ಬೆಳ್ತಂಗಡಿ: ಕಳೆದ ಹಲವು ವರ್ಷಗಳಿಂದ ಚಿತ್ರದುರ್ಗದ ಕಲ್ಲಿನ ಕೋಟೆಯನ್ನು ಏರುವ ಮೂಲಕ ಪ್ರವಾಸಿಗರಿಗೆ ತನ್ನ ಸಾಹಸಮಯ ಪ್ರದರ್ಶನ ನೀಡುತ್ತಿರುವ ಚಿತ್ರದುರ್ಗದ ವಿಭಿನ್ನ ಪ್ರತಿಭೆ, ಹಲವಾರು ಪ್ರಶಸ್ತಿಗಳಿಗೆ ಭಾಜನರಾದ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಇಂದು ಬೆಳ್ತಂಗಡಿಯ ಗಡಾಯಿಕಲ್ಲನ್ನು ಏರಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರವಾಸಿ ತಾಣ ಗಡಾಯಿಕಲ್ಲು(ನರಸಿಂಹಗಡ) ವನ್ನು ಏರುವ ಸಾಹಸಕ್ಕೆ ಜ್ಯೋತಿರಾಜ್ ಹಾಗೂ ಅವರ ತಂಡ ಜಿಲ್ಲೆಗೆ ಆಗಮಿಸಿದ್ದು, ಗಡಾಯಿಕಲ್ಲು ಏರಲು ಬೇಕಾದ ಎಲ್ಲಾ ವ್ಯವಸ್ಥೆಗಳ ಬಗ್ಗೆ ಮಾಹಿತಿ ಹಾಗೂ ಕೋಟೆಯ ಹಿನ್ನೆಲೆಯನ್ನು ತಿಳಿದುಕೊಂಡು ಹೊಸ ಸಾಹಸಕ್ಕೆ ಮುಂದಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಕೋತಿರಾಜ್ ಸುಮಾರು ಎಂಟು ಮಂದಿಯ ತಂಡವು ಈ ಕೋಟೆಯನ್ನು ಏರಲಿದ್ದು, ತಂಡದಲ್ಲಿ ಚಿತ್ರದುರ್ಗ ಮೂಲದವರಾದ ನವೀನ್, ನಿಂಗರಾಜು,ಅಭಿ,ಪವನ್,ಜೋಶ್,ಬಸವರಾಜು,ಮದನ್ ಎಂಬವರು ಇದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಐತಿಹಾಸಿಕ ಕೋಟೆಯಾದ ಸರಿ ಸುಮಾರು 1700 ಅಡಿ ಎತ್ತರ ಇರುವ ಗಡಾಯಿಕಲ್ಲನ್ನು ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಅವರು ತಮ್ಮ 8 ಮಂದಿಯ ತಂಡದೊಂದಿಗೆ ಬೆಳ್ತಂಗಡಿಗೆ ಬಂದು ಪೂರ್ವಭಾವಿಯಾಗಿ ವನ್ಯಜೀವಿ ಅರಣ್ಯ ಇಲಾಖೆಯಿಂದ ಅನುಮತಿಯನ್ನು ಪಡೆಯಲಾಗಿದೆ ಮತ್ತು ಶಾಸಕರಾದ ಹರೀಶ್ ಪೂಂಜ ಭೇಟಿಯಾಗಿದ್ದಾರೆ.