ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಒದಗಿಸುವುದು ಅಧಿಕಾರಿಗಳ ಕಡ್ಡಾಯ ಜವಾಬ್ದಾರಿ: ಡಾ.ಹರೀಶ್ ಕುಮಾರ್

ಕಾರವಾರ: ಮಾಹಿತಿ ಹಕ್ಕು ಕಾಯ್ದೆಯಡಿ (Right to Information Act) ಮಾಹಿತಿ ಕೋರಿ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳಿಗೆ ನಿಗದಿತ ಅವಧಿಯೊಳಗೆ ಅಗತ್ಯ ಮಾಹಿತಿ ಒದಗಿಸುವುದು ಎಲ್ಲಾ ಇಲಾಖೆಗಳ ಮಾಹಿತಿ ಅಧಿಕಾರಿಗಳ ಕಡ್ಡಾಯ ಜವಾಬ್ದಾರಿಯಾಗಿದೆ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಡಾ. ಹರೀಶ್ ಕುಮಾರ್ ತಿಳಿಸಿದರು.

ಶನಿವಾರ ಉತ್ತರ ಕನ್ನಡ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಆಯೋಜಿಸಿದ್ದ ಮಾಹಿತಿ ಹಕ್ಕು ಕಾಯ್ದೆ ಕುರಿತು ಜಾಗೃತಿ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಹಿತಿ ಹಕ್ಕು ಕಾಯಿದೆಯು ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಕಾನೂನಾತ್ಮಕವಾಗಿ ಸಾರ್ವಜನಿಕ ಕೆಲಸಗಳನ್ನು ಮಾಡಲು ಸಹಕಾರಿಯಾಗಿದ್ದು, ಇದು ಸಾರ್ವಜನಿಕರ ಕುಂದುಕೊರತೆಗಳನ್ನು ನಿವಾರಣೆ ಮಾಡುವ ಕಾಯಿದೆಯಾಗಿ ಬದಲಾಗಿದೆ. ಅಧಿಕಾರಿಗಳು ಪ್ರಾಮಾಣಿಕವಾಗಿ ತಪ್ಪುಗಳನ್ನು ಮಾಡದಂತೆ ಕೆಲಸ ನಿರ್ವಹಿಸಲು ಕಾಯ್ದೆ ಸಹಕಾರಿಯಾಗಿದೆ ಎಂದರು.

ಕಾಯಿದೆಯ ಕುರಿತಂತೆ ಆಗಿಂದಾಗ್ಗೆ ಸರ್ವೋಚ್ಚ ನ್ಯಾಯಾಲಯ, ಹೈಕೋರ್ಟ್ ನೀಡುವ ತೀರ್ಪುಗಳ ಕುರಿತಂತೆ ಮಾಹಿತಿ ಅಧಿಕಾರಿಗಳು ಅರಿವು ಹೊಂದಿರಬೇಕು. ಕಾಯಿದೆಯಲ್ಲಿನ ಎಲ್ಲಾ ಅಂಶಗಳ ಬಗ್ಗೆ ಸಮಗ್ರವಾಗಿ ಅರಿತುಕೊಂಡು ಸಾರ್ವಜನಿಕರಿಗೆ ಮಾಹಿತಿಗಳನ್ನು ಒದಗಿಸಬೇಕು. ಪ್ರಥಮ ಮೇಲ್ಮನವಿ ಮತ್ತು ಎರಡನೇ ಮೇಲ್ಮನವಿಗಳ ಸಲ್ಲಿಕೆಗೆ ಅವಕಾಶ ನೀಡದೇ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿಗೊಳಿಸಬೇಕು. ನಿಗದಿತ ಅವಧಿಯೊಳಗೆ ಮಾಹಿತಿ ಒದಗಿಸದ ಅಧಿಕಾರಿಗಳಿಗೆ 25,000 ರೂ. ಗಳವರೆಗೆ ದಂಡ ಮತ್ತು ಕರ್ತವ್ಯಲೋಪದಡಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವ ಅಧಿಕಾರ ಆಯೋಗಕ್ಕಿದೆ ತಿಳಿಸಿದರು.

ಸಾರ್ವಜನಿಕರಿಗೆ ಶೀಘ್ರದಲ್ಲಿ ಮತ್ತು ಸಮರ್ಪಕವಾದ ಮಾಹಿತಿ ನೀಡಲು ಅನುಕೂಲವಾಗುವಂತೆ ಕಚೇರಿಗಳಲ್ಲಿ ಕಡತಗಳನ್ನು ವರ್ಗೀಕರಣ ಮಾಡಿಟ್ಟುಕೊಳ್ಳಬೇಕು. ಕಡತಗಳನ್ನು ನಿಯಮಾನುಸಾರ ನಾಶಪಡಿಸಿದ್ದರೆ ಈ ಬಗ್ಗೆ ದಾಖಲೆ ಇರಬೇಕು. ಕಡತಗಳು ಕಣ್ಮರೆಯಾಗಿದ್ದಲ್ಲಿ ಎಫ್‌ಐಆರ್ ದಾಖಲಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಯ ವಿರುದ್ಧವೇ ಶಿಕ್ಷೆ ವಿಧಿಸಬಹುದಾಗಿದೆ ಎಂದರು.

ಮಾಹಿತಿ ಹಕ್ಕು ಕಾಯಿದೆಯ ವಿವಿಧ ಸೆಕ್ಷನ್‌ಗಳಡಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕಾದ ಕಾರ್ಯಗಳ ಕುರಿತು ವಿವರವಾದ ಮಾಹಿತಿ ನೀಡಿದ ಅವರು, ಕಾಯಿದೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಹಾಗೂ ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ನಿರ್ದೇಶನ ನೀಡಿದರು. ಜಿಲ್ಲೆಯ ಎಲ್ಲಾ ಕಚೇರಿಗಳಲ್ಲಿ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಮತ್ತು ಮೇಲ್ಮನವಿ ಅಧಿಕಾರಿಗಳ ವಿವರಗಳನ್ನು ಹಾಗೂ ಸೆಕ್ಷನ್ 4 (1)ಎ ಮತ್ತು 4 (1)ಬಿ ಮಾಹಿತಿಯನ್ನು ಕಡ್ಡಾಯವಾಗಿ ಅಳವಡಿಸುವಂತೆ ಸೂಚಿಸಿದರು.

ಮಾಹಿತಿ ಆಯೋಗದ ಆಯುಕ್ತ ಬದ್ರುದ್ದೀನ್ ಕೆ ಮಾತನಾಡಿ, ಮಾಹಿತಿ ಹಕ್ಕು ಕಾಯಿದೆಯಡಿ ಅರ್ಜಿದಾರರು ಕೋರುವ ಮಾಹಿತಿಯನ್ನು ವಿವರವಾಗಿ ಪರಿಶೀಲಿಸಿ ಅಗತ್ಯ ಮಾಹಿತಿಯನ್ನು ನಿಗದಿತ ಶುಲ್ಕ ಪಡೆದು ಕಾಲಮಿತಿಯಲ್ಲಿ ನೀಡಬೇಕು. ಈ ಕಾಯಿದೆಯ ದುರ್ಬಳಕೆ ಕುರಿತು ಕೂಡ ಆಯೋಗಕ್ಕೆ ದೂರುಗಳು ಬಂದಿದ್ದು, ಆಯೋಗವು ಇದುವರೆಗೆ 26 ಜನರನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಆಯೋಗದಲ್ಲಿ 55,400 ಮೇಲ್ಮನವಿ ಅರ್ಜಿಗಳು ವಿಚಾರಣೆಗೆ ಬಾಕಿ ಇತ್ತು. ನಂತರ ಈ ವರ್ಷ ಸಲ್ಲಿಕೆಯಾದ ಮೇಲ್ಮನವಿಗಳು ಸೇರಿ ಬಹುತೇಕ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಪ್ರಸ್ತುತ ರಾಜ್ಯದಲ್ಲಿ 28,731 ಮೇಲ್ಮನವಿಗಳು ವಿಚಾರಣೆಗೆ ಬಾಕಿ ಇವೆ. ಉತ್ತರ ಕನ್ನಡ ಜಿಲ್ಲೆಯ 524 ಅರ್ಜಿಗಳು ಬಾಕಿ ಇದ್ದು, ಜಿಲ್ಲೆಯು ರಾಜ್ಯದಲ್ಲಿ 17 ನೇ ಸ್ಥಾನದಲ್ಲಿದೆ. ಈ ಪೈಕಿ 164 ಅರ್ಜಿಗಳು ಆರ್‌ಡಿಪಿಆರ್ ಮತ್ತು 110 ಅರ್ಜಿಗಳು ಕಂದಾಯ ಇಲಾಖೆಗೆ ಸೇರಿದ್ದು, ಉಳಿದದ್ದು ಇತರೆ ಇಲಾಖೆಗಳಿಗೆ ಸಂಬಂಧಪಟ್ಟದ್ದಾಗಿದೆ ಎಂದರು.

ಅರ್ಜಿಗಳನ್ನು ಪ್ರಥಮ ಮೇಲ್ಮನವಿ ಅಧಿಕಾರಿಗಳ ಹಂತದಲ್ಲೇ ವಿಲೇವಾರಿ ಮಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಎಲ್ಲಾ ಇಲಾಖಾಧಿಕಾರಿಗಳು ತಮ್ಮ ಹಂತದಲ್ಲಿ ಪರಿಶೀಲನಾ ಸಭೆಯನ್ನು ಕಾಲಕಾಲಕ್ಕೆ ನಡೆಸುವಂತೆ ಮತ್ತು ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾಹಿತಿ ಹಕ್ಕು ಅರ್ಜಿಗಳ ವಿಲೇವಾರಿಯನ್ನು ಒಂದು ವಿಷಯವನ್ನಾಗಿ ಕಾರ್ಯಸೂಚಿಯಲ್ಲಿ ತೆಗೆದುಕೊಂಡು ಪ್ರಗತಿ ಪರಿಶೀಲನೆ ನಡೆಸುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಮಾತನಾಡಿ, ಜಿಲ್ಲೆಯಲ್ಲಿ ಕಂದಾಯ, ಅರಣ್ಯ, ಪೊಲೀಸ್, ಗ್ರಾಮೀಣಭಿವೃದ್ಧಿ ಇಲಾಖೆಗಳಿಗೆ ಸಂಬಂಧಿಸಿದ ಹೆಚ್ಚಿನ ಸಂಖ್ಯೆಯಲ್ಲಿ ಮಾಹಿತಿ ಹಕ್ಕು ಕಾಯಿದೆ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು, ಕಾಯಿದೆಯು ಸಾರ್ವಜನಿಕರಿಗೆ ಆಡಳಿತ ವ್ಯವಸ್ಥೆ ಮೇಲೆ ನಂಬಿಕೆ ಮೂಡಿಸುವ ಮತ್ತು ಪ್ರಜಾಪ್ರಭುತ್ವ ಬಲಪಡಿಸಲು ಸಹಾಯವಾಗಲಿದೆ. ಕಂದಾಯ ಇಲಾಖೆಯಲ್ಲಿ ಡಿಜಿಟಲೀಕರಣ ನಡೆಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಅತ್ಯಂತ ಶೀಘ್ರದಲ್ಲಿ ಮಾಹಿತಿ ಒದಗಿಸಲು ಸಾಧ್ಯವಾಗಲಿದ್ದು, ಪಾರದರ್ಶಕತೆ ತರಲು ಸಾಧ್ಯವಾಗಲಿದೆ. ಜಿಲ್ಲೆಯ ಎಲ್ಲಾ ಅಧಿಕಾರಿಗಳು ಕಾಯಿದೆಯ ಕುರಿತಂತೆ ಸಂಪೂರ್ಣ ಅರಿವು ಹೊಂದಿರಬೇಕು ಎಂದರು.

ಮಾಹಿತಿ ಆಯುಕ್ತ ನಾರಾಯಣ ಚನ್ನಾಳ, ಜಿಪಂ ಸಿಇಓ ಡಾ. ದಿಲೀಷ್ ಶಶಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹಾಗೂ ಜಿಲ್ಲೆಯ ಎಲ್ಲಾ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಇದ್ದರು. ನಂತರ ಸಾರ್ವಜನಿಕರು ಹಾಗೂ ಮಾಧ್ಯಮದವರೊಂದಿಗೆ ಮಾಹಿತಿ ಹಕ್ಕು ಕಾಯ್ದೆ ಕುರಿತು ಸಂವಾದ ನಡೆಯಿತು.

Spread the love
  • Related Posts

    ಅಪ್ರತಿಮ ದೇಶಪ್ರೇಮದ ಬಾಂಜಾರುಮಲೆ, ಕಾಡಿನ ಕತ್ತಲಲ್ಲೂ ಬೆಳಗಿದ ಸ್ವಾತಂತ್ರ್ಯದ ಜ್ಯೋತಿ — ಮತದಾನದಲ್ಲೂ ಶೇ.100, ದೇಶಭಕ್ತಿಯಲ್ಲೂ ಶೇ.100!

    ಬೆಳ್ತಂಗಡಿ: ಆಧುನಿಕತೆಯ ಆಡಂಬರವಿಲ್ಲ… ಮೊಬೈಲ್ ನೆಟ್‌ವರ್ಕ್ ಇಲ್ಲ… ಸುಗಮ ಸಂಚಾರಕ್ಕೆ ಉತ್ತಮ ರಸ್ತೆಗಳಿಲ್ಲ. ಆದರೆ ಎದೆಯಾಳದಲ್ಲಿ ಅಖಂಡ ದೇಶಪ್ರೇಮವಿದೆ! ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ದುರ್ಗಮ ಮಲೆನಾಡಿನ ಕಾನನದ ನಡುವೆ ಇರುವ ಪುಟ್ಟ ಹಳ್ಳಿ ಬಾಂಜಾರುಮಲೆ. ಮತದಾನದಲ್ಲಿ…

    Spread the love

    ಓ ಮಾನವರೇ, ಯಾವಾಗ ಬರುವುದೋ ಒಳ್ಳೆಯ ಬುದ್ಧಿ! “ಪ್ರಕೃತಿಯ ಮಡಿಲಲ್ಲಿ ಸ್ವಚ್ಛಂದವಾಗಿ ಬದುಕುವ ವಾನರಗಳಿಗೆ ಕುರುಕುರೆ ಏಕೆ?”

    🖊️• ಬರಹ: ರಾಜೇಶ್ ಎಂ ಕಾನರ್ಪ ಮಂಗಗಳ ಕೈಯಲ್ಲಿ ಕುರುಕುರೇ ಪ್ಯಾಕೇಟ್!!! ಪ್ರೀತಿಯ ಹೆಸರಿನಲ್ಲಿ ವಾನರಗಳಿಗೆ ವಿಷವಿಕ್ಕುತ್ತಿರುವ ಮನುಜಕುಲ??? ವಾನರಗಳಿಗೆ ಪ್ಯಾಕೆಟ್‌ ತಿಂಡಿ ಬೇಡ, ಪ್ರಕೃತಿಯ ಆಹಾರ ಬೇಕು!!! ಪ್ರಕೃತಿಯ ಮಡಿಲಲ್ಲಿ ಸ್ವತಂತ್ರವಾಗಿ ಬದುಕಬೇಕಾದ ವಾನರಗಳು ಇಂದು ಮನುಷ್ಯರ ಕೈಯಲ್ಲಿರುವ ಕುರುಕುರೆ,…

    Spread the love

    You Missed

    ಅಪ್ರತಿಮ ದೇಶಪ್ರೇಮದ ಬಾಂಜಾರುಮಲೆ, ಕಾಡಿನ ಕತ್ತಲಲ್ಲೂ ಬೆಳಗಿದ ಸ್ವಾತಂತ್ರ್ಯದ ಜ್ಯೋತಿ — ಮತದಾನದಲ್ಲೂ ಶೇ.100, ದೇಶಭಕ್ತಿಯಲ್ಲೂ ಶೇ.100!

    • By admin
    • August 20, 2026
    • 4 views
    ಅಪ್ರತಿಮ ದೇಶಪ್ರೇಮದ ಬಾಂಜಾರುಮಲೆ, ಕಾಡಿನ ಕತ್ತಲಲ್ಲೂ ಬೆಳಗಿದ ಸ್ವಾತಂತ್ರ್ಯದ ಜ್ಯೋತಿ — ಮತದಾನದಲ್ಲೂ ಶೇ.100, ದೇಶಭಕ್ತಿಯಲ್ಲೂ ಶೇ.100!

    ಓ ಮಾನವರೇ, ಯಾವಾಗ ಬರುವುದೋ ಒಳ್ಳೆಯ ಬುದ್ಧಿ! “ಪ್ರಕೃತಿಯ ಮಡಿಲಲ್ಲಿ ಸ್ವಚ್ಛಂದವಾಗಿ ಬದುಕುವ ವಾನರಗಳಿಗೆ ಕುರುಕುರೆ ಏಕೆ?”

    • By admin
    • August 20, 2026
    • 10 views
    ಓ ಮಾನವರೇ, ಯಾವಾಗ ಬರುವುದೋ ಒಳ್ಳೆಯ ಬುದ್ಧಿ! “ಪ್ರಕೃತಿಯ ಮಡಿಲಲ್ಲಿ ಸ್ವಚ್ಛಂದವಾಗಿ ಬದುಕುವ ವಾನರಗಳಿಗೆ ಕುರುಕುರೆ ಏಕೆ?”

    ನಾಗರಪಂಚಮಿ ಪ್ರಯುಕ್ತ ಸೋಮವಾರ ದ.ಕ. ಜಿಲ್ಲೆಗೆ ಸಾರ್ವತ್ರಿಕ ರಜೆ

    • By admin
    • August 16, 2026
    • 9 views
    ನಾಗರಪಂಚಮಿ ಪ್ರಯುಕ್ತ ಸೋಮವಾರ ದ.ಕ. ಜಿಲ್ಲೆಗೆ ಸಾರ್ವತ್ರಿಕ ರಜೆ

    ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದಲ್ಲಿ ಸ್ವಾತಂತ್ರ್ಯೋತ್ಸವ

    • By admin
    • August 15, 2026
    • 12 views
    ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದಲ್ಲಿ ಸ್ವಾತಂತ್ರ್ಯೋತ್ಸವ

    ನೀಟ್‌ನಲ್ಲಿ ಅತ್ಯುತ್ತಮ ಸಾಧನೆ: ಎಕ್ಸೆಲ್ ಪಿಯು ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ‘ಆರೋಗ್ಯ ರತ್ನ’ ಪ್ರಶಸ್ತಿ

    • By admin
    • August 14, 2026
    • 26 views
    ನೀಟ್‌ನಲ್ಲಿ ಅತ್ಯುತ್ತಮ ಸಾಧನೆ: ಎಕ್ಸೆಲ್ ಪಿಯು ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ‘ಆರೋಗ್ಯ ರತ್ನ’ ಪ್ರಶಸ್ತಿ

    ಬಂಟ್ವಾಳ ಕಾವಳ ಪಡೂರಿನಲ್ಲಿ ಪೊಲೀಸ್‌ ದಾಳಿ: ನಿಷೇಧಿತ ಎಂ.ಡಿ.ಎಂ.ಎ ಸೇರಿದಂತೆ 4 ಲಕ್ಷ 90 ಸಾವಿರ ಮೌಲ್ಯದ ಸೊತ್ತುಗಳು ವಶಕ್ಕೆ

    • By admin
    • August 14, 2026
    • 15 views
    ಬಂಟ್ವಾಳ ಕಾವಳ ಪಡೂರಿನಲ್ಲಿ ಪೊಲೀಸ್‌ ದಾಳಿ: ನಿಷೇಧಿತ ಎಂ.ಡಿ.ಎಂ.ಎ ಸೇರಿದಂತೆ 4 ಲಕ್ಷ 90 ಸಾವಿರ ಮೌಲ್ಯದ ಸೊತ್ತುಗಳು ವಶಕ್ಕೆ