ಚಿಕ್ಕಮಗಳೂರು: ಅಪರೂಪದ ಎರಡು ತಲೆ ಹಾವನ್ನು (ಮಣ್ಣುಮುಕ್ಕ) ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರನ್ನು ಸಿಐಡಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ಚಿಕ್ಕಮಗಳೂರು ನಗರದ ವಾಜಪೇಯಿ ಲೇಔಟ್ ಬಳಿ ಖಚಿತ ಮಾಹಿತಿ ಮೇರೆಗೆ ಮೇ.12 ರಂದು ದಾಳಿ ನಡೆಸಿದ ಸಿಐಡಿ ಅರಣ್ಯ ಸಂಚಾರಿ ಅರಣ್ಯ ದಳದ ಅಧಿಕಾರಿಗಳು, ಸುಮಾರು 1 ಕೆಜಿ 400 ಗ್ರಾಂ ತೂಕದ ಬೃಹತ್ ಹಾವನ್ನು ರೆಡ್ ಹ್ಯಾಂಡಾಗಿ ವಶಪಡಿಸಿಕೊಂಡರು.
ಬಂಧಿತರಲ್ಲಿ ಇಬ್ಬರು ಆಂಧ್ರಪ್ರದೇಶ ಮೂಲದವರು, ಇಬ್ಬರು ತುಮಕೂರು ಮೂಲದವರು ಹಾಗೂ ಓರ್ವ ಶಿವಮೊಗ್ಗ ಮೂಲದವನಾಗಿದ್ದು, ಆರೋಪಿಗಳಿಂದ ಆಂಧ್ರ ಮೂಲದ ಸ್ವಿಫ್ಟ್ ಕಾರು ಮತ್ತು ಕರ್ನಾಟಕ ಮೂಲದ ವ್ಯಾಗನರ್ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಅಕ್ರಮ ವನ್ಯಜೀವಿ ಸಾಗಣೆ ಮತ್ತು ಮಾರಾಟ ಯತ್ನದ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಚಿಕ್ಕಮಗಳೂರಿನಲ್ಲಿ ನಡೆದ ಈ ಕಾರ್ಯಾಚರಣೆ ಅಪರೂಪದ ವನ್ಯಜೀವಿಗಳ ಅಕ್ರಮ ವ್ಯಾಪಾರಕ್ಕೆ ತಡೆಯೊಡ್ಡುವಲ್ಲಿ ಮಹತ್ವದ ಹೆಜ್ಜೆಯಾಗಿದೆ.





