ಹಲವು ವರ್ಷಗಳಿಂದ ಡಾಮರೀಕರಣದ ಭಾಗ್ಯವಿಲ್ಲ; ಗುಂಡಿಗಳ ರಸ್ತೆಯಾಗಿ ಮಾರ್ಪಟ್ಟ ನೆತ್ರಾವತಿ–ಅಜುಕ್ಕುರಿ–ಮುಂಡಾಜೆ ಸಂಪರ್ಕ ರಸ್ತೆ, ಜೀವ ಕೈಯಲ್ಲಿ ಹಿಡಿದು ಸಂಚಾರ!
ಬೆಳ್ತಂಗಡಿ: ಧರ್ಮಸ್ಥಳ–ಪಜಿರಡ್ಕ ಸಂಪರ್ಕಿಸುವ ನೆತ್ರಾವತಿ–ಅಜುಕ್ಕುರಿ–ಮುಂಡಾಜೆ ಸಂಪರ್ಕ ರಸ್ತೆ ಕಳೆದ 17ವರ್ಷಗಳ ಹಿಂದೆ ಸಡಕ್ ಯೋಜನೆಯಡಿಯಲ್ಲಿ ರಸ್ತೆ ಕಾಮಗಾರಿ ಆಗಿದ್ದು ಇದೀಗ ಮತ್ತೆ ಹಲವು ವರ್ಷಗಳಿಂದ ಸಮರ್ಪಕ ಡಾಮರೀಕರಣ ಕಾಣದೆ ಸಂಪೂರ್ಣ ಗುಂಡಿಮಯವಾಗಿ ಮಾರ್ಪಟ್ಟಿದ್ದು, ಜನರು ಪ್ರತಿನಿತ್ಯ ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.
ಗುಂಡಿಗಳ ನಡುವೆ ಜೀವದ ಹಂಗಿನಲ್ಲಿ ಸಂಚಾರ; ರಸ್ತೆ ಅಭಿವೃದ್ಧಿ ಯಾವಾಗ?
ಮಳೆ ಸುರಿದರೆ ರಸ್ತೆಯೋ, ಕೆರೆಯೋ ಎಂಬ ಸ್ಥಿತಿ ನಿರ್ಮಾಣವಾಗುತ್ತದೆ. ರಸ್ತೆಯುದ್ದಕ್ಕೂ ಉಂಟಾಗಿರುವ ಆಳವಾದ ಗುಂಡಿಗಳಲ್ಲಿ ನೀರು ತುಂಬಿ ನಿಂತಿರುವುದರಿಂದ ವಾಹನ ಸವಾರರಿಗೆ ಗುಂಡಿಗಳ ಆಳ ಅಂದಾಜಿಸುವುದೇ ಕಷ್ಟವಾಗಿದೆ. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಹಾಗೂ ಶಾಲಾ ವಿದ್ಯಾರ್ಥಿಗಳು ಅಪಘಾತದ ಭೀತಿಯಲ್ಲೇ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಈ ರಸ್ತೆ ಧರ್ಮಸ್ಥಳ, ಪಜಿರಡ್ಕ ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದ್ದರೂ, ವರ್ಷದಿಂದ ವರ್ಷಕ್ಕೆ ರಸ್ತೆ ಹದಗೆಡುತ್ತಲೇ ಬಂದಿದೆ. ಚುನಾವಣೆ ವೇಳೆ ರಸ್ತೆ ಅಭಿವೃದ್ಧಿಯ ಭರವಸೆ ನೀಡುವ ಜನಪ್ರತಿನಿಧಿಗಳು, ನಂತರ ಈ ರಸ್ತೆಯತ್ತ ತಿರುಗಿಯೂ ನೋಡುವುದಿಲ್ಲ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.
ಹಲವು ಬಾರಿ ಮನವಿ ಸಲ್ಲಿಸಿದರೂ, ಅಲ್ಲಲ್ಲಿ ತೇಪೆ ಕಾಮಗಾರಿ ನಡೆಸಿ ಕೈತೊಳೆದುಕೊಳ್ಳಲಾಗುತ್ತಿದೆ. ಮಳೆ ಬಂದ ಕೆಲವೇ ದಿನಗಳಲ್ಲಿ ಆ ತೇಪೆಗಳೂ ಕಿತ್ತು ಹೋಗಿ ರಸ್ತೆ ಮತ್ತೆ ಹಳೆಯ ಸ್ಥಿತಿಗೆ ಮರಳುತ್ತಿದೆ. ಇದರಿಂದ ಸಾರ್ವಜನಿಕರ ಹಣವೂ ವ್ಯರ್ಥವಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
17 ವರ್ಷಗಳಿಂದ ಶಾಶ್ವತ ಡಾಮರೀಕರಣದಿಂದ ವಂಚಿತವಾಗಿರುವ ಈ ರಸ್ತೆಗೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಹಾಗೂ ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ಮತ್ತೊಂದು ಅಪಘಾತ ಸಂಭವಿಸುವ ಮುನ್ನವೇ ರಸ್ತೆ ಅಭಿವೃದ್ಧಿಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಭರವಸೆ ಕೊಟ್ಟು ಕೈತೊಳೆದರೇ? ರಸ್ತೆ ಅಭಿವೃದ್ಧಿಗೆ ಮತ್ತೊಮ್ಮೆ ಜನಾಂದೋಲನದ ಎಚ್ಚರಿಕೆ!!!!
ಕಳೆದ ವರ್ಷವೂ ರಸ್ತೆ ದುರಸ್ತಿಗೆ ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ನಡೆಸಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದ್ದರು. ಆ ವೇಳೆ ಶೀಘ್ರವೇ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಆ ಭರವಸೆ ಮಾತಿನಲ್ಲೇ ಉಳಿದಿದ್ದು, ಇಂದಿಗೂ ರಸ್ತೆ ಹಿಂದಿನಂತೆಯೇ ಗುಂಡಿಮಯ ಸ್ಥಿತಿಯಲ್ಲಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪಕ್ಷಬೇಧ ಮರೆತು ಸ್ಥಳೀಯರು ಒಂದೇ ವೇದಿಕೆಯಲ್ಲಿ ಸೇರಿ ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ ಮತ್ತೊಂದು ಸುತ್ತಿನ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಈ ಬಾರಿಯಾದರೂ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಎಚ್ಚೆತ್ತು ಶಾಶ್ವತ ಡಾಮರೀಕರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆಯನ್ನೂ ನಾಗರಿಕರು ನೀಡಿದ್ದಾರೆ.





