ಮಂತ್ರಾಲಯ ಧರ್ಮಜಾಗೃತಿ ತಾಣ: ಡಾ| ಹೆಗ್ಗಡೆ

ಮಂತ್ರಾಲಯ: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠ ಧರ್ಮ ಜಾಗೃತಿ ತಾಣವಾಗಿದ್ದು ದೈವಶಕ್ತಿ ಹೊಂದಿದ ಪುಣ್ಯಸ್ಥಳ ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ನುಡಿದರು.

READ ALSO

ಶ್ರೀ ಮಠದ ವತಿಯಿಂದ ಡಾ. ಹೆಗ್ಗಡೆಯವರನ್ನು ಗೌರವಿಸಲಾಯಿತು.

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶುಕ್ರವಾರದಿಂದ ಪ್ರಾರಂಭವಾದ ಶ್ರೀ ಗುರು ವೈಭವೋತ್ಸವದ ನಿಮಿತ್ತ ನಡೆದ ರಾಯರ ಪಟ್ಟಾಭಿಷೇಕ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇವರ ಕಣ್ತಪ್ಪಿಸಿ ಏನೂ ಮಾಡಲು ಸಾಧ್ಯವಿಲ್ಲ ನಮ್ಮ ಕಣ್ಣಿಗೆ ಕಾಣದ ಆಗಾಧ ಯಾವಾಗಲೂ ಜಾಗೃತವಾಗಿರುತ್ತದೆ. ಅದನ್ನೇ ನಾವೆಲ್ಲ ದೈವವೆಂದು ಪೂಜಿಸುತ್ತೇವೆ. 1969ರಲ್ಲಿ ನಾನು ಪ್ರಥಮ ಬಾರಿಗೆ ಮಂತ್ರಾಲಯದ ಕ್ಷೇತ್ರಕ್ಕೆ ಭೇಟಿ ನೀಡಿದ್ದೆ. ಆ ಮೇಲೆಯೂ ಸಾಕಷ್ಟು ಬಾರಿ ಬಂದು ಹೋಗಿದ್ದೇನೆ. ಆದರೆ, ಆಗ ಕಂಡ ಮಂತ್ರಾಲಯಕ್ಕೂ ಈಗ ನೋಡುತ್ತಿರುವ ಮಂತ್ರಾಲಯಕ್ಕೂ ಅಗಾಧ ಬದಲಾವಣೆ ಕಂಡು ಬರುತ್ತಿದೆ. ಭೌತಿಕ ಪ್ರಗತಿ ದೊಡ್ಡ ಮಟ್ಟದಲ್ಲಿ ಆಗಿದೆ. ಮಠದ ಪೀಠಾಧಿಪತಿಗಳ ಆಜ್ಞೆ ಅನುಸಾರ ಇಲ್ಲಿಗೆ ಬರುವ ಭಾಗ್ಯ ಸಿಕ್ಕಿದೆ ಎಂದರು.

ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಅನುಗ್ರಹ ಸಂದೇಶ ನೀಡಿ, ಗುರುವೈಭೋತ್ಸವ, ಜಾತ್ಯತೀತ, ಧರ್ಮಾತೀತ ಆಚರಣೆಯಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು 2009ರಲ್ಲಿ ಮಂತ್ರಾಲಯ ಕ್ಷೇತ್ರದಲ್ಲಿ ಉಂಟಾದ ಪ್ರವಾಹ ವೇಳೆ ಸಂಕಷ್ಟಕ್ಕೀಡಾದ ಜನರಿಗೆ ಅಗತ್ಯ ನೆರವು ನೀಡಿದ್ದಾರೆ. ಸ್ವಯಂ ಸೇವಕರನ್ನು ನೆರವಿಗೆ ಕಳುಹಿಸಿದ ಅವರಿಗೂ ಮಂತ್ರಾಲಯಕ್ಕೂ ವಿಶೇಷ ನಂಟಿದೆ. ಆದರ್ಶ ವ್ಯಕ್ತಿ ಹೇಗಿರಲಿ ಎನ್ನಲು ಹೆಗ್ಗಡೆಯವರಿಗಿಂತ ನಿದರ್ಶನ ಸಿಗುವುದಿಲ್ಲ. ಮಂತ್ರಾಲಯದ ಸೇರಿದಂತೆ ಶ್ರೀಮಠದ ಶಾಖಾ ಮಠ ಗುರುವೈಭೋತ್ಸವ ಕಾರ್ಯ ನಡೆಯಲಿವೆ. ಶ್ರೀಮಠದಲ್ಲಿ ಈ ಆರು ದಿನ ನಡೆಯುವ ಗುರುವೈಭೋತ್ಸವ ಕಾರ್ಯಕ್ರಮದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ ಎಂದರು.

ರಜತದ ಸಿಂಹ, ಅಶ್ವ,ಗಜ, ವಾಹನಗಳನ್ನು ಸಮರ್ಪಿಸಲಾಯಿತು. ಶ್ರೀಮಠದಲ್ಲೇ ಮುದ್ರಿಸಿದ ತಮಿಳು, ಕನ್ನಡ ಹಾಗೂ ತೆಲುಗು ಭಾಷೆಗಳ ಪಂಚಾಂಗವನ್ನು ಬಿಡುಗಡೆ ಗೊಳಿಸಲಾಯಿತು. ವಿದ್ವಾನ್ ರಾಜಾ ಎನ್. ಗಿರಿಯಾಚಾರ್ಯ, ವಿದ್ಯಾಪೀಠದ ಪ್ರಾಚಾರ್ಯ ಎನ್.ವಾದಿರಾಜಾಚಾರ್ಯ, ಪಂಚಮುಖಿ, ಶ್ರೀಮಠದ ವ್ಯವಸ್ಥಾಪಕರಾದ ವೆಂಕಟೇಶ ಜೋಶಿ ಇನ್ನಿತರರಿದ್ದರು.