ಪುನೀತ್‌ ನಿಧನದ ಬೆನ್ನಲ್ಲೇ ಕೇರಳ ಸರ್ಕಾರದ ಮಹತ್ವದ ನಿರ್ಧಾರ!

ತಿರುವನಂತಪುರಂ: ಕನ್ನಡದ ನಟ ಪುನೀತ್‌ ರಾಜ್‌ಕುಮಾರ್‌ ಅವರ ಹಠಾತ್‌ ನಿಧನದ (Puneeth Rajkumar Death) ಬೆನ್ನಲ್ಲೇ ಕೇರಳ ಸರ್ಕಾರ ರಾಜ್ಯಾದ್ಯಂತ ಇರುವ ಎಲ್ಲ ಜಿಮ್ನಾಷಿಯಂಗಳು, ಕ್ರೀಡಾಂಗಣಗಳು, ಒಳಾಂಗಣ ಕೋರ್ಟ್‌ಗಳಲ್ಲಿ ಮೂಲಭೂತ ಪ್ರಥಮ ಚಿಕಿತ್ಸಾ ಕಿಟ್‌ಗಳು (First Aid Kit) ಸೇರಿದಂತೆ ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್‌- ಎಇಡಿ-ಆಟೋಮೇಟೆಡ್‌ ಎಕ್ಸ್‌ಟರ್ನಲ್‌ ಡಿಫಿಬ್ರಿಲೇಟರ್‌ಗಳನ್ನು (AED-Automated External Defibrillator) ಬಳಕೆಗೆ ಸಿದ್ಧವಾಗಿಟ್ಟುಕೊಳ್ಳುವ ಅವಶ್ಯಕತೆಯನ್ನು ಎತ್ತಿಹಿಡಿದಿದೆ.

ನಗರದ ರಾಯಲ್‌ ಬ್ಯಾಡ್ಮಿಂಟನ್‌ ಕೋರ್ಟಿನಲ್ಲಿ ಶನಿವಾರ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಾರಿಗೆ ಸಚಿವ ಅಂಟೋನಿ ರಾಜು (Antony Raju), ಕೇರಳದ ಕ್ರೀಡಾ ಸಚಿವ ವಿ. ಆಬ್ದುರೆಹಮಾನ್‌ (V.Abdurahiman) ಅವರೊಂದಿಗೆ ಚರ್ಚಿಸಿ ರಾಜ್ಯದಲ್ಲಿ ಇದನ್ನು ತುರ್ತಾಗಿ ಜಾರಿಗೆ ತರುವ ಭರವಸೆಯನ್ನು ನೀಡಿದರು.

READ ALSO

ಕನ್ನಡದ ನಟ ಪುನೀತ್‌ ರಾಜ್‌ಕುಮಾರ್‌ ಅವರ ಅಕಾಲ ನಿಧನದ ಬಗ್ಗೆ ನಮಗೆ ತಿಳಿದು ಬಂದಿದೆ. ಅವರು ಶುಕ್ರವಾರ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಎದೆನೋವು ಕಾಣಿಸಿಕೊಂಡಿತ್ತು. ಒಳಾಂಗಣ ಕೋರ್ಟ್‌ಗಳು, ಜಿಮ್‌ಗಳಲ್ಲಿ ಪ್ರಾಥಮಿಕ ಚಿಕಿತ್ಸಾ ಉಪಕರಣಗಳು ಸಿದ್ಧವಾಗಿರದ ಕಾರಣ ಅವರ ಪ್ರಾಣ ಉಳಿಸಲಾಗಲಿಲ್ಲ. ನಮ್ಮ ರಾಜ್ಯದ ಯಾವುದೇ ಕ್ರೀಡಾಪಟು ಈ ರೀತಿಯ ಸಮಸ್ಯೆಯಿಂದ ಬಳಲಬಾರದು. ಈ ನಿಟ್ಟಿನಲ್ಲಿ ಜಿಮ್‌ ಹಾಗೂ ಒಳಾಂಗಣ ಕೋರ್ಟ್‌ಗಳಲ್ಲಿ ಪ್ರಾಥಮಿಕ ಚಿಕಿತ್ಸೆಯ ಉಪಕರಣಗಳನ್ನು ಬಳಕೆಗೆ ಸಿದ್ಧವಾಗಿಡುವುದನ್ನು ಕಡ್ಡಾಯಗೊಳಿಸಬೇಕು. ಸಂಬಂಧಪಟ್ಟಇಲಾಖೆಗಳು ಈ ನಿಟ್ಟಿನಲ್ಲಿ ತುರ್ತುಕ್ರಮವನ್ನು ತೆಗೆದಿಕೊಳ್ಳಬೇಕು ಎಂದು ಅಂಟೋನಿ ಅಭಿಪ್ರಾಯಪಟ್ಟರು.

ನಗರದ ಪ್ರಮುಖ ವೈದ್ಯಕೀಯ ಸಂಸ್ಥೆಯಾದ ನಿಮ್ಸ್ ಮೆಡಿ ಸಿಟಿಯ (NIMS Medi City) ಆಶ್ರಯದಲ್ಲಿ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮ ನಡೆಯಿತು. ನಿಮ್ಸ್ ಮೆಡಿ ಸಿಟಿಯ ಮುಖ್ಯಸ್ಥ ಫೈಝಲ್ ಖಾನ್ (Faizal Khan)ಮಾತನಾಡಿ, ವಿವಿಧ ಸಂಸ್ಥೆಗಳ ಪ್ರತಿನಿಧಿಗಳಿಗೆ ಪ್ರಥಮ ಚಿಕಿತ್ಸಾ ಸೌಲಭ್ಯದ ಬಗ್ಗೆ ಉಚಿತ ತರಬೇತಿ ನೀಡಲು ತಮ್ಮ ಆಸ್ಪತ್ರೆ ಸಿದ್ಧವಾಗಿದೆ ಎಂದು ಹೇಳಿದರು.

ಪ್ರಥಮ ಚಿಕಿತ್ಸೆ ತರಬೇತಿ ಎಲ್ಲರಿಗೂ ನೀಡಲಾಗುವುದು!

“ಸಾಮಾನ್ಯ ಜನರಿಗೆ ಮೂಲಭೂತ ಪ್ರಥಮ ಚಿಕಿತ್ಸೆಯಲ್ಲಿ ಒಂದು ದಿನದ ತರಬೇತಿ ನೀಡಬೇಕಾಗಿದೆ. ನಾವು ಈಗಾಗಲೇ ಇಂತಹ ಕಾರ್ಯಕ್ರಮವನ್ನು ಅಯೋಜಿಸಿದ್ದೇವೆ ಮತ್ತು ಈಗ ನಟ ಪುನೀತ್ ರಾಜ್‌ಕುಮಾರ್ ಅವರ ನಿಧನದ ದುಃಖದ ಸುದ್ದಿಯೊಂದಿಗೆ, ನಾವು ಈ ಪ್ರಥಮಚಿಕಿತ್ಸಾ ತರಬೇತಿ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸಲು ನಿರ್ಧರಿಸಿದ್ದೇವೆ. ತರಬೇತಿ ಕಾರ್ಯಕ್ರಮಕ್ಕ ಪಾಲ್ಗೊಳ್ಳುವ ಎಲ್ಲರಿಗೂ ನಾವು ಉಚಿತ ಕಿಟ್‌ಗಳು ಮತ್ತು ಪ್ರಮಾಣಪತ್ರವನ್ನು ನೀಡುತ್ತೇವೆ. ತರಬೇತಿ ಕಾರ್ಯಕ್ರಮವನ್ನು ಈ ಕ್ಷೇತ್ರದ ಪರಿಣಿತರು ನೀಡುತ್ತಾರೆ ಮತ್ತು ತರಬೇತಿ ಪಡೆದವರು ಅದನ್ನು ಇತರರೊಂದಿಗೆ ಹಂಚಿಕೊಳ್ಳಬಹುದು” ಎಂದು ಖಾನ್ ಹೇಳಿದರು.

ರಾಯಲ್ ಬ್ಯಾಡ್ಮಿಂಟನ್ ಕೋರ್ಟ್ ಮಾಲಿಕ ಆದಿತ್ಯ ವರ್ಮಾ (Aditya Varma) ಅವರು ಎಲ್ಲಾ ಮೂಲಭೂತ ಪ್ರಥಮ ಚಿಕಿತ್ಸಾ ಕಿಟ್‌ಗಳನ್ನು ತಮ್ಮ ಬ್ಯಾಡ್ಮಿಂಟನ್‌ ಕೋರ್ಟಿನಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳುವುದಾಗಿ ಘೋಷಿಸಿದರು.”ನಾನು 14 ವರ್ಷಗಳ ಹಿಂದೆ ಕೊಲ್ಲಂ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನನ್ನ ತಂದೆಯನ್ನು ಕಳೆದುಕೊಂಡೆ. ಅಪಘಾತದ ನಂತರ ಅವರನ್ನು ತಡವಾಗಿ ಆಸ್ಪತ್ರೆಗೆ ಕರೆತರಲಾಯಿತು. ಬಹುಶಃ, ಅವರನ್ನು ಆಸ್ಪತ್ರೆಗೆ ಕರೆದೊಯ್ದವರಿಗೆ ಪ್ರಾಥಮಿಕ ಚಿಕಿತ್ಸೆಯ ಬಗ್ಗೆ ಸ್ವಲ್ಪ ಜ್ಞಾನವಿದ್ದರೆ, ಅವರ ಜೀವಂತವಿರುತ್ತಿದ್ದರು ಈಗ ಕನ್ನಡ ನಟನ ಹಠಾತ್ ನಿಧನದಿಂದ, ಮೂಲಭೂತ ಪ್ರಥಮ ಚಿಕಿತ್ಸಾ ತರಬೇತಿಯನ್ನು ನೀಡುವ ಯೋಜನೆಯ್ನು ಡೊಡ್ಡ ಮಟ್ಟದಲ್ಲಿ ಕೊಂಡೊಯ್ಯುವ ಪಾತ್ರವನ್ನು ನಾನು ತೆಗೆದುಕೊಳ್ಳುತ್ತೇನೆ” ಎಂದು ವರ್ಮಾ ಹೇಳಿದರು.