ಎರಡು ವರ್ಷಗಳಿಂದ ಸಂಕಷ್ಟದಲ್ಲೇ ಪ್ರಯಾಣಿಕರು – ರೈತರು, ವಿದ್ಯಾರ್ಥಿಗಳು, ಕೂಲಿಕಾರ್ಮಿಕರ ಗೋಳಿಗೆ ಸ್ಪಂದಿಸುವವರು ಯಾರು?

ಉಜಿರೆ: ಉಜಿರೆ ಮತ್ತು ಇಂದಬೆಟ್ಟು ಗ್ರಾಮಗಳ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಅಂಬಡೆಬೆಟ್ಟು ಸೇತುವೆ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ರಸ್ತೆ ಜೂನ್ 9ರಂದು ಸುರಿದ ಭಾರಿ ಮಳೆಯ ಹೊಡೆತಕ್ಕೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಪರಿಣಾಮ ಈ ಮಾರ್ಗದಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಸಾರ್ವಜನಿಕರ ಕಾಲ್ನಡಿಗೆಯ ಸಂಚಾರವೂ ಅಪಾಯಕಾರಿಯಾಗಿ ಪರಿಣಮಿಸಿದೆ.
ಕಳೆದ ಎರಡು ವರ್ಷಗಳ ಹಿಂದೆ ಅಂಬಡೆಬೆಟ್ಟು ಸಂಪರ್ಕ ಸೇತುವೆ ಹಾನಿಗೊಳಗಾಗಿ ಸಂಚಾರಕ್ಕೆ ಅನರ್ಹವಾಗಿತ್ತು. ಬಳಿಕ ಹೊಸ ಸೇತುವೆ ನಿರ್ಮಾಣಕ್ಕೆ ಅನುಮೋದನೆ ದೊರೆತ ಹಿನ್ನೆಲೆಯಲ್ಲಿ ಹಳೆಯ ಸೇತುವೆಯ ಪಕ್ಕದಲ್ಲಿ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಿ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ಬಾರಿ ಸುರಿದ ಭಾರಿ ಮಳೆಗೆ ಆ ರಸ್ತೆ ಸಂಪೂರ್ಣವಾಗಿ ಕೊಚ್ಚಿಹೋಗಿದ್ದು, ಮತ್ತೆ ಜನರು ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ.

ಹೊಸ ಸೇತುವೆ ಕಾಮಗಾರಿ ನಡುವೆ ಜನರಿಗೆ ಸಂಕಷ್ಟ: ಕೊಚ್ಚಿಹೋದ ಪರ್ಯಾಯ ರಸ್ತೆ
ಮಳೆಗಾಲದಲ್ಲಿ ಹೆಚ್ಚಿದ ಜನರ ತೊಂದರೆ:
ಪ್ರಸ್ತುತ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದರೂ ಮಳೆಗಾಲ ಆರಂಭವಾಗಿರುವುದರಿಂದ ಕಾಮಗಾರಿ ವೇಗ ಕುಂಠಿತಗೊಂಡಿದೆ. ಇದೇ ವೇಳೆ ತಾತ್ಕಾಲಿಕ ರಸ್ತೆಯೂ ಹಾನಿಗೊಳಗಾದ ಕಾರಣ ಇಡೀ ಮಳೆಗಾಲದಲ್ಲಿ ಈ ಮಾರ್ಗದಲ್ಲಿ ಸಂಚರಿಸುವುದು ಅಸಾಧ್ಯವಾಗುವ ಆತಂಕ ಎದುರಾಗಿದೆ.
ಈ ಭಾಗದ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಸಾಗಿಸಲು, ಕೂಲಿಕಾರ್ಮಿಕರು ಕೆಲಸದ ಸ್ಥಳಗಳಿಗೆ ತೆರಳಲು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳಿಗೆ ತಲುಪಲು ಪ್ರತಿನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ. ಪರ್ಯಾಯವಾಗಿ ಬಳಸಲಾಗುತ್ತಿರುವ ರಸ್ತೆಯು ಕಿರಿದಾಗಿದ್ದು, ವಾಹನ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಅಪಘಾತದ ಭೀತಿಯೂ ಹೆಚ್ಚಿದೆ.
ಬಸ್ ಸಂಚಾರಕ್ಕೂ ಅಡ್ಡಿ
ಗುರಿಪಳ್ಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಚರಿಸುವ ಬಸ್ಗಳು ಇದೀಗ ನೇರ ಮಾರ್ಗ ಬಿಟ್ಟು ನೇತ್ರಾವತಿನಗರ–ಬೆಳ್ಳೂರಬೈಲು–ಕಾನರ್ಪ ಮಾರ್ಗವಾಗಿ ಉಜಿರೆಗೆ ಸಂಚರಿಸುತ್ತಿವೆ. ಇದರಿಂದ ಪ್ರಯಾಣದ ದೂರ ಹಾಗೂ ಸಮಯ, ಎರಡೂ ಹೆಚ್ಚಾಗಿದ್ದು, ವಿದ್ಯಾರ್ಥಿಗಳು ಮತ್ತು ನಿತ್ಯ ಪ್ರಯಾಣಿಕರು ಹೆಚ್ಚುವರಿ ತೊಂದರೆ ಅನುಭವಿಸುತ್ತಿದ್ದಾರೆ.
ಅಂಬಡೆಬೆಟ್ಟು ರಸ್ತೆ ಬಂದ್ – ಸುತ್ತು ಬಳಸಿ ಸಂಚರಿಸುವ ಅನಿವಾರ್ಯತೆ
ಪರ್ಯಾಯ ಮಾರ್ಗಗಳ ಮಾಹಿತಿ
ಅಂಬಡೆಬೆಟ್ಟು ರಸ್ತೆ ಸಂಪೂರ್ಣ ಬಂದ್ ಆಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ.
• ಉಜಿರೆಯಿಂದ ಇಂದಬೆಟ್ಟು ಕಡೆಗೆ ತೆರಳುವವರು ಉಜಿರೆ–ಸುರ್ಯ ರಸ್ತೆ ಬಳಸಬಹುದು.
•ಬೆಳ್ತಂಗಡಿ ಹಾಗೂ ಲಾಯಿಲ ಕಡೆಯಿಂದ ಬರುವವರು ಲಾಯಿಲ–ಇಂದಬೆಟ್ಟು ಮಾರ್ಗ ಬಳಸುವಂತೆ ತಿಳಿಸಲಾಗಿದೆ.
•ಗುರಿಪಳ್ಳ-ಮನ್ನಡ್ಕ ನೇತ್ರಾವತಿಗರ, ಬೆಳ್ಳೂರು ಬೈಲು, ಕಾನರ್ಪ, ಸೋಮಂತ್ತಡ್ಕ ಮಾರ್ಗವಾಗಿ ಉಜಿರೆ ಸಂಪರ್ಕಿಸಬಹುದು
‘ಇನ್ನೆಷ್ಟು ದಿನ ಈ ತೊಂದರೆ?’ ಅಂಬಡೆಬೆಟ್ಟು ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹ
ತಕ್ಷಣ ಕ್ರಮಕ್ಕೆ ಸಾರ್ವಜನಿಕರ ಆಗ್ರಹ:
“ಕಳೆದ ಎರಡು ವರ್ಷಗಳಿಂದಲೇ ಈ ರಸ್ತೆಯ ಸಮಸ್ಯೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇದೀಗ ತಾತ್ಕಾಲಿಕ ರಸ್ತೆಯೂ ಕೊಚ್ಚಿ ಹೋಗಿರುವುದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಸಂಬಂಧಪಟ್ಟ ಇಲಾಖೆ ತುರ್ತು ಕ್ರಮ ಕೈಗೊಂಡು ಗುರಿಪಳ್ಳ–ಉಜಿರೆ ರಸ್ತೆ ಸಂಪರ್ಕವನ್ನು ಪುನಃ ಸ್ಥಾಪಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು” ಎಂದು ನಿತ್ಯ ಪ್ರಯಾಣಿಕ ಸತ್ಯಭಟ್ ಆಗ್ರಹಿಸಿದ್ದಾರೆ.
ಜನರ ಪ್ರಶ್ನೆ??????
ಹೊಸ ಸೇತುವೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ಈ ಭಾಗದ ಜನರು ಇನ್ನೆಷ್ಟು ದಿನ ಸಂಕಷ್ಟ ಅನುಭವಿಸಬೇಕು? ಮಳೆಗಾಲ ಮುಗಿಯುವವರೆಗೆ ಕಾಯಬೇಕೇ ಅಥವಾ ತಾತ್ಕಾಲಿಕವಾಗಿ ಸುರಕ್ಷಿತ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗುತ್ತದೆಯೇ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಜನಜೀವನದ ಮೇಲೆ ನೇರ ಪರಿಣಾಮ ಬೀರುತ್ತಿರುವ ಈ ಸಮಸ್ಯೆಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಶೀಘ್ರ ಸ್ಪಂದಿಸಬೇಕಾಗಿದೆ.




