ದೊಡ್ಡ ಪರಿಣಾಮ‌ ನೀಡಬಲ್ಲ ಸಣ್ಣ ಸಣ್ಣ ಸೇವೆಗಳ ಮೂಲಕ ಜನಕಲ್ಯಾಣ: ಜಯಂತ ನಡುಬೈಲು

ಬೆಳ್ತಂಗಡಿ: ರಾಜಕೇಸರಿ ಸಂಘಟನೆ ಕಳೆದ ಏಳು ವರ್ಷಗಳಿಂದ ಜನಪರ‌ ಮಾದರಿ ಕೆಲಸ‌ಮಾಡುತ್ತಿದೆ. ದೈನಂದಿನ ಕೆಲಸ‌ಕಾರ್ಯಗಳಲ್ಲಿ ತೊಡಗಿಸಿ ಕೊಂಡಿರುವವರೇ ಸೇರಿಕೊಂಡು ಮಾಡುವ ಸಣ್ಣ ಸಣ್ಣ ಸೇವೆ ದೊಡ್ಡ ಪ್ರಯೋಜನಕ್ಕೆ ಕಾರಣವಾಗುತ್ತದೆ ಎಂದುಗೆಜ್ಜೆಗಿರಿ ಕ್ಷೇತ್ರದ ಅಧ್ಯಕ್ಷ ಜಯಂತ ನಡುಬೈಲು ಹೇಳಿದರು.

ಅವರು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ, ರಾಜಕೇಸರಿ ಬೆಳ್ತಂಗಡಿ ಇವರ ಆಶ್ರಯದಲ್ಲಿ ಅನುಗ್ರಹ ಜನಸೇವಾ ಕೇಂದ್ರದ ಸಹಯೋಗದಲ್ಲಿ ಆ. 30 ರಂದು ಸುವರ್ಣ ಆರ್ಕೆಡ್ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಆಯುಷ್ಮಾನ್, ಕಿಸಾನ್ ಸಮ್ಮಾನ್,ಕಾರ್ಮಿಕ ಕಾರ್ಡ್ ನೋಂದಾವಣೆ ಮತ್ತು ಸರಕಾರಿ ಯೋಜನೆಗಳ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆಯನ್ನು ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ ವಹಿಸಿದ್ದರು.

READ ALSO

ಸಮಾರಂಭದಲ್ಲಿ ಅತಿಥಿಗಳಾಗಿದ್ದ ಗೌಡ ಸಮಾಜದ ಅಧ್ಯಕ್ಷ ಸೋಮೇಗೌಡ, ಕುಲಾಲರ ಸಂಘದ ಅಧ್ಯಕ್ಷ ಹರೀಶ್ ಮೂಲ್ಯ ಕಾರಿಂಜ, ಬಿಲ್ಲವ ಸಂಘದ ಉಪಾಧ್ಯಕ್ಷ ಮನೋಹರ್ ಕುಮಾರ್ ಇಳಂತಿಲ, ಬಂಟರ ಯುವ ವಿಭಾಗದ ನಿಕಟಪೂರ್ವ ಅಧ್ಯಕ್ಷ ಪ್ರಸಾದ್ ಶೆಟ್ಟಿ ಏಣಿಂಜೆ, ಕರ್ನಾಟಕ ನೃತ್ಯ ಅಕಾಡಮಿ ಸಂಸ್ಥಾಪಕ ರಾಜೇಶ್ ಕಣ್ಣೂರು ಮಾತನಾಡಿದರು.

ಕಾರ್ಯಕ್ರಮದಲ್ಲಿ ತಾ.‌ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ ಮುಂಡಾಜೆ, ರಾಜಕೇಸರಿ ಬೆಳ್ತಂಗಡಿ ಅಧ್ಯಕ್ಷ ಕಾರ್ತಿಕ್ ಉಪಸ್ಥಿತರಿದ್ದರು.
ಅನುಗ್ರಹ ಜನಸೇವಾ ಕೇಂದ್ರದ ಸಂಸ್ಥಾಪಕ ತಲ್‌ಹತ್ ಎಂ.ಜಿ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು.
ರಾಜಕೇಸರಿ ಸಂಸ್ಥಾಪಕ ದೀಪಕ್ ಜಿ ಕಾರ್ಯಕ್ರಮ ಸಂಯೋಜಿಸಿದರು. ನವೀನ್ ಇಂದಬೆಟ್ಟು ವಂದಿಸಿದರು.‌