ಬೆಳ್ತಂಗಡಿ ಪೋಲಿಸ್ ಹೆಡ್ ಕಾನ್ಸ್ ಟೆಬಲ್ ವೆಂಕಟೇಶ್ ನಾಯ್ಕರಿಗೆ ಮುಖ್ಯಮಂತ್ರಿ ಪದಕ ಪ್ರಶಸ್ತಿ ಪ್ರದಾನ

ಬೆಂಗಳೂರು: ವಿಧಾನಸೌಧದ ಬ್ವಾಂಕ್ವೆಟ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ‌ಕಾರ್ಯಕ್ರಮದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕರ ಕಚೇರಿಯ ಹೆಡ್ ಕಾನ್ಸ್ ಟೆಬಲ್ ವೆಂಕಟೇಶ್ ನಾಯ್ಕ್‌ ಅವರಿಗೆ ಮುಖ್ಯಮಂತ್ರಿ ಪದಕ ಪ್ರದಾನ ಮಾಡಲಾಯಿತು.

ದಕ್ಷಿಣ ಕನ್ನಡ ಜಿಲ್ಲೆಯಿಂದ ಇಬ್ಬರು ಈ ಗೌರವಕ್ಕೆ ಪಾತ್ರವಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪದಕ ಪ್ರದಾನ ಮಾಡಿದರು.

READ ALSO

ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವ ರೀತಿಯಲ್ಲಿ ಪ್ರಕರಣದ ತನಿಖಾ ಸಹಾಯಕರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಪದಕ ನೀಡಲಾಗುತ್ತಿದೆ.

ಬೆಳ್ತಂಗಡಿ ವೃತ್ತನಿರೀಕ್ಷಕರ ಕಚೇರಿಯಲ್ಲಿ ಕಳೆದ 6 ವರ್ಷಗಳಿಂದ ಹೆಡ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಉಜಿರೆ ಎಸ್.ಆರ್. ಬಾರ್ ಬಳಿ ಕೊಲೆ ಪ್ರಕರಣ, ಕೊಯ್ಯೂರು, ವೇಣೂರು, ಲಾಯಿಲದಲ್ಲಿ‌ ನಡೆದಿದ್ದ ಪೋಕ್ಸೋ‌ ಪ್ರಕರಣ, ಮರೋಡಿ ಲೈಂಗಿಕ ಹಲ್ಲೆ ಪ್ರಕರಣ, ವಿಟ್ಲದಲ್ಲಿ ನಡೆದಿದ್ದ ಕೊಲೆ ಪ್ರಕರಣ, ಉಜಿರೆ ಅಪಘಾತದಲ್ಲಿ‌ ಶಿಕ್ಷಕಿ ಸಾವು ಪ್ರಕರಣ ಮೊದಲಾದ ಗಂಭೀರ ಅಪರಾಧ ಪ್ರಕರಣಗಳಲ್ಲಿ ತನಿಖಾ ಸಹಾಯಕರಾಗಿ ಆರೋಪಿಗಳಿಗೆ‌ ನ್ಯಾಯಾಲಯದಿಂದ ಶಿಕ್ಷೆಯಾಗುವಂತೆ ಕರ್ತವ್ಯ ಸಲ್ಲಿಸಿದ್ದನ್ನು ಪರಿಗಣಿಸಿ ಅವರನ್ನು ಈ‌ ಪದಕಕ್ಕೆ ಆಯ್ಕೆಗೊಳಿಸಲಾಗಿದೆ.

ವೆಂಕಟೇಶ್ ನಾಯ್ಕ್ ಅವರ ಸೇವೆ ಪರಿಗಣಿಸಿ ಇಲಾಖೆಯಿಂದ 17 ಬಾರಿ ನಗದು ಪುರಸ್ಕಾರ, 10 ಬಾರಿ ಪ್ರಶಂಸನಾಪತ್ರ, ಉತ್ತಮ ತನಿಖಾ ಸಹಾಯಕ ಪ್ರಶಸ್ತಿ ಸಹಿತ ಹಲವು ಪುರಸ್ಕಾರಗಳು ಲಭಿಸಿದ್ದವು.

ವೆಂಕಟೇಶ್ ನಾಯ್ಕ್ ಅವರು 1996ರಲ್ಲಿ ಪೊಲೀಸ್‌ ಇಲಾಖೆಗೆ ಸೇರ್ಪಡೆಗೊಂಡು ಉಡುಪಿ ಸಂಚಾರ ಠಾಣೆ, ಉಪ್ಪಿನಂಗಡಿ ಠಾಣೆ, ವಿಟ್ಲ ಠಾಣೆಯಲ್ಲಿ ಕರ್ತವ್ಯ ಸಲ್ಲಿಸಿ 2014ರಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಪದೋನ್ನತಿ ಹೊಂದಿ ಬೆಳ್ತಂಗಡಿ ಠಾಣೆಯಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದಾರೆ.