ಮಿಯಾರು, ಜು. 12: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಮಠ ಮಿಯಾರು ಇದರ ವತಿಯಿಂದ ಪಂತ್ಯಡ್ಕದ ದಿನೇಶ್ ಗೌಡ ಅವರ ಗದ್ದೆಯಲ್ಲಿ ವಿದ್ಯಾರ್ಥಿಗಳಿಗೆ ನೇಜಿ ನಾಟಿ ಮಾಡುವ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಸಿ.ಎ. ಬ್ಯಾಂಕ್ ಧರ್ಮಸ್ಥಳದ ಅಧ್ಯಕ್ಷರಾದ ಪ್ರೀತಂ ಹಾಗೂ ವ್ಯವಸ್ಥಾಪಕರಾದ ಶಶಿಧರ್ ಉದ್ಘಾಟಿಸಿದರು.
ಗ್ರಾಮೀಣ ಕೃಷಿ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ನೇಜಿ ನಾಟಿ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉತ್ಸಾಹದಿಂದ ಭಾಗವಹಿಸಿ, ಗದ್ದೆಗೆ ಇಳಿದು ಸಾಂಪ್ರದಾಯಿಕ ರೀತಿಯಲ್ಲಿ ಭತ್ತದ ನೇಜಿ ನಾಟಿ ಮಾಡುವ ವಿಧಾನವನ್ನು ಪ್ರಾಯೋಗಿಕವಾಗಿ ಕಲಿತರು.

ಕಾರ್ಯಕ್ರಮದ ಉದ್ಘಾಟನೆಯ ಬಳಿಕ ಹಿರಿಯ ರೈತರು ಮತ್ತು ಕೃಷಿ ತಜ್ಞರು ನೇಜಿ ನಾಟಿಯ ಮಹತ್ವ, ಭತ್ತದ ಬೆಳೆಯ ವಿಧಾನ ಹಾಗೂ ಕೃಷಿಯಲ್ಲಿನ ಶ್ರಮದ ಮೌಲ್ಯದ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಸ್ವತಃ ಗದ್ದೆಯಲ್ಲಿ ನೇಜಿ ನೆಟ್ಟು ಕೃಷಿಯ ಅನುಭವ ಪಡೆದರು.

ಬಳಿಕ ವಿದ್ಯಾರ್ಥಿಗಳಿಗೆ ನೇಜಿ ನಾಟಿಯ ಮಹತ್ವ, ನಾಟಿ ಮಾಡುವ ವಿಧಾನ ಹಾಗೂ ಭತ್ತದ ಕೃಷಿಯ ಕುರಿತು ಪ್ರಾಯೋಗಿಕವಾಗಿ ಮಾಹಿತಿ ನೀಡಲಾಯಿತು. ಇದೇ ವೇಳೆ ವಿದ್ಯಾರ್ಥಿಗಳಿಗೆ ಛತ್ರಿಗಳನ್ನು ವಿತರಿಸಲಾಯಿತು. ಹಾಗೂ ವಿದ್ಯಾರ್ಥಿ ಗಳಿಗೆ ಕೆಸರು ಗದ್ದೆಯಲ್ಲಿ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ನಾಟಿ ಕೃಷಿಯಲ್ಲಿ ಅನುಭವ ಇರುವ ಹೊನ್ನಮ ಪಂತ್ಯಡ್ಕ ಹಾಗೂ ಹುಕ್ರು ಕಾಪಾಯ ಎಂಬ ಇಬ್ಬರು ಹಿರಿಯರಿಗೆ ಶಾಲಾಭಿವೃದ್ಧಿ ಸಮಿತಿಯ ಪರವಾಗಿ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಬೊಮ್ಮಣ್ಣ ಗೌಡ, ನಾರಾಯಣ ಪಿಲಿಕಲ , ಶರತ್ ಅಭಿಷೇಕ್, ಸಜೀವ್, ಪೂರ್ಣಾಕ್ಷ, ವೆಂಕಟರಮಣ, ಸುಮಲತಾ ನವೀನ್ ಪೂಜಾರಿ, ದಿನೇಶ್ ಗೌಡ, sdmc ಸದಸ್ಯರು, ಪೋಷಕರು , ಶಾಲಾ ಶಿಕ್ಷಕರು, ಊರಿನ ಪ್ರಮುಖರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು





