ಬೆಳ್ತಂಗಡಿ: ಮುಂಡಾಜೆ ಭಾಗದಲ್ಲಿ ನಡೆಯುತ್ತಿರುವ ನೂತನ ಹೆದ್ದಾರಿ ಕಾಮಗಾರಿಯ ಸಂದರ್ಭದಲ್ಲಿ ಹಳೆಯ ಬಸ್ ತಂಗುದಾಣಗಳನ್ನು ತೆರವುಗೊಳಿಸಲಾಗಿತ್ತು. ಬಳಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆದ್ದಾರಿ ಬದಿಯಲ್ಲಿ ತಾತ್ಕಾಲಿಕ ರೀತಿಯಲ್ಲಿ ತಗಡು ಶೀಟಿನಿಂದ ಹೊಸ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಆದರೆ ಈ ತಂಗುದಾಣಗಳ ಗುಣಮಟ್ಟ ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹೆದ್ದಾರಿ ಕಾಮಗಾರಿ ನಡುವೆ ಅವೈಜ್ಞಾನಿಕ ತಂಗುದಾಣ ನಿರ್ಮಾಣ ಆರೋಪ
ಸ್ಥಳೀಯರ ಪ್ರಕಾರ, ನಿರ್ಮಿಸಲಾಗಿರುವ ತಂಗುದಾಣಗಳು ಮಳೆಗಾಲದ ವೇಳೆ ಬೀಸುವ ಬಿರುಗಾಳಿ ಹಾಗೂ ಭಾರೀ ಮಳೆಯನ್ನು ತಡೆಯುವ ಸಾಮರ್ಥ್ಯವೇ ಇಲ್ಲದಂತಿದೆ. ತಂಗುದಾಣದ ಕಂಬಗಳು ಹಾಗೂ ತಗಡು ಶೀಟುಗಳು ಗಟ್ಟಿತನ ಕಳೆದುಕೊಂಡಿರುವಂತೆ ಕಾಣುತ್ತಿದ್ದು, ಗಾಳಿ ಜೋರಾಗಿ ಬೀಸಿದರೆ ಯಾವುದೇ ಕ್ಷಣದಲ್ಲಿ ಕುಸಿಯುವ ಆತಂಕ ಎದುರಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಪ್ರತಿ ದಿನ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಹಾಗೂ ನೂರಾರು ಪ್ರಯಾಣಿಕರು ಈ ತಂಗುದಾಣಗಳಲ್ಲಿ ಬಸ್ಗಾಗಿ ಕಾಯಬೇಕಾದ ಪರಿಸ್ಥಿತಿ ಇದೆ. ಆದರೆ ಮಳೆಗಾಲದ ಸಂದರ್ಭದಲ್ಲಿ ತಂಗುದಾಣದ ಒಳಗೆ ನಿಲ್ಲುವುದಕ್ಕೂ ಜನರು ಭಯಪಡುವಂತಾಗಿದೆ. ಗಾಳಿ ಮಳೆಯ ವೇಳೆ ತಗಡು ಶೀಟುಗಳು ಹಾರಿ ಅಪಾಯ ಸಂಭವಿಸುವ ಭೀತಿ ಕೂಡ ವ್ಯಕ್ತವಾಗುತ್ತಿದೆ.
ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಈಗಾಗಲೇ ರಸ್ತೆ ಬದಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಇದರ ಮಧ್ಯೆ ಸುರಕ್ಷಿತ ತಂಗುದಾಣದ ಕೊರತೆ ಸಾರ್ವಜನಿಕರ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿದೆ. ಹೊಸ ತಂಗುದಾಣ ಎಂಬ ಹೆಸರಿನಲ್ಲಿ ಕೇವಲ ಕಾಟಾಚಾರಕ್ಕಾಗಿ ತಂಗುದಾಣ ನಿರ್ಮಿಸಲಾಗಿದೆ” ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸೋಮಂತಡ್ಕ ಪೇಟೆಯಲ್ಲಿ ಎರಡು ತಂಗುದಾಣ ನಿರ್ಮಿಸಿದ್ದು, ಬಾಲಕರ ಹಾಸ್ಟೆಲ್ ಬಳಿಯ ರಸ್ತೆ ತಿರುವಲ್ಲಿ ಇದ್ದ ತಂಗುದಾಣ ತೆರವುಗೊಂಡಿದ್ದು ಆ ಸ್ಥಳದಲ್ಲಿ ತಂಗುದಾಣ ನಿರ್ಮಾಣಕ್ಕೆ ಇನ್ನೂ ಕಾಯಕಲ್ಪ ಕೂಡಿ ಬಂದಿಲ್ಲ ಇನ್ನೂ ಯಾಕೆ ಈ ವ್ಯವಸ್ಥೆ ಮಾಡಿಲ್ಲವೆಂಬುದೇ ವಿಪರ್ಯಾಸವಾಗಿದೆ ಈಗ ತಂಗುದಾಣ ನಿರ್ಮಿಸುವಂತಹ ಬಸ್ ಬೇ ಅಲ್ಲಿ ಇಲ್ಲ. ಇನ್ನು ಬಿಸಿಲಲ್ಲಿ ನಿಂತು ಬಸ್ ಕಾಯುವ ಪರಿಸ್ಥಿತಿ. ಶಾಲಾ ಮಕ್ಕಳಿಗೆ ಮಳೆಗಾಲದಲ್ಲಿ ತುಂಬಾ ಕಷ್ಟ ಆಗಲಿದೆ.
ಸಂಬಂಧಪಟ್ಟ ಇಲಾಖೆ ಹಾಗೂ ಗುತ್ತಿಗೆದಾರರು ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಗುಣಮಟ್ಟದ, ಬಲಿಷ್ಠ ಹಾಗೂ ಶಾಶ್ವತ ತಂಗುದಾಣಗಳನ್ನು ನಿರ್ಮಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಮಳೆಗಾಲ ತೀವ್ರಗೊಳ್ಳುವ ಮುನ್ನವೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.





