ಉಜಿರೆ: ರಾಷ್ಟ್ರೀಯ ಹೆದ್ದಾರಿ 275ರಿಂದ ರಾಜ್ಯ ಹೆದ್ದಾರಿ 276ನ್ನು ಸಂಪರ್ಕಿಸುವ ಬೆಳ್ತಂಗಡಿ ತಾಲೂಕಿನ ಸೋಮಂತಡ್ಕ- ಹೇಡ್ಯ ರಸ್ತೆ ನವೀಕರಣ ಹಾಗೂ ವಿಸ್ತರಣೆಗೆ ಕೇಂದ್ರ ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಈ ರಸ್ತೆಯ ಅಭಿವೃದ್ಧಿ ಭಾಗ್ಯ ಸನ್ನಿಹಿತವಾಗಿದೆ.
ಕೇಂದ್ರ ಸರಕಾರ ದ.ಕ. ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸಂಪರ್ಕ ರಸ್ತೆಗಳ ಸುಧಾರಣೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದರಲ್ಲಿ ಸೋಮಂತಡ್ಕ-ಹೇಡ್ಯ ರಸ್ತೆ ಒಳಗೊಂಡಿದೆ. ಮುಂದಿನ ದಿನಗಳಲ್ಲಿ ಈ ರಸ್ತೆ ಮೇಲ್ದರ್ಜೆಗೇರಲಿದೆ.
ಕ್ಯಾ.ಬ್ರಿಜೇಶ್ ಚೌಟ, ಸಂಸದ, ದ.ಕ.
ದಿಡುಪೆ- ಪೈಚಾರು ರಾಜ್ಯ ಹೆದ್ದಾರಿ ವ್ಯಾಪ್ತಿಯ ಈ ರಸ್ತೆಯ ಮುಂಡಾಜೆ ಗ್ರಾಮದ ಸೋಮಂತ್ತಡ್ಕದಿಂದ ಕಡಿರುದ್ಯಾವರ ಗ್ರಾಮದ ಹೇಡ್ಯಾ ತನಕ 5.50 ಕಿ. ಮೀ. ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ.
ಮುಂಡಾಜೆಯ ಸೋಮಂತ್ತಡ್ಕ ದಿಂದ ದಿಡುಪೆ ತನಕ ಸುಮಾರು 15 ಕಿ.ಮೀ. ವ್ಯಾಪ್ತಿಯ ಈ ರಸ್ತೆಯಲ್ಲಿ ಪ್ರತಿದಿನ ಕೆಎಸ್ಸಾರ್ಟಿಸಿ ಬಸ್, ಶಾಲಾ ಬಸ್ಗಳ ಸಹಿತ ನೂರಾರು ವಾಹನಗಳ ಓಡಾಟವಿದೆ. ಎರ್ಮಾಯಿ, ಕಡಮ ಗುಂಡಿ, ಎಳನೀರು ಜಲಪಾತಗಳು, ಧಾರ್ಮಿಕ ಕೇಂದ್ರಗಳಾದ ಕೊಲ್ಲಿ ದೇವಸ್ಥಾನ, ಕಾಜೂರು ಮಸೀದಿ ಸೇರಿದಂತೆ ಪ್ರವಾಸಿ ಸ್ಥಳಗಳಿಗೂ ಇದು ಪ್ರಮುಖ ಸಂಪರ್ಕ ರಸ್ತೆಯಾಗಿದೆ.
ಸೋಮಂತಡ್ಕ-ದಿಡುಪೆ ರಸ್ತೆ ಅಭಿವೃದ್ಧಿ ಬಹು ವರ್ಷದ ಬೇಡಿಕೆಯಾಗಿದ್ದು, ಇದೀಗ ಹೇಡ್ಕ ತನಕದ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಂಡಿದೆ. ಈ ರಸ್ತೆ ದಿಡುಪೆವರೆಗೂ ಅಭಿವೃದ್ಧಿ ಹೊಂದಬೇಕು. ಮಳೆಗಾಲದಲ್ಲಿ ಈ ರಸ್ತೆಯ ನಿರ್ವಹಣೆ ಅತಿ ಅಗತ್ಯವಾಗಿದ್ದು ಶೀಘ್ರ ನಡೆಯಬೇಕಿದೆ.
ಅಶೋಕ್ ಕುಮಾರ್, ಮಾಜಿ ಅಧ್ಯಕ್ಷ, ಗ್ರಾಪಂ ಕಡಿರುದ್ಯಾವರ
ನಿರ್ವಹಣೆ ಕೊರತೆ: ಒಂದು ಕಾಲದಲ್ಲಿ ತೀರಾ ಹಿಂದುಳಿದಿದ್ದ ಈ ಪ್ರದೇಶ ಮೂಲಸೌಕರ್ಯಗಳ ಕೊರತೆ ಅನುಭವಿಸುತ್ತಿತ್ತು. ಬಳಿಕದ ಕೆಲವು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಪ್ರಸ್ತುತ ಈ ರಸ್ತೆಯ ನಿರ್ವಹಣೆ ಕೊರತೆಯಿಂದ ಕೆಲವೊಂದು ಕಡೆ ಸಂಚಾರ ಸಮಸ್ಯೆಗಳು ಉಂಟಾಗಿವೆ.
ಹತ್ತು ವರ್ಷಗಳ ಹಿಂದೆ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದ ಈ ರಸ್ತೆ ಬಳಿಕದ ದಿನಗಳಲ್ಲಿ ನಿರ್ವಹಣೆ ಕಂಡಿಲ್ಲ. ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಮಳೆ ನೀರಿನಲ್ಲಿ ಹರಿದು ಬರುವ ತ್ಯಾಜ್ಯ ಮನೆಯಂಗಳಕ್ಕೆ ಬಂದು ಬೀಳುತ್ತಿದೆ. ಚರಂಡಿ ಪ್ರದೇಶಗಳಲ್ಲಿ ಗಿಡಗಂಟಿ ಬೆಳೆದು ಮಳೆ ನೀರು ಹರಿಯಲು ಜಾಗವಿಲ್ಲದಂತಾಗಿದೆ. ರಸ್ತೆಗೆ ಬಾಗಿರುವ ಮರಗಳು ಸಂಚಾರಕ್ಕೆ ತೊಂದರೆ ನೀಡುತ್ತಿವೆ. ತಡೆಗೋಡೆ ಇಲ್ಲದ ಮೋರಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಅಭಿವೃದ್ಧಿ ಕಾಮಗಾರಿಯ ಪ್ರಕ್ರಿಯೆಗಳು ಆರಂಭ ಹಂತದಲ್ಲಿದ್ದು, ಅದಕ್ಕಿಂತ ಮೊದಲು ಈ ರಸ್ತೆಯ ನಿರ್ವಹಣೆ ನಡೆಯಬೇಕಾದ ಅಗತ್ಯವಿದೆ.
ಸೋಮಂತ್ತಡ್ಕ ಹೆಡ್ಯಾ ರಸ್ತೆ ಅಭಿವೃದ್ಧಿಗೆ ಅನುದಾನ ಮಂಜೂರುಗೊಂಡಿರುವುದು ಬಹಳ ಸಂತೋಷವಾಗಿದೆ. ಈ ಹಿಂದೆಯೂ ಈ ರಸ್ತೆಯ ಅಭಿವೃದ್ಧಿಗಾಗಿ ಸಂಘಟಿತ ಹೋರಾಟದಿಂದ ಅಭಿವೃದ್ಧಿಯಾಗಿತ್ತು ಕಳಪೆ ಕಾಮಗಾರಿಯನ್ನು ಖಂಡಿಸಿ ಹೋರಾಟ ನಡೆಸಿದ ಪರಿಣಾಮವಾಗಿ ಉತ್ತಮ ರೀತಿಯ ಕಾಮಗಾರಿಯಾಗಿದ್ದು ಬಹಳಷ್ಟು ವರ್ಷ ಈ ರಸ್ತೆಯು ಗುಣಮಟ್ಟದಿಂದ ಕೂಡಿದ್ದು ಮುಂದಿನ ದಿನಗಳಲ್ಲಿಯೂ ಉತ್ತಮ ಕ್ವಾಲಿಟಿಯ ರಸ್ತೆ ನಿರ್ಮಾಣವಾಗಲಿ ಹಾಗೂ ನಮ್ಮೆಲ್ಲರ ಬಹುಬೇಡಿಕೆಯ ಡಿಡುಪೆ-ಎಳನೀರು-ಸಂಸೆ ರಸ್ತೆ ಸಂಪರ್ಕಕ್ಕೂ ಶೀಘ್ರದಲ್ಲೇ ಅನುಮೋದನೆ ಸಿಕ್ಕಿ ಸಂಪರ್ಕ ಕೊಂಡಿ ಬೆಸೆಯುವಂತಾಗಲಿ ಇದರಿಂದ ತಾಲೂಕಿನ ತುತ್ತ ತುದಿಯಲ್ಲಿ ಇರುವ ಎಳನೀರು ಭಾಗದ ಜನರಿಗೆ ಸೇರಿದಂತೆ ಪುಣ್ಯ ಕ್ಷೇತ್ರ ಭೇಟಿ ಮಾಡುವ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಅನುಕೂಲವಾಗುವಂತಾಗಲಿ :-
.
ಎ.ಜೈರಾಜ್ ಸಾಲಿಯಾನ್ ಕಾನರ್ಪ ಬಿ.ಎಂ.ಎಸ್. ರಾಜ್ಯ ಕಾರ್ಯದರ್ಶಿ
ಎಳನೀರು ಸಂಪರ್ಕ ರಸ್ತೆ ಪೂರ್ಣಗೊಳ್ಳುವುದೆ…..???
ಸೋಮಂತಡ್ಕ- ದಿಡುಪೆ ರಸ್ತೆ ದಿಡುಪೆಯಿಂದ ಚಿಕ್ಕಮಗಳೂರು ಜಿಲ್ಲೆಯ ಸಂಸೆಗೆ ಸಂಪರ್ಕ ಹೊಂದಿದೆ. ಆದರೆ ದಿಡುಪೆಯಿಂದ ಎಳನೀರು ಮೂಲಕ ಹಾದು ಹೋಗುವ ಈ ರಸ್ತೆ ಅರಣ್ಯ ವ್ಯಾಪ್ತಿಯಲ್ಲಿದೆ. 8 ಕಿ.ಮೀ. ದೂರದ ಈ ರಸ್ತೆಯಲ್ಲಿ ಬೇಸಿಗೆ ಕಾಲದಲ್ಲಿ ನಿಗದಿತ ವಾಹನಗಳು ಮಾತ್ರ ಓಡಾಡುತ್ತವೆ. ಮಳೆ ಆರಂಭವಾದರೆ ಈ ರಸ್ತೆಯಲ್ಲಿ ವಾಹನಗಳ ಓಡಾಟ ಸಾಧ್ಯವಿಲ್ಲ.
ಚಿಕ್ಕಮಗಳೂರು- ದಕ್ಷಿಣ ಕನ್ನಡ ಜಿಲ್ಲೆಗಳ ಸಂಪರ್ಕದ ಅತಿ ಹತ್ತಿರದ ಈ ರಸ್ತೆ ಅಭಿವೃದ್ಧಿಗೆ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ, ಇದಕ್ಕೆ ಅರಣ್ಯ ನೀತಿ ಅಡ್ಡಿಯಾಗಿದೆ. ಶಾಸಕರು, ಸಂಸದರು ರಸ್ತೆ ಅಭಿವೃದ್ಧಿಗೆ ಪ್ರಯತ್ನ ಪಟ್ಟಿದ್ದು, ಕೆಲವೊಂದು ಪೂರ್ವಭಾವಿ ಸಮೀಕ್ಷೆಗಳು ನಡೆದಿವೆ.
ಎಳನೀರು ಸಂಪರ್ಕದ ಆರಂಭ ಭಾಗವಾದ ಸೋಮಂತಡ್ಕ- ಹೇಡ್ಕ ರಸ್ತೆ ಅಭಿವೃದ್ಧಿಗೆ ಅನುದಾನ ದೊರಕಿದ್ದು, ಮುಂದಿನ ದಿನಗಳಲ್ಲಿ ಎಳನೀರು ರಸ್ತೆ ಅಭಿವೃದ್ಧಿ ಹೊಂದಬಹುದೇ ಎಂಬ ನಿರೀಕ್ಷೆ ವ್ಯಕ್ತವಾಗಿದೆ.





