ಬೆಳ್ತಂಗಡಿ: 20 ವರ್ಷಗಳ ಹಿಂದೆ ಮದ್ಯಪಾನ ಮುಕ್ತ ಸಮಾಜ ನಿರ್ಮಿಸುವ ಉದ್ದೇಶದಿಂದ ಆರಂಭವಾದ ಜನಜಾಗೃತಿ ವೇದಿಕೆ ಆರಂಭದ ಸಂದರ್ಭ ಹಲವು ಸವಾಲುಗಳು ಎದುರಾದವು. ಹಲವರು ಮದ್ಯಪಾನ ಬೇಕು ಎಂದು ಪ್ರತಿಭಟನೆಯನ್ನೂ ನಡೆಸಿದರು. ಇದೀಗ ಎಲ್ಲಾ ಅಡೆ-ತಡೆ, ಸವಾಲುಗಳನ್ನು ದಾಟಿ ಆರೋಗ್ಯವಂತ ಸಮಾಜ ನಿರ್ಮಿಸುವ ಕಾರ್ಯ ಜನಜಾಗೃತಿ ವೇದಿಕೆಯಿಂದ ನಡೆದಿದೆ. ದುಶ್ಚಟಗಳಿಂದ ದೂರವಾದವರಿಗೆ ಸಮಾಜದಲ್ಲಿ ಗೌರವವೂ ಸಿಗುತ್ತಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನುಡಿದರು.
ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ದ.ಕ. ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಂಟಿ ಆಶ್ರಯದಲ್ಲಿ ಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಗಾಂಧಿಸ್ಮೃತಿ ಮತ್ತು ವ್ಯಸನಮುಕ್ತ ಸಾಧಕರ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗಾಂಧೀಜಿಯವರು ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟದ ಸಂದರ್ಭದಲ್ಲಿ ಇದ್ದ ತಾಲೂಕಿನ ಹಲವರು ದೀರ್ಘಾಯುಷ್ಯ ಹೊಂದಿದ್ದರು. ಅವರೆಲ್ಲರೂ ನಿರ್ಭೀತ ವ್ಯಕ್ತಿತ್ವ ಹೊಂದಿದ್ದರ ಫಲವಾಗಿ ಅವರಿಗೆ ದೀರ್ಘಾಯುಷ್ಯ ಲಭ್ಯವಾಗಿತ್ತು. ಧರ್ಮಸ್ಥಳದ ಮೂಲಕ ಹಲವು ಸವಾಲುಗಳನ್ನು ಎದುರಿಸಿ ಹೆಚ್ಚಿನ ಜನತೆಯನ್ನು ದುಶ್ಚಟಗಳಿಂದ ದೂರ ಮಾಡುವ ಯಜ್ಞ ಮಾಡುತ್ತಿದ್ದೇವೆ. ಇದು ಮುಂದುವರಿಯಲಿದೆ ಎಂದರು. ಕೊರೋನಾ ಸಂದರ್ಭದಲ್ಲಿ ಹೋರಾಡಿದವರನ್ನು ಸರಕಾರ ಕೊರೋನಾ ವಾರಿಯರ್ಸ್ ಎಂದು ಪರಿಗಣಿಸಿದೆ. ವ್ಯಸನ ಮುಕ್ತರ ಸಮಾಜ ನಿರ್ಮಿಸುವ ಸಂದರ್ಭದಲ್ಲಿಯೂ ಜನಜಾಗೃತಿ ವೇದಿಕೆ ಸದಸ್ಯರು ಹಲವು ವರ್ಷಗಳಲ್ಲಿ ಹಲವು ರೀತಿಯ ಗಂಭೀರ ಸವಾಲುಗಳನ್ನು ಎದುರಿಸಿದ್ದಾರೆ. ಆದ್ದರಿಂದ ಅವರು ‘ಜನಜಾಗೃತಿ ವಾರಿಯರ್ಸ್’ ಇದ್ದಂತೆ. ಮದ್ಯಪಾನ ಎಂಬುದು ಶಾಪ ಇದ್ದಂತೆ. ಅದರಿಂದ ದೂರವಾದಾಗ ಜನಸಾಮಾನ್ಯರ ಜೀವನದಲ್ಲಿ ದೊಡ್ಡ ಮಟ್ಟ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದರು.

ಸಮಾಜದಲ್ಲಿ ಪರಿವರ್ತನೆ ಸಾಧ್ಯ: ಎಸ್ ಅಂಗಾರ
ಉಸ್ತುವಾರಿ ಸಚಿವ ಎಸ್. ಅಂಗಾರ ಮಾತನಾಡಿ, ಮಹಾತ್ಮಾ ಗಾಂಧಿಯವರು ತಿಳಿಸಿದ ತತ್ವಗಳ ತಾತ್ಪರ್ಯ ಅರಿತು ಕಾರ್ಯನಿರ್ವಹಿಸಿದಾಗ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯ. ಮುಖ್ಯವಾಗಿ ಸ್ವಚ್ಛತೆ, ಮದ್ಯಪಾನ ಮುಕ್ತ ಸಮಾಜ, ಗ್ರಾಮಾಭಿವೃದ್ಧಿ ಮೊದಲಾದ ಚಿಂತನೆಗಳು ಪ್ರಸ್ತುತ ಎಂದರು.ಶ್ರೀ ಕ್ಷೇತ್ರ ಧರ್ಮಸ್ಥದ ಮೂಲಕ ವ್ಯಸನಮುಕ್ತರ ಸಮಾಜ ನಿರ್ಮಿಸುವ ಅತಿ ದೊಡ್ಡ ಕಾರ್ಯ ನಡೆಯುತ್ತಿದೆ. ಜನಗಳ ಮನಃಪರಿವರ್ತನೆ ಮೂಲಕ ಲಕ್ಷಾಂತರ ಕುಟುಂಬಗಳನ್ನು ರಕ್ಷಿಸುವ ಕಾರ್ಯ ಜನಜಾಗೃತಿ ವೇದಿಕೆಯಿಂದ ನಡೆದಿದೆ. ಎಲ್ಲಾ ರೀತಿಯ ಚಟಗಳು ಒಂದೇ, ಆದರೆ ಅದನ್ನು ದೃಢ ಮನಸ್ಸಿನಿಂದ ದೂರ ಮಾಡುವ ಸಂಕಲ್ಪ ಅಗತ್ಯ ಎಂದರು.

ವ್ಯಸನಮುಕ್ತರಾದ ಯಕ್ಷಗಾನ ಕಲಾವಿದ ಜಯರಾಮ ಪಾಟಾಲಿ ಹಾಗೂ ವ್ಯಸನ ಮುಕ್ತ ಕುಟುಂಬದ ಕೀರ್ತನಾ ಅನುಭವ ಹಂಚಿಕೊಂಡರು. ಏಳು ಮಂದಿಗೆ ಜಾಗೃತಿ ಅಣ್ಣ ಹಾಗೂ ಜಾಗೃತಿ ಮಿತ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಕ್ಕಳಿಗೆ ಧಾರ್ಮಿಕ ಕ್ಷೇತ್ರಗಳ ಎಚ್ಚರಿಕೆ ಸಂದೇಶ ನೀಡಬೇಕು: ಮಾಣಿಲ ಶ್ರೀ
ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿ, ಡಾ.ಹೆಗ್ಗಡೆಯವರ ದೂರದರ್ಶಿ ಚಿಂತನೆಗಳಿಂದ ಸಮಾಜದಲ್ಲಿ ಪರಿವರ್ತನೆ ಉಂಟುಮಾಡಲು ಸಾಧ್ಯವಾಗಿದೆ. ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆ ಸ್ಥಾಪನೆ ಇದಕ್ಕೆ ಉತ್ತಮ ಉದಾಹರಣೆ. ಈ ಕಾರ್ಯಗಳ ಮೂಲಕ ಮಹಿಳೆಯರ ಮಕ್ಕಳ ಸಬಲೀಕರಣದೊಂದಿಗೆ ಕುಟುಂಬಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಕಾರ್ಯ ನಡೆದಿದೆ. ಇಂದಿನ ಕಾಲದ ಮಕ್ಕಳಿಗೆ ಹೆತ್ತವರು ಧಾರ್ಮಿಕ ಕ್ಷೇತ್ರಗಳ ಕುರಿತು ಎಚ್ಚರಿಕೆಯಿಂದ ಸಂದೇಶಗಳನ್ನು ನೀಡಬೇಕಾದ ಅವಶ್ಯಕತೆ ಹೆಚ್ಚಾಗಿದೆ ಎಂದರು.
ಗಾಂಧೀಜಿಯವರ ಕನಸು ನನಸು ಮಾಡುವತ್ತ ಮುಂದಡಿ : ಹರೀಶ್ ಪೂಂಜ.

ಶಾಸಕ ಹರೀಶ್ ಪೂಂಜ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗಾಂಧೀಜಿಯವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಪ್ರತಿಯೊಬ್ಬ ವ್ಯಕ್ತಿ ಅಭಿವೃದ್ಧಿ ಹೊಂದಲು ಸಾಧ್ಯ. ಡಾ. ಹೆಗ್ಗಡೆಯವರನ್ನು ನೋಡಿದಾಗ ಗಾಂಧೀಜಿಯವರ ಕನಸು ನನಸು ಮಾಡಿದಂತೆ ತೋರುತ್ತದೆ. ಹೆಗ್ಗಡೆಯವರು ಅಹಿಂಸಾ ಪಾಲಕರಾಗಿದ್ದು, ವ್ಯಸನಮುಕ್ತ ಸಮಾಜ ನಿರ್ಮಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆ, ಸಿರಿ ಮೂಲಕ ಕೊಡುಗೆ ನೀಡುತ್ತಿದ್ದಾರೆ ಅಷ್ಟೇ ಅಲ್ಲದೆ ಸ್ವಚ್ಛ ಸಮಾಜಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಸ್ವಾತಂತ್ರ್ಯ ಬಂದು ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಗಾಂಧೀಜಿಯವರ ಕನಸು ನನಸು ಮಾಡುವತ್ತ ಮುಂದಡಿ ಇಟ್ಟಿದ್ದಾರೆ. ಸ್ವಚ್ಛ ಭಾರತ, ಭೇಟಿ ಬಚಾವೋ, ಭೇಟಿ ಪಡಾವೋ, ಆತ್ಮ ನಿರ್ಭರ ಭಾರತ ಮೊದಲಾದ ಕಾರ್ಯಗಳು ಇದಕ್ಕೆ ಉದಾಹರಣೆಗಳು ಎಂದರು.
ಜನಜಾಗೃತಿ ವೇದಿಕೆಯಿಂದ ಸಾವಿರಾರು ಕುಟುಂಬಗಳಿಗೆ ಬೆಳಕು ಲಭಿಸಿದೆ :ಪ್ರತಾಪ್ ಸಿಂಹ ನಾಯಕ್
ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಜನಜಾಗೃತಿ ವೇದಿಕೆಯಿಂದ ಸಾವಿರಾರು ಕುಟುಂಬಗಳಿಗೆ ಬೆಳಕು ಲಭಿಸಿದೆ. ಪ್ರಾರಂಭದಲ್ಲಿ ಈ ಕಾರ್ಯಕ್ಕೆ ಜನತೆ ಅಪಹಾಸ್ಯ ಮಾಡುತ್ತಿದ್ದರು. ಆದರೆ ಇಂದು ಬದಲಾವಣೆ ಉಂಟಾಗಿದೆ. ವ್ಯಸನಿಗಳ ಮನಃ ಪರಿವರ್ತನೆಯೇ ವೇದಿಕೆಯ ಮೂಲ ಉದ್ದೇಶ. ಸಾವಿರಾರು ಮಂದಿಯ ಜೀವನದಲ್ಲಿ ಬದಲಾವಣೆ ಉಂಟಾಗಿ ಸಮಾಜವೇ ಈ ವೇದಿಕೆಯನ್ನು ಸ್ವೀಕರಿಸುವ ಹಂತಕ್ಕೆ ಬಂದಿದೆ ಎಂದರು.
ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನು ಪಾಲಿಸುವುದು ಅವಶ್ಯ: ಎಲ್.ಹೆಚ್. ಮಂಜುನಾಥ್
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಹೆಚ್. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಗಾಂಧೀಜಿಯವರು ತಿಳಿಸಿದಂತೆ ಪ್ರತಿಯೊಬ್ಬರೂ ಅಹಿಂಸೆ, ಸತ್ಯ, ಆಸ್ಥೇಯ, ಬ್ರಹ್ಮಚರ್ಯ, ಅಪರಿಗ್ರಹ, ಶರೀರಶ್ರಮ, ಆಸ್ವಾದ, ಸರ್ವದ ಭಯ ನಿಗ್ರಹ, ಸರ್ವಧರ್ಮ ಸಮಾನತ, ಸ್ವದೇಶಿ, ಅಸ್ಪೃಶ್ಯತೆ ನಿವಾರಣೆ ಮೊದಲಾದವುಗಳನ್ನು ಪಾಲಿಸುವುದು ಅಗತ್ಯ. ಪ್ರತಿಯೊಬ್ಬರಲ್ಲಿ ಇರುವ ನಾಯಕತ್ವ ಗುಣ ಗುರುತಿಸಿ ಸಮಾಜದ ಬದಲಾವಣೆಗೆ ತೊಡಗಿಕೊಳ್ಳುವಂತೆ ಮಾಡುವುದು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ವಿಶೇಷತೆ ಎಂದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ವಿ. ರಾಮಸ್ವಾಮಿ, ಸಮಾಜ ಸೇವಕ ಆರ್.ಬಿ. ಹೆಬ್ಬಳ್ಳಿ, ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಕೆ. ವಸಂತ ಸಾಲ್ಯಾನ್, ಉಡುಪಿ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್, ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾಯ್ಸ್, ದ.ಕ. ಜಿಲ್ಲಾಧ್ಯಕ್ಷ ಎನ್.ಎ. ರಾಮಚಂದ್ರ, ಡಾ. ಶ್ರೀನಿವಾಸ ಭಟ್, ಬೆಳ್ತಂಗಡಿ ಅಧ್ಯಕ್ಷೆ ಶಾರದಾ ರೈ, ವಿಶ್ವನಾಥ ರೈ, ಮಹಾಬಲ ರೈ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಸ್ವಾಗತಿಸಿ, ಎಸ್.ಕೆ.ಡಿ.ಆರ್.ಡಿ.ಪಿ. ಯೋಜನಾಧಿಕಾರಿ ಜಯಕರ ಶೆಟ್ಟಿ ವಂದಿಸಿದರು. ಎಸ್.ಕೆ.ಡಿ.ಆರ್.ಡಿ.ಪಿ. ಯೋಜನಾಧಿಕಾರಿ ಯಶವಂತ್, ಜನಜಾಗೃತಿ ಪ್ರಾದೇಶಿಕ ವಿಭಾಗ ಯೋಜನಾಧಿಕಾರಿ ಮೋಹನ್ ಕೆ. ಕಾರ್ಯಕ್ರಮ ನಿರೂಪಿಸಿದರು.