ಬೆಳ್ತಂಗಡಿ: ಮುಂಡಾಜೆ ಗ್ರಾಮದ ಸೀಟು–ಕಾಯರ್ತೋಡಿ–ಕೊಡಂಗೆ–ಮೂಲಾರು ಕುಡೆಂಚಿ ಸಂಪರ್ಕ ರಸ್ತೆ ಕಳೆದ ಹಲವು ದಶಕಗಳಿಂದ ಅಭಿವೃದ್ಧಿಯ ನಿರೀಕ್ಷೆಯಲ್ಲೇ ಉಳಿದಿದ್ದು, ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸುಮಾರು 200ಕ್ಕೂ ಹೆಚ್ಚು ಮನೆಗಳಿಗೆ ಪ್ರಮುಖ ಸಂಪರ್ಕ ಕಲ್ಪಿಸುವ 6 ಕಿಲೋಮೀಟರ್ ಉದ್ದದ ಈ ರಸ್ತೆಗೆ ಸಮರ್ಪಕ ಅಭಿವೃದ್ಧಿ ಕಾಮಗಾರಿ ಇನ್ನೂ ದೊರೆತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪ್ರತಿ ವರ್ಷ ರಸ್ತೆ ಅಭಿವೃದ್ಧಿಯಾಗುವ ನಿರೀಕ್ಷೆಯಲ್ಲಿರುವ ಜನರ ಕನಸು ಇನ್ನೂ ನನಸಾಗಿಲ್ಲ. 6 ಕಿ.ಮೀ. ರಸ್ತೆಯಲ್ಲಿ ಕೇವಲ ಅರ್ಧ ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾತ್ರ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದ್ದು, ಉಳಿದ ಭಾಗ ಕಚ್ಚಾ ರಸ್ತೆಯಾಗಿ ಉಳಿದಿದೆ. ಸುಮಾರು 30 ವರ್ಷಗಳ ಹಿಂದೆ ಸುಮಾರು 700 ಮೀಟರ್ ರಸ್ತೆಗೆ ಡಾಮರೀಕರಣ ಮಾಡಲಾಗಿದ್ದರೂ, ಬಳಿಕ ಯಾವುದೇ ನಿರ್ವಹಣೆ ನಡೆಯದ ಕಾರಣ ಡಾಂಬರು ಸಂಪೂರ್ಣ ಹಾಳಾಗಿ ಕಲ್ಲುಗಳು ಮೇಲಕ್ಕೆ ಬಂದಿದ್ದು ವಾಹನ ಸಂಚಾರ ದುಸ್ತರವಾಗಿದೆ.
ಈ ರಸ್ತೆಯ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಕೊರಗ ಸಮುದಾಯದ ಕುಟುಂಬಗಳು ವಾಸಿಸುತ್ತಿದ್ದು, ಮೂಲಭೂತ ರಸ್ತೆ ಸೌಲಭ್ಯದಿಂದ ಇನ್ನೂ ವಂಚಿತರಾಗಿದ್ದಾರೆ. ಮಳೆಗಾಲದಲ್ಲಿ ರಸ್ತೆ ಮತ್ತಷ್ಟು ಹದಗೆಡುವುದರಿಂದ ಶಾಲಾ ಮಕ್ಕಳು, ವೃದ್ಧರು ಹಾಗೂ ರೋಗಿಗಳನ್ನು ಸಂಚಾರ ಮಾಡಿಸುವುದು ದೊಡ್ಡ ಸವಾಲಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಕಾಮಗಾರಿಗೆ ಶಿಲಾನ್ಯಾಸ; ಕಾಮಗಾರಿ ಮಾತ್ರ ಸ್ಥಗಿತ:
ಕಳೆದ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗುವ ಕೆಲವೇ ದಿನಗಳ ಮೊದಲು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅದ್ದೂರಿಯಾಗಿ ಶಿಲಾನ್ಯಾಸ ನೆರವೇರಿಸಲಾಗಿತ್ತು. ಬಳಿಕ ಕೆಲ ದಿನ ರಸ್ತೆ ಅಗೆದು, ಜಲ್ಲಿ ಹಾಕುವ ಕಾಮಗಾರಿ ನಡೆದಿದ್ದು, ಜೆಸಿಬಿ ಯಂತ್ರವೂ ಸ್ಥಳದಲ್ಲಿತ್ತು. ಆದರೆ ಏಕಾಏಕಿ ಕಾಮಗಾರಿ ಸ್ಥಗಿತಗೊಂಡು ಯಂತ್ರಗಳನ್ನು ಸ್ಥಳದಿಂದ ತೆರವುಗೊಳಿಸಲಾಯಿತು. ನಂತರ ಯಾವುದೇ ಪ್ರಗತಿ ಕಾಣದ ಕಾರಣ ಈಗಾಗಲೇ ಇದ್ದ ರಸ್ತೆಯೂ ಮತ್ತಷ್ಟು ಹಾಳಾಗಿದ್ದು, ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚುನಾವಣೆ ವೇಳೆ ಮಾತ್ರ ಭರವಸೆ ಎಂಬ ಆರೋಪ:
“ಪ್ರತಿ ಚುನಾವಣೆ ಬಂದಾಗ ರಸ್ತೆ ಅಭಿವೃದ್ಧಿಯ ಹೆಸರಿನಲ್ಲಿ ತೆಂಗಿನಕಾಯಿ ಒಡೆದು ಶಿಲಾನ್ಯಾಸ ನೆರವೇರಿಸಲಾಗುತ್ತದೆ. ಆದರೆ ಚುನಾವಣೆ ಮುಗಿದ ಬಳಿಕ ಜನಪ್ರತಿನಿಧಿಗಳು ಈ ಭಾಗದತ್ತ ಸುಳಿಯುವುದೇ ಇಲ್ಲ. ವರ್ಷದಿಂದ ವರ್ಷಕ್ಕೆ ಭರವಸೆ ಮಾತ್ರ ಸಿಗುತ್ತಿದೆ, ರಸ್ತೆ ಮಾತ್ರ ಅಭಿವೃದ್ಧಿಯಾಗುತ್ತಿಲ್ಲ,” ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ರಸ್ತೆ ಅಭಿವೃದ್ಧಿಗೆ ಏಕಕಾಲದಲ್ಲಿ 143 ಕುಟುಂಬಗಳಿಂದ ಪ್ರತ್ಯೇಕ ಮನವಿ:
ಗ್ರಾಮೀಣ ರಸ್ತೆ ಅಭಿವೃದ್ಧಿಗಾಗಿ ಗ್ರಾಮ ಪಂಚಾಯತ್ ವಾರ್ಡ್ ಸಭೆಯಲ್ಲಿ ಬರೋಬ್ಬರಿ 143 ಕುಟುಂಬಗಳು ಪ್ರತ್ಯೇಕವಾಗಿ ಮನವಿ ಸಲ್ಲಿಸಿರುವುದು ತಾಲೂಕಿನ ಇತಿಹಾಸದಲ್ಲೇ ಇದೇ ಮೊದಲ ಘಟನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇಷ್ಟೊಂದು ಕುಟುಂಬಗಳು ಒಗ್ಗೂಡಿ ಒಂದೇ ರಸ್ತೆಯ ಅಭಿವೃದ್ಧಿಗಾಗಿ ಮನವಿ ಸಲ್ಲಿಸಿದ್ದು, ಕಾಮಗಾರಿ ಇನ್ನಾದರೂ ಆರಂಭವಾಗುವುದೋ ಕಾದು ನೋಡಬೇಕಿದೆ.
ಕಾಮಗಾರಿ ಪುನರಾರಂಭವಾಗಲಿದೆ ಎಂಬ ಭರವಸೆಯೊಂದಿಗೆ ಹಲವು ಬಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ ಇದುವರೆಗೆ ಯಾವುದೇ ಸ್ಪಷ್ಟ ಪ್ರಗತಿ ಕಂಡುಬಂದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಕುಟುಂಬಗಳ ಜೀವನಾಡಿಯಾಗಿರುವ ಈ ರಸ್ತೆಯನ್ನು ಶೀಘ್ರವೇ ಅಭಿವೃದ್ಧಿಪಡಿಸಿ, ಗ್ರಾಮಸ್ಥರ ಬಹುಕಾಲದ ಬೇಡಿಕೆಯನ್ನು ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಈಡೇರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.




