ಬೆಳ್ತಂಗಡಿ, ಜು. 5: ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಎಸ್ಸಿ/ಎಸ್ಟಿ ಕುಂದುಕೊರತೆ ಸಭೆಯು ಇಂದು ಮಲೆಯಡ್ಕದಲ್ಲಿ ಬೆಳ್ತಂಗಡಿ ಪೊಲೀಸ್ ವೃತ್ತದ ಅಧಿಕಾರಿಗಳ ನೇತೃತ್ವದಲ್ಲಿ ನಡೆದಿದೆ.
ನಡ ಗ್ರಾಮದ ಮಲೆಯಡ್ಕದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಲಾಗಿರುವ ವಿವಾದಿತ ಹಾಟ್ ಮಿಕ್ಸ್ ಘಟಕದ ವಿವಾದ ಇದೀಗ ಮಹತ್ವದ ಹಂತ ತಲುಪಿದೆ. ಕಳೆದ ಕೆಲವು ದಿನಗಳಿಂದ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ತಂಡೋಪತಂಡವಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವುದು, ಘಟಕದ ವಿರುದ್ಧ ಆಡಳಿತಾತ್ಮಕ ಕ್ರಮ ಅನಿವಾರ್ಯವಾಗಲಿದೆಯೇ ಎಂಬ ಚರ್ಚೆಗೆ ಕಾರಣವಾಗಿದೆ.
ಈ ನಡುವೆ, ಇಂದು ಬೆಳ್ತಂಗಡಿ ಪೊಲೀಸ್ ವೃತ್ತದ ಅಧಿಕಾರಿಗಳ ನೇತೃತ್ವದಲ್ಲಿ ಮಲೆಯಡ್ಕದಲ್ಲಿ ನಡೆದ ಎಸ್ಸಿ/ಎಸ್ಟಿ ಕುಂದುಕೊರತೆ ಸಭೆಯು ಪ್ರಕರಣದ ಬೆಳವಣಿಗೆಗಳಿಗೆ ಹೊಸ ದಿಕ್ಕು ನೀಡುವ ಸಾಧ್ಯತೆ ಇದೆ. ಸಂತ್ರಸ್ತರು ಹಾಗೂ ಸ್ಥಳೀಯರ ನಿರೀಕ್ಷೆಯೂ ಈ ಸಭೆಯತ್ತ ನೆಟ್ಟಿದೆ.
ಕಳೆದ ವಾರ ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರ ನೇತೃತ್ವದಲ್ಲಿ ಆರೋಗ್ಯ, ಕಂದಾಯ ಹಾಗೂ ಪಂಚಾಯತ್ ಇಲಾಖೆಗಳ ಅಧಿಕಾರಿಗಳು ಘಟಕ ಮತ್ತು ಅದರ ದಾಖಲೆಗಳನ್ನು ಪರಿಶೀಲಿಸಿದ್ದರು. ಅದರ ಮರುದಿನವೇ ಘಟಕದಿಂದ ಹಾನಿಗೊಳಗಾಗಿದೆ ಎನ್ನಲಾದ ಮನೆಗಳು, ಕೃಷಿ ಭೂಮಿ ಹಾಗೂ ಬೆಳೆಗಳ ಕುರಿತು ವಿಸ್ತೃತ ಸರ್ವೇ ನಡೆಸಿ ವರದಿಯನ್ನು ಸಲ್ಲಿಸಲಾಗಿದೆ.
ಪರಿಶೀಲನೆ ವೇಳೆ ಕಂದಾಯ ಭೂಮಿ ಮತ್ತು ರಕ್ಷಿತ ಅರಣ್ಯ ಅತಿಕ್ರಮಣಕ್ಕೆ ಸಂಬಂಧಿಸಿದ ಗಂಭೀರ ಉಲ್ಲಂಘನೆಗಳು ಅಧಿಕಾರಿಗಳ ಗಮನಕ್ಕೆ ಬಂದಿರುವುದಾಗಿ ತಿಳಿದುಬಂದಿದೆ. ದಾಖಲೆಗಳ ಅಸಮರ್ಪಕತೆ, ಒತ್ತುವರಿ ಹಾಗೂ ವಿವಿಧ ನಿಯಮಗಳ ಉಲ್ಲಂಘನೆ ಕುರಿತು ಅಧಿಕಾರಿಗಳ ತಂಡ ಅಸಮಾಧಾನ ವ್ಯಕ್ತಪಡಿಸಿದೆ ಎನ್ನಲಾಗಿದೆ. ಇದೇ ವೇಳೆ, ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯೂ ಸಂತ್ರಸ್ತರ ಪರವಾಗಿ ಬಂದಿರುವುದು ಪ್ರಕರಣಕ್ಕೆ ಮತ್ತಷ್ಟು ಮಹತ್ವ ತಂದಿದೆ.
ಪ್ರಕರಣವನ್ನು ಸಂತ್ರಸ್ತರು ರಾಜ್ಯದ ಗೃಹ ಇಲಾಖೆಯ ಗಮನಕ್ಕೂ ತಂದಿದ್ದು, ದಾಖಲೆಗಳೊಂದಿಗೆ ದೂರು ಸಲ್ಲಿಸಿದ್ದಾರೆ. ಜೊತೆಗೆ ರಾಷ್ಟ್ರೀಯ ಬುಡಕಟ್ಟು ಆಯೋಗ ಹಾಗೂ ಪ್ರಧಾನಮಂತ್ರಿ ಕಚೇರಿಗೂ ಜಿಪಿಎಸ್ ಆಧಾರಿತ ಛಾಯಾಚಿತ್ರಗಳು, ವಿಡಿಯೊಗಳು ಮತ್ತು ದಾಖಲೆಗಳೊಂದಿಗೆ ಮನವಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂದಿನ ಎಸ್ಸಿ/ಎಸ್ಟಿ ಕುಂದುಕೊರತೆ ಸಭೆ ನಿರ್ಣಾಯಕ ಘಟ್ಟವಾಗಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ. ಅನಧಿಕೃತ ಎಂದು ಆರೋಪಿಸಲಾದ ಹಾಟ್ ಮಿಕ್ಸ್ ಘಟಕದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆಯೇ ಅಥವಾ ಘಟಕವನ್ನು ಸ್ಥಳಾಂತರಿಸುವ ಬಗ್ಗೆ ತೀರ್ಮಾನ ಹೊರಬೀಳುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.





