥಳಕ್ಕೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಎಸ್ಪಿ ಲಕ್ಷ್ಮಣ ನಿಂಬರಗಿ, ಪೊಲೀಸ್ ಕಮಿಷನರ್ ಡಾ.ಕೆ.ತ್ಯಾಗರಾಜ, ಜಿ.ಪಂ ಸಿಇಒ ರಾಜೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಸ್ಪತ್ರೆಯ ಆವರಣದಲ್ಲಿ ಇದೀಗ ನಿಷೇದಾಜ್ಞೆಯನ್ನು ಜಾರಿಗೊಳಿಸಲಾಗಿದೆ.