ಐಐಟಿ ದೆಹಲಿ ಸೇರಿದಂತೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಎಕ್ಸೆಲ್ ವಿದ್ಯಾರ್ಥಿಗಳ ಆಯ್ಕೆ
ಗುರುವಾಯನಕೆರೆ, ಜೂನ್ 18: ಭಾರತದ ಪ್ರತಿಷ್ಠಿತ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಾದ ಐಐಟಿ, ಎನ್ಐಟಿ, ಐಐಐಟಿ ಹಾಗೂ ಇತರೆ ಸರ್ಕಾರಿ ಅನುದಾನಿತ ತಾಂತ್ರಿಕ ಸಂಸ್ಥೆಗಳ (ಜಿಎಫ್ಟಿಐ) ಪ್ರವೇಶಕ್ಕಾಗಿ ಕೇಂದ್ರ ಶಿಕ್ಷಣ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಜಂಟಿ ಸೀಟು ಹಂಚಿಕೆ ಪ್ರಾಧಿಕಾರ (JoSAA) ನಡೆಸಿದ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಎಕ್ಸೆಲ್ ಪದವಿಪೂರ್ವ ಕಾಲೇಜು, ಗುರುವಾಯನಕೆರೆಯ ಹಲವು ವಿದ್ಯಾರ್ಥಿಗಳು ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಹರ್ಷಿತ ಎಸ್ ಅವರು ಐಐಟಿ ದೆಹಲಿಗೆ, ವಿನಯ್ ಕೆ. ಸಜ್ಜನರ್ ಎನ್ಐಟಿ ವಾರಂಗಲ್ಗೆ, ಕೆ.ಕೆ. ಸರ್ವಿಕ್ ಹಾಗೂ ರೋಹಿತ್ ಆರ್.ಎಲ್. ಅವರು ಐಐಟಿ ಧಾರವಾಡಕ್ಕೆ ಆಯ್ಕೆಯಾಗಿದ್ದಾರೆ. ಇದೇ ವೇಳೆ ಸಮ್ಯಕ್ ವಿನಯ್, ಅಕ್ಷಯ್ ಎ., ಶಶಾಂಕ್ ಗೌಡ, ಸ್ವಸ್ತಿಕ್ ಎ. ಜೈನ್, ತೇಜಲ್ ವಿ. ವಂಟಕರ್ ಹಾಗೂ ಅಭಿನವ್ ಕೆ. ಮಯ್ಯ ಅವರು ಎನ್ಐಟಿಕೆ ಸುರತ್ಕಲ್ಗೆ ಪ್ರವೇಶ ಪಡೆದಿದ್ದಾರೆ. ಯಶಸ್ ಗೌಡ ಎನ್. ಅವರು ಎನ್ಐಟಿ ರೌರ್ಕೆಲಾಗೆ ಹಾಗೂ ಪೂರ್ವಿಕ ಜೆ. ಅವರು ಎನ್ಐಟಿ ರಾಯ್ಪುರಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಪೋಷಕರು ಸಂತಸ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.






