ವಿಪತ್ತು ನಿರ್ವಹಣಾ ಘಟಕದಿಂದ ಐತಿಹಾಸಿಕ ಪ್ರವಾಸಿ ತಾಣವಾಗಿರುವ ನರಸಿಂಹಗಢದಲ್ಲಿ ಸ್ವಚ್ಚತಾ ಕಾರ್ಯಕ್ರಮ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಫೆಬ್ರವರಿ ತಿಂಗಳ ಮಾಸಿಕ ಸಭೆ ಭಾನುವಾರ ನಡಗ್ರಾಮದ ನರಸಿಂಹಗಢದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಐತಿಹಾಸಿಕ ಪ್ರೇಕ್ಷಣೀಯ ಸ್ಥಳ ಸ್ವಚ್ಚತೆ ಸಾರುವ ನಿಟ್ಟಿನಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಜೊತೆಗೆ ಆಗಮಿಸಿದ್ದ ಚಾರಣಿಗರಿಗೆ ಮಾಹಿತಿ ನೀಡಲಾಯಿತು.

ಐತಿಹಾಸಿಕ ಪ್ರಸಿದ್ಧವಾದ, 1700 ಅಡಿ ಎತ್ತರದ ನರಸಿಂಹಗಢದಲ್ಲಿರುವ ಗಡಾಯಿ ಕಲ್ಲು ( ಜಮಲಾಬಾದ್ ಕೋಟೆ) ಚಾರಣ ಮತ್ತು ಗಡಾಯಿಕಲ್ಲು ಮೇಲ್ಬಾಗದಲ್ಲಿ ಸ್ವಚ್ಚತಾ ಶ್ರಮದಾನ ನಡೆಸಲಾಯಿತು.

READ ALSO

ಬೆಳಿಗ್ಗೆ 7.30 ಕ್ಕೆ ಚಾರಣಕ್ಕೆ ಚಾಲನೆ ದೊರೆಯಿತು. ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ವಿವೇಕ್ ವಿನ್ಸೆಂಟ್ ಪಾಯ್ಸ್ ಅವರು ಚಾಲನೆ ನೀಡಿ ಸ್ವಯಂಸೇವಕರಿಗೆ ಸ್ಪೂರ್ತಿ ತುಂಬಿದರು.

ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಗೆ ಚಾರಣ ಏರ್ಪಡಿಸಿದ ಉದ್ದೇಶದ ಬಗ್ಗೆ ಮಾಹಿತಿ ನೀಡಿ ವಿಪತ್ತು ಸ್ಪಂದನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ವಿವಿಧ ಘಟಕದ ಸ್ವಯಂಸೇವಕರಿಗೆ ಅಭಿನಂದನೆ ಸಲ್ಲಿಸಿದರು.

ಮೂವತ್ತಾರು ಸ್ವಯಂಸೇವಕರನ್ನು ಒಳಗೊಂಡಿರುವ ತಂಡವನ್ನು ನಾಲ್ಕು ಗುಂಪುಗಳಾಗಿ ವಿಭಾಗಿಸಿ ಚಾರಣ ಆರಂಭಿಸಲಾಯಿತು. ಸಂಯೋಜಕರ ನೇತ್ರತ್ವದಲ್ಲಿ ಸ್ವಯಂಸೇವಕರು ಉತ್ಸಾಹದಿಂದ ಗಗನಮುಖಿಯಾಗಿರುವ ಗುಡ್ಡವನ್ನು ಏರತೊಡಗಿದರು.

ಪ್ರವಾಸಿಗರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಇದೇ ಸಂದರ್ಭದಲ್ಲಿ ಮಾಡಲಾಯಿತು.

ಗುಡ್ಡ ಏರುತ್ತಿರುವಾಗ ಮತ್ತು ಇಳಿಯುತ್ತಿರುವಾಗ ಎದುರಾಗುವ ಪ್ರವಾಸಿಗರಿಗೆ ಸ್ವಚ್ಛತೆಯ ಬಗ್ಗೆ ಪಾಠವನ್ನು ಸ್ವಯಂಸೇವಕರು ಮಾಡಿದರು.

ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಕವರ್ ಗಳನ್ನು, ಬಾಟಲಿಗಳನ್ನು ಎಸೆಯದಂತೆ ಮನವಿ ಮಾಡಿಕೊಳ್ಳಲಾಯಿತು.

ಸುಮಾರು 9.30 ಕ್ಕೆ ಗುಡ್ಡದ ತುದಿಯನ್ನು ಸ್ವಯಂಸೇವಕರ ತಂಡ ತಲುಪಿತ್ತು. ಗುಡ್ಡದ ನಾಲ್ಕೂ ಮೂಲೆಗಳಲ್ಲಿ ಸ್ವಚ್ಚತಾ ಶ್ರಮದಾನ ನಡೆಸಲಾಯಿತು. ಗುಡ್ಡದ ಇಳಿಜಾರಿನಲ್ಲಿ ಅಲ್ಲಲ್ಲಿ ಸಿಲುಕಿರುವ ಪ್ಲಾಸ್ಟಿಕ್ ಕವರ್ ಗಳು, ಬಾಟಲ್ ಗಳನ್ನು ಆರಿಸಿ ಚೀಲದಲ್ಲಿ ತುಂಬಿಸಿಕೊಳ್ಳಲಾಯಿತು. ಸುಮಾರು ಎರಡು ಗಂಟೆಗಳ ಕಾಲ ಶ್ರಮದಾನವನ್ನು ಗುಡ್ಡದ ತುದಿಯಲ್ಲಿ ಮಾಡಲಾಯಿತು.

ಸ್ವಯಂಸೇವಕರ ಶ್ರಮದಾನದ ಸೇವೆಯನ್ನು ಗಮನಿಸಿದ ಕೆಲವು ಪ್ರವಾಸಿಗರು ತಾವು ಸಹ ಕೆಲ ಸಮಯ ಶ್ರಮದಾನದಲ್ಲಿ ಕೈಜೋಡಿಸಿದ್ದು ವಿಶೇಷವಾಗಿತ್ತು.

ದಾರಿಯಲ್ಲಿ ಹಾಗೂ ಮೆಟ್ಟಿಲುಗಳಲ್ಲಿ ಬೆಳೆದು ನಿಂತು ಪ್ರವಾಸಿಗರ ದಾರಿಗೆ ಅಡ್ಡಲಾಗಿದ್ದ ಗಿಡಗಳು, ಮುಳ್ಳು ಕಂಟಿಗಳನ್ನು ತೆರವುಗೊಳಿಸಲಾಯಿತು.

ಕಲ್ಲಿನ ಗುಡ್ಡಗಳ ಮೇಲೆ ಅನಗತ್ಯ ಸಂದೇಶಗಳನ್ನು ಬರೆಯದಂತೆ ಪ್ರವಾಸಿಗರಲ್ಲಿ ಮನವಿ ಮಾಡಿಕೊಳ್ಳಲಾಯಿತು.

ಗುಡ್ಡದ ಮೇಲ್ಬಾಗದಲ್ಲಿ ಇರುವ ಕೆರೆಯ ದಡದಲ್ಲಿ ಪ್ಲಾಸ್ಟಿಕ್ ಬಾಟಲ್ ಗಳು ಹೇರಳವಾಗಿದ್ದು ಆರಿಸಿ ತೆಗೆಯಲಾಯಿತು. ಅಲ್ಲಲ್ಲಿ ಬಿದ್ದ ಮರದ ಗೆಲ್ಲುಗಳನ್ನು ಆರಿಸಿ ಕೆರೆಯ ನೀರಿಗೆ ಬೀಳದಂತೆ ತೆರವುಗೊಳಿಸಲಾಯಿತು.

ಗುಡ್ಡದ ಮೇಲೆ ಆರಿಸಿದ ಎಲ್ಲಾ ಪ್ಲಾಸ್ಟಿಕ್ ಬಾಟಲ್ ಗಳನ್ನು ಹೊತ್ತು ಗುಡ್ಡದ ಕೆಳಭಾಗಕ್ಕೆ ತಂದು ವಿಲೇವಾರಿ ಮಾಡಲಾಯಿತು.

ಅರಣ್ಯ ಇಲಾಖೆಯ ಅಧಿಕಾರಿಗಳು ಚಾರಣ ಮತ್ತು ಶ್ರಮದಾನದಕ್ಕೆ ವಿಶೇಷ ನೆರವು ನೀಡಿರುತ್ತಾರೆ.

ನಡ ಕನ್ಯಾಡಿ ಘಟಕ, ಬೆಳಾಲು ಘಟಕ, ಕೊಕ್ಕಡ ಘಟಕ, ಧರ್ಮಸ್ಥಳ ಘಟಕ, ನಾವೂರು ಘಟಕದ ಸ್ವಯಂಸೇವಕರು ಶ್ರಮದಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರ ಸೇವಾಕಾರ್ಯ ಸರ್ವರ ಪ್ರಶಂಸೆಗೆ ಪಾತ್ರವಾಯಿತು. ಪ್ರವಾಸಿಗರ ಮನ ಗೆದ್ದಿತು.

ಈ ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ಘಟಕದ ರಾಜ್ಯ ನಿರ್ದೇಶಕ ವಿವೇಕ್ ವಿನ್ಸಂಟ್ ಪಾಯಸ್, ಯೋಜನಾಧಿಕಾರಿ ಜೈವಂತ್ ಪಟಗಾರ್, ಜನಜಾಗೃತಿ ಪ್ರಾದೇಶಿಕ ಯೋಜನಾಧಿಕಾರಿ ನಾಗೇಶ್ ಎನ್.ಪಿ, ಉಜಿರೆ ವಲಯದ ಮೇಲ್ವಿಚಾರಕರಾದ ಶ್ರೀಮತಿ ಅಶ್ವಿತಾ, ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ವಸಂತಿ, ಗಿರಿಜಾ ಹಾಗೂ ಕೊರಗಪ್ಪ ಹಾಗೂ ಬೆಳ್ತಂಗಡಿ ವಲಯದ ಸ್ವಯಂಸೇವಕರು ಉಪಸ್ಥಿತರಿದ್ದರು.

🖊️ವರದಿ: ಸ್ವಸ್ತಿಕ್ ಕನ್ಯಾಡಿ