ಬೆಳ್ತಂಗಡಿ: ನೆರಿಯ ಗ್ರಾಮದ ಕುಡುಮಡ್ಕದ ಮನೆಯೊಂದರ ಗೋಡೆಯಲ್ಲಿ ಪತ್ತೆಯಾದ 26 ನಾಗರಹಾವಿನ ಮರಿ ಹಾಗೂ ತಾಯಿ ಹಾವನ್ನು ರಕ್ಷಿಸಿ ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
ಮನೆಯ ಗೋಡೆಯಲ್ಲಿ ಕಳೆದ ಕೆಲವು ದಿನಗಳಿಂದ ನಾಗರಹಾವು ಸುಳಿದಾಡುವುದನ್ನು ಕಂಡ ಶ್ರೀನಿವಾಸಗೌಡ ಎಂಬವರು ಕಕ್ಕಿಂಜೆಯ ಉರಗಮಿತ್ರ, ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯ ಸ್ನೇಕ್ ಅನಿಲ್ ಅವರಿಗೆ ಮೇ 6ರಂದು ಮಾಹಿತಿ ನೀಡಿದರು. ಈ ವೇಳೆ ಆಗಮಿಸಿದ ಅವರು ತಾಯಿ ನಾಗರಹಾವನ್ನು ಹಿಡಿದಿದ್ದು ಈ ವೇಳೆ ಗೋಡೆಯಲ್ಲಿ ಮರಿಗಳು ಕಂಡು ಬಂದವು. ಗೋಡೆಯಲ್ಲಿದ್ದ 26 ಮರಿಗಳನ್ನು ಹಿಡಿದು ಅವುಗಳನ್ನು ತಾಯಿ ಸಹಿತ ಚಾರ್ಮಾಡಿ ಘಾಟಿಯ ಅರಣ್ಯ ಪ್ರದೇಶದ ಸುರಕ್ಷಿತ ಜಾಗದಲ್ಲಿ ಮೇ 7ರಂದು ಬಿಡಲಾಗಿದೆ.





