ಬೆಳ್ತಂಗಡಿ, ಜೂನ್ 13: ಸ್ಥಳೀಯ ಪತ್ರಿಕೋದ್ಯಮವನ್ನು ಮತ್ತಷ್ಟು ಬಲಪಡಿಸುವ ಹಾಗೂ ಪತ್ರಕರ್ತರ ಹಿತರಕ್ಷಣೆಗೆ ಒತ್ತು ನೀಡುವ ಉದ್ದೇಶದಿಂದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ನ ಬೆಳ್ತಂಗಡಿ ತಾಲೂಕು ಘಟಕದ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು.
ಸಂಘದ ಮುಂದಿನ ಅವಧಿಗೆ ಎಲ್ಲಾ ಹುದ್ದೆಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಇದು ಬೆಳ್ತಂಗಡಿ ತಾಲೂಕಿನ ಪತ್ರಕರ್ತರ ಒಗ್ಗಟ್ಟು ಹಾಗೂ ಸಂಘಟನಾ ಬದ್ಧತೆಗೆ ಸಾಕ್ಷಿಯಾಗಿದೆ. ನೂತನ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ಹಿರಿಯ ಪತ್ರಕರ್ತ ಹೆರಾಲ್ಡ್ ಪಿಂಟೋ, ಅಧ್ಯಕ್ಷರಾಗಿ ನಿಶಾನ್ ಬಂಗೇರ ನಾರ್ಯ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಸಾದ್ ಮುಗುಳಿ, ಕೋಶಾಧಿಕಾರಿಯಾಗಿ ಸುದೀಪ್ ಸಾಲಿಯಾನ್, ಕಾರ್ಯದರ್ಶಿಯಾಗಿ ಶ್ರೇಯಾ ಶೆಟ್ಟಿ, ಉಪಾಧ್ಯಕ್ಷರಾಗಿ ಅನಂತ್ ಭಟ್ ಆಯ್ಕೆಯಾಗಿದ್ದಾರೆ.
ಇದಲ್ಲದೆ ಸಂಘಟನಾ ಕಾರ್ಯದರ್ಶಿಗಳಾಗಿ ಸಂದೀಪ್ ಶೆಟ್ಟಿ, ರೂಪೇಶ್ ಗೌಡ ಶಿಬಾಜೆ ಹಾಗೂ ಸುನೀಲ್ ಗಾರ್ಡಡಿ ಆಯ್ಕೆಯಾಗಿದ್ದು, ತಾಲೂಕಿನ ಮೂಲೆ ಮೂಲೆಗೂ ಸಂಘಟನೆಯನ್ನು ಬಲಪಡಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಆಯ್ಕೆ ಸಭೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಅಧ್ಯಕ್ಷ ಈಶ್ವರ್ ವಾರಣಾಶಿ ಮಾತನಾಡಿ, “ಬೆಳ್ತಂಗಡಿ ಘಟಕವು ಸದಾ ಸಂಘಟನೆಯಲ್ಲಿ ಮಾದರಿಯಾಗಿ ಗುರುತಿಸಿಕೊಂಡಿದೆ. ನೂತನ ತಂಡವು ಪತ್ರಕರ್ತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಬೇಕು” ಎಂದು ಕರೆ ನೀಡಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಪ್ರಕಾಶ್ ಅವರು ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು.ಸಭೆಯಲ್ಲಿ ತಾಲೂಕಿನ ವಿವಿಧ ಭಾಗಗಳ ಪತ್ರಕರ್ತರು ಉಪಸ್ಥಿತರಿದ್ದು, ನೂತನ ತಂಡಕ್ಕೆ ಶುಭಾಶಯಗಳನ್ನು ಕೋರಿದರು.





