ಸಕಲೇಶಪುರ: ಎತ್ತಿನಹೊಳೆ ಯೋಜನೆಯ ಪೈಪ್ಲೈನ್ ಸ್ಫೋಟಗೊಂಡ ಪರಿಣಾಮ ನೂರು ಅಡಿ ಎತ್ತರಕ್ಕೆ ನೀರು ಚಿಮ್ಮಿದ ಘಟನೆ ತಾಲೂಕಿನ ಹಲಸುಲಿಗೆ ಗ್ರಾಮದ ಬಳಿ ರವಿವಾರ (ಜು.12) ಬೆಳಗ್ಗೆ ನಡೆದಿದೆ.
ಪೈಪ್ಲೈನ್ ಸ್ಫೋಟಗೊಂಡ ವೇಳೆ ಭಾರೀ ಶಬ್ದ ಕೇಳಿಬಂದಿದ್ದು, ಗ್ರಾಮಸ್ಥರು ಆತಂಕಕ್ಕೊಳಗಾದರು. ಸ್ಫೋಟದ ಪರಿಣಾಮ ಅಪಾರ ಪ್ರಮಾಣದ ನೀರು ನೂರು ಅಡಿ ಎತ್ತರದವರೆಗೆ ಚಿಮ್ಮಿ ಸುತ್ತಮುತ್ತಲಿನ ಪ್ರದೇಶಕ್ಕೆ ಹರಿದಿದೆ.ಪೈಪ್ಲೈನ್ನಿಂದ ಹೊರಬಂದ ನೀರು ಸಮೀಪದ ಕಾಫಿ ತೋಟಗಳು ಹಾಗೂ ಕೃಷಿ ಜಮೀನುಗಳಿಗೆ ನುಗ್ಗಿದ್ದು, ಬೆಳೆಗಳಿಗೆ ಹಾನಿಯಾಗಿರುವ ಸಾಧ್ಯತೆ ಇದೆ. ಘಟನಾ ಸ್ಥಳದ ಮೇಲ್ಭಾಗದಲ್ಲಿ ಹಾದು ಹೊದ ವಿದ್ಯುತ್ ಲೈನ್ ನಲ್ಲಿ 219.44 MW ವಿದ್ಯುತ್ ಪ್ರಸರಣ ಆಗುತ್ತಿದ್ದು ಇದರ ಕೆಳಭಾಗದಲ್ಲಿ ಪೈಪ್ ಒಡೆದ ಸಂದರ್ಭದಲ್ಲಿ ವಿದ್ಯುತ್ ಪ್ರಸರಣ ನಿಲುಗಡೆ ಆಗಿರೊದರಿಂದ ಮಹಾ ಗಂಡಾಂತರ ತಪ್ಪಿದಂತಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಎತ್ತಿನಹೊಳೆ ಯೋಜನೆ ಸಂಪೂರ್ಣವಾಗಿ ಪೂರ್ಣಗೊಳ್ಳುವ ಮುನ್ನವೇ ಪೈಪ್ಲೈನ್ಗಳು ಪದೇ ಪದೇ ಸ್ಫೋಟಗೊಳ್ಳುತ್ತಿರುವುದು ಯೋಜನೆಯ ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.





