ಕೀರ್ತಿಶೇಷ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರ ಜನ್ಮದಿನದ ಪ್ರಯುಕ್ತ ವಿಶೇಷ ಪೂಜೆ…!

ಉಡುಪಿ: ಶ್ರೀಶಿರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ 58ನೇ ಜನ್ಮದಿನ ಹಾಗೂ ಜನ್ಮ ನಕ್ಷತ್ರ ಕಾರ್ಯಕ್ರಮವನ್ನು ಉಡುಪಿ ಒಳಕಾಡಿನಲ್ಲಿರುವ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಪೂರ್ವಾಶ್ರಮದ ಸಹೋದರರ ಮನೆಯಲ್ಲಿ ಸರಳ ರೀತಿಯಲ್ಲಿ ಆಚರಿಸಲಾಯಿತು.

ಶ್ರೀಪಾದರ ಜನ್ಮ ದಿನದ ಅಂಗವಾಗಿ ವಿಶೇಷ ಪಾರಾಯಣದೊಂದಿಗೆ ಶ್ರೀಪಾದರ ಮೃತ್ತಿಕಾ ವೃಂದಾವನಕ್ಕೆ ಅಭಿಷೇಕ ಸಹಿತ ಪೂಜೆಯನ್ನು ಸಲ್ಲಿಸಲಾಯಿತು. ಸಹೋದರ ಲಾಥವ್ಯ ಅಚಾರ್ಯ ಸೇರಿದಂತೆ ಕುಟುಂಬಿಕರು ಶ್ರೀಪಾದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

READ ALSO

ಅಂತೆಯೇ ಕೇಮಾರು ಶ್ರೀ ಸಾಂದೀಪಿನಿ ಮಠದ ಶ್ರೀ ಈಶವಿಠಲದಾಸ ಸ್ವಾಮೀಜಿಯವರ ಕೇಮಾರು ಮಠದಲ್ಲಿ ಶ್ರೀಪಾದರ ಜನ್ಮದಿನದ ಪ್ರಯುಕ್ತ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು. ಪೂಜಾ ನಂತರ ಶ್ರೀಪಾದರ ಭಾವ ಚಿತ್ರಕ್ಕೆ ಕೇಮಾರು ಶ್ರೀಪಾದರು ಆರತಿ ಬೆಳಗಿದರು.

ನಲವತ್ತೆಂಟು ವರ್ಷಗಳ ಕಾಲ ಶ್ರೀಕೃಷ್ಣ ಶ್ರೀವಿಠಲ ಮುಖ್ಯ ಪ್ರಾಣದೇವರಿಗೆ ಪೂಜೆ ಸಲ್ಲಿಸಿ ಮೂರು ಪರ್ಯಾಯವನ್ನು ವೈಭವದಲ್ಲಿ ನೆರವೇರಿಸಿದ ಶಿರೂರು ಶ್ರೀಪಾದರು ಧಾರ್ಮಿಕವಾಗಿ ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಬಹುವಿಧದ ಕೊಡುಗೆಗಳನ್ನು ಸಮಾಜಕ್ಕೆ ಸಲ್ಲಿಸಿದವರು. ದೀನದಲಿತರು ಬಡಬಗ್ಗರು ಕಲಾವಿದರ ಬಗ್ಗೆ ಶಿರೂರು ಶ್ರೀಪಾದರಿಗಿದ್ದ ಕಾಳಜಿ ಸ್ಮರಣೀಯ. ಕರೋನಾದ ಈ ಸಂಕಷ್ಟ ಕಾಲದಲ್ಲಿ ಅವರು ಇರುತ್ತಿದ್ದರೆ ತಕ್ಷಣ ಸ್ಪಂದಿಸಿ ಸಹಸ್ರಾರು ಮಂದಿಗೆ ಸಹಾಯದ ಹಸ್ತ ಚಾಚಿ ಉಪಕರಿಸುತ್ತಿದ್ದರು ಎಂದು ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜಿಯವರು ಶಿರೂರು ಶ್ರೀಪಾದರ ಸೇವೆಯನ್ನು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ಉಡುಪಿ ಗಾಂಧಿ ಆಸ್ಪತೆಯ ಕೋರೋನ ವಾರಿಯರ್ಸ್ ಗೆ ಹಾಗೂ ಸಿಬ್ಬಂದಿಗಳಿಗೆ ಶಿರೂರು ಶ್ರೀಪಾದರ ಪೂರ್ವಾಶ್ರಮದ ಬಂಧುಗಳಿಂದ ಆಹಾರ ಕಿಟ್ ವಿತರಿಸಲಾಯಿತು.
ಗಾಂಧಿ ಆಸ್ಪತ್ರೆಯ ಡಾ.ಹರಿಶ್ಚಂದ್ರ, ಡಾ.ವ್ಯಾಸರಾಜ ತಂತ್ರಿ ಡಾ.ವಿದ್ಯಾ ತಂತ್ರಿ ಹಾಗೂ ಶಿರೂರು ಶ್ರೀಪಾದರ ಪೂರ್ವಾಶ್ರಮದ ಸಹೋದರರು ಸಹಿತ ಕುಟುಂಬದ ಅನೇಕರು ಉಪಸ್ಥಿತರಿದ್ದರು.
ಲಾಕ್ ಡೌನ್ ನಿಮಿತ್ತ ಸರಳ ರೀತಿಯಲ್ಲಿ ಕಾರ್ಯಕ್ರಮ ನಡೆದಿತ್ತು.